55 ದಿನಗಳು ಕಳೆದರೂ ಮುಳುಗಿದ ಬಾರ್ಜ್ ಗಿಲ್ಲ ಮುಕ್ತಿ
ಮಂಗಳೂರು, ಜುಲೈ 30: ಉಳ್ಳಾಲ ಮೊಗವೀರ ಪಟ್ಟಣದಲ್ಲಿ ಮುಳುಗಡೆಯಾದ ಬಾರ್ಜ್ ನ್ನು 55 ದಿನಗಳು ಕಳೆದರೂ ಇನ್ನೂ ತೆರವುಗೊಳಿಸಿಲ್ಲ.
ಎರಡು ತಿಂಗಳ ಹಿಂದೆ ಬಾರ್ಜ್ ಮುಳುಗಡೆಯಾಗಿ ಬಾರ್ಜ್ ನಲ್ಲಿ ಸಿಕ್ಕಿಕೊಂಡಿದ್ದ ಎಲ್ಲಾ 27 ಮಂದಿ ಸಿಬ್ಬಂದಿಯನ್ನು ಅಪಾಯದಿಂದ ಪಾರು ಮಾಡಲಾಗಿತ್ತು. ಬಾರ್ಜನ್ನು ಮಳೆಗಾಲ ಕಳೆದ ಬಳಿಕ ಎಳೆಯಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಆದರೆ ಈ ಬಾರ್ಜ್ ಮೀನುಗಾರಿಕಾ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಬಾರ್ಜ್ ಸಂಪೂರ್ಣವಾಗಿ ಮುಳುಗಿಲ್ಲ, ಮೇಲಿನ ಭಾಗ ಇನ್ನೂ ನೀರಿನಿಂದ ಮೇಲೆ ಇದೆ. ಅರ್ಧ ಮುಳುಗಿದ ಬಾರ್ಜ್ ಈಗ ಉಳ್ಳಾಲ ಬೀಚ್ ಸಂದರ್ಶಕರಿಗೆ ಭಾರೀ ಆಕರ್ಷಣೀಯ ಕೇಂದ್ರವಾಗಿದೆ. ದಿನದಿಂದ ದಿನಕ್ಕೆ ಸಂದರ್ಶಕರ ಸಂಖ್ಯೆ ಹೆಚ್ಚಾಗಿದೆ.
ಪ್ರಾರಂಭದಲ್ಲಿ ಧಾತ್ರಿ ಕಂಪೆನಿ ಅಣೆಕಣ್ಣು ನಿರ್ಮಾಣಕ್ಕೆ ಆಸಕ್ತಿ ತೋರಿಸಿತ್ತು; ಬಾರ್ಜ್ ತೆರವುಗೊಳಿಸಲು ನಿರ್ಧರಿಸಿತ್ತು. ಆದರೆ ಸಮುದ್ರದ ಭಾರೀ ಅಲೆಗಳಿಂದಾಗಿ ಈ ನಿರ್ಧಾರದಿಂದ ಹಿಂದೆ ಸರಿದಿತ್ತು.
ತದನಂತರ ಮುಂಬಯಿ ಮತ್ತು ಸಿಂಗಾಪುರದ ತಜ್ಞರ ತಂಡ ಮತ್ತು ಭಾರತೀಯ ನೌಕಾದಳ ಬಾರ್ಜ್ ತೆರವಿಗೆ ಬೇಕಾದ ಉಪಾಯಗಳನ್ನು ಕಂಡು ಹಿಡಿಯಲು ಯತ್ನಿಸಿತ್ತು. ಆದರೆ ಇದೆಲ್ಲವೂ ಸಫಲತೆ ಕಾಣಲಿಲ್ಲ.
"ಬಾರ್ಜ್ ನೀರಿನಿಂದ ಮೇಲ್ಭಾಗದಲ್ಲಿ ಕಾಣಿಸುತ್ತಿರುವುದರಿಂದ ಮೀನು ಗಾರರಿಗೆ ಯಾವುದೇ ಸಮಸ್ಯೆ ಇಲ್ಲ. ಹಾಗಿದ್ದರೂ ಬಾರ್ಜನ್ನು ಹಲವು ಸಮಯಗಳವರೆಗೆ ತೆರವುಗೊಳಿಸದೇ ಇದ್ದರೆ ಬಾರ್ಜ್ ಮುಳುಗಡೆಯಾಗಬಹುದು. ಒಂದು ವೇಳೆ ಬಾರ್ಜ್ ಸಂಪೂರ್ಣ ಮುಳುಗಡೆಯಾದರೆ
ಮೀನುಗಾರರಿಗೆ ತೊಂದರೆಯಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಶೀಘ್ರದಲ್ಲಿ ತೆರವುಗೊಳಿಸಬೇಕು" ಎಂದು ಮೀನುಗಾರ ಮತ್ತು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಹೇಳಿದ್ದಾರೆ.
ಜಿಲ್ಲಾಡಳಿತವು ಧಾತ್ರಿ ಕಂಪೆನಿಯೊಂದಿಗೆ ಸಂಪರ್ಕದಲ್ಲಿದೆ. ಧಾತ್ರಿ ಕಂಪೆನಿ ಬಾರ್ಜ್ ಕುರಿತಾದ ಇತ್ತೀಚಿನ ವರದಿಯನ್ನು ಒಪ್ಪಿಸಿದೆ. ಹಾಗಾಗಿ ಮಳೆಗಾಲದ ನಂತರ ಬಾರ್ಜ್ ತೆರವಿಗೆ ನಿರ್ಧರಿಸಿದ್ದೇವೆ. ಧಾತ್ರಿ ಅಧಿಕಾರಿಗಳ ಪ್ರಕಾರ ಬಾರ್ಜಿನಲ್ಲಿ ಅಷ್ಟೊಂದು ಎಣ್ಣೆ ಇಲ್ಲ. ಸ್ವಲ್ಪ ಪ್ರಮಾಣದ ಎಣ್ಣೆ ಹೊರಸೂಸುವುದರಿಂದ ಪರಿಸರ ವ್ಯವಸ್ಥೆಗೆ ಯಾವುದೇ ಹಾನಿಯಾಗದು" ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆ ಜಿ ಜಗದೀಶ್ ಹೇಳಿದ್ದಾರೆ.












Click it and Unblock the Notifications