Jay Shah : ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಜಯ್ ಶಾ
ದಕ್ಷಿಣ ಕನ್ನಡ, ಜುಲೈ 30: ಬಿಸಿಸಿಐ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಭಾನುವಾರ ರಾಜ್ಯದ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಆಶ್ಲೇಷ ಬಲಿ ಸೇವೆ ಸಮರ್ಪಣೆ ಮಾಡಿದರು.
ಜಯ್ ಶಾ ಅವರು ತಮ್ಮ ಕುಟುಂಬದ ಸದಸ್ಯರ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಪತ್ನಿ ರಿಷಿತಾ ಶಾ ಕೂಡ ಈ ಸಂದರ್ಭದಲ್ಲಿ ಅಮಿತ್ ಶಾ ಜೊತೆಯಾಗಿದ್ದರು. ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮತ್ತು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ ಮಡ್ತಿಲ ಜಯ್ ಶಾ ಅವರ ಜತೆಗಿದ್ದರು.

ಜಯ್ ಶಾ ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ಸಮರ್ಪಿಸಿದಿರು. ನಂತರ ಆಶ್ಲೇಷ ಬಲಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಸತ್ಯನಾರಾಯಣ ನೂರಿತ್ತಾಯ ಜಯ್ ಶಾ ಅವರಿಗೆ ಶಾಲು ಹೊದಿಸಿ, ಗೌರವ ಸಲ್ಲಿಸಿದ, ಪ್ರಸಾದ ನೀಡಿದರು.
ಅಮಿತ್ ಶಾ ಹೆಸರಿನಲ್ಲಿ ದೇಣಿಗೆ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಹೊಸಳಿಗಮ್ಮ ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನದಲ್ಲಿ ಪ್ರಸಾದ ಭೋಜನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ನಡೆಯುವ ನಿತ್ಯ ಅನ್ನ ದಾಸೋಹಕ್ಕೆ ತಮ್ಮ ತಂದೆ, ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರ ಹೆಸರಿನಲ್ಲಿ ದೇಣಿಗೆ ನೀಡಿದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಜಯ್ ಶಾ ಅವರಿಗೆ ಆಡಳಿತ ಕಚೇರಿಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದೆಸಿ, ಪ್ರಸಾದ ನಿಡಿ ಗೌರವಿಸಿದರು.
ದೇವರ ದರ್ಶನದ ಬಳಿಕ ಸಂತಸ
ಇನ್ನು ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಜಯ್ ಶಾ ಅವರು ಸಂತಸ ವ್ಯಕ್ತಪಡಿಸಿದರು. ದೇಶ, ವಿದೇಶಗಳಲ್ಲಿ ಕೂಡ ಪ್ರಖ್ಯಾತಿ ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ದೇವರ ದರ್ಶನ ಪಡೆದದ್ದು ಖುಷಿ ತಂದಿದೆ ಎಂದ ಅವರು, ದೇವರ ದರ್ಶನಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಟ್ಟ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ, ಸದಸ್ಯರಿಗೆ ಮತ್ತು ದೇವಳದ ಆಡಳಿತ ಮಂಡಳಿಗೆ ಧನ್ಯವಾದಗಳನ್ನು ತಿಳಿಸಿದರು.
ಇನ್ನೂ ಅನೇಕ ಬಾರಿ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆಯಬೇಕು ಎನ್ನುವ ಇಚ್ಛೆ ಹೊಂದಿದ್ದೇನೆ, ದೇವರು ಅದನ್ನು ನೆರವೇರಿಸುತ್ತಾರೆ ಎನ್ನುವ ನಂಬಿಕೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications