ಮಂಗಳೂರು: ಕುಡಿದ ಮತ್ತಿನಲ್ಲಿ ಕಚ್ಚಿ ಪತ್ನಿಯ ಕಣ್ಣು ಕಿತ್ತ ಪಾಪಿ ಪತಿ
ಮಂಗಳೂರು, ಡಿಸೆಂಬರ್ 19: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಹೆಂಡತಿ ಮೇಲೆ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ. ಶಿಶಿಲ ಕೋಟೆ ಬಾಗಿಲು ನಿವಾಸಿ ಸುರೇಶ್ ಗೌಡ ಹೆಂಡಿತಿ ಮೇಲೆ ಹಲ್ಲೆ ನಡೆಸಿರುವ ಆರೋಪಿ ಎಂದು ಗುರುತಿಸಲಾಗಿದೆ.
ನಿನ್ನೆ ತಡರಾತ್ರಿ ಕುಡಿದು ಬಂದ ಸುರೇಶ್ ಗೌಡ ಮನೆಯಲ್ಲಿ ಗಲಾಟೆ ಆರಂಭಿಸಿದ್ದು, 12.45ರ ಹೊತ್ತಿಗೆ ಪತ್ನಿ ಹಾಗೂ ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಕುಡಿದ ಮತ್ತಿನಲ್ಲಿ ಪತ್ನಿಯ ಕಣ್ಣು ಹಾಗೂ ಮುಖದ ಭಾಗಕ್ಕೆ ಕಚ್ಚಿ ಮಾಂಸ ಹೊರ ತೆಗೆದಿದ್ದಾನೆ. ಅಲ್ಲದೇ ಬಳಿಕ ಕೋಲಿನಿಂದ ಹೊಡೆದು ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಿಡಿಸಲು ಬಂದ ಮಗಳ ತಲೆ ಭಾಗ ಹಾಗೂ ಕಣ್ಣಿಗೆ ಹೊಡೆದಿದ್ದಾನೆ. ಈ ವೇಳೆ ಮಗಳು ತಾಯಿ ಪ್ರಾಣ ಉಳಿಸಲು ತಂದೆಯಿಂದ ತಪ್ಪಿಸಿಕೊಂಡು ಹೋಗಿ ನೆರೆ ಹೊರೆಯವರಿಗೆ ವಿಚಾರ ತಿಳಿಸಿದ್ದಾಳೆ.
ಇತ್ತ ಗಂಡನಿಂದ ಜೀವ ಉಳಿಸಿಕೊಳ್ಳಲು ಪತ್ನಿ ಮನೆಯಿಂದ ರಾತ್ರಿಯೇ ಓಡಿ ಹೋಗಿದ್ದು, ಇಂದು ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇನ್ನು ನಿನ್ನೆ ರಾತ್ರಿ ನೆರೆ ಹೊರೆಯವರು ಧಾಮಿಸುತ್ತಿದಂತೆ ಆರೋಪಿ ತೋಟದೊಳಗೆ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ತಾಯಿ ಮಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆ ಸಂಬಂಧ ಬೆಳ್ತಂಗಡಿಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖೋಟಾ ನೋಟು ಚಲಾವಣೆಗೆ ಯತ್ನ: ಆರೋಪಿ ಬಂಧನ
ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿರುವ ಘಟನೆ ಕಂಕನಾಡಿ ಬಳಿಯಲ್ಲಿ ನಡೆದಿದೆ. ಮಂಜೇಶ್ವರ ಆಬುಪಡ್ಪು ನಿವಾಸಿ ಪ್ರಶ್ವಿತ್ (25) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಪ್ರಶ್ವಿತ್ 500, 200 ಮತ್ತು 100 ರೂಪಾಯಿ ಮುಖಬೆಲೆಯ ಖೋಟಾ ನೋಟುಗಳನ್ನು ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ 8 ಖೋಟಾ ನೋಟುಗಳನ್ನು, ಮೊಬೈಲ್ ಹಾಗೂ 4,250 ರೂಪಾಯಿ ಮೌಲ್ಯದ 35 ಅಸಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಈವರೆಗೆ ಸುಮಾರು 8 ರಿಂದ 9 ಸಾವಿರ ರೂಗಳ ಖೋಟಾ ನೋಟುಗಳನ್ನು ಚಲಾವಣೆ ಮಾಡಿದ್ದ ಎನ್ನಲಾಗಿದೆ.












Click it and Unblock the Notifications