ಆನಂದ ಮಹೀಂದ್ರಾ ಆಕರ್ಷಿಸಿದ ಅಡಿಕೆ ಮರವೇರುವ ಬೈಕ್
ಮಂಗಳೂರು, ಜೂನ್ 19: ಬಂಟ್ವಾಳದ ಕೃಷಿಕ ಗಣಪತಿ ಭಟ್ ಅವರು ಆವಿಷ್ಕರಿಸಿರುವ ಅಡಿಕೆ ಮರ ಏರುವ ಬೈಕ್ ಯಂತ್ರ ಭಾರೀ ಸುದ್ದಿ ಮಾಡುತ್ತಿದೆ. ರಾಷ್ಟ್ರಮಟ್ಟದಲ್ಲೂ ಗಣಪತಿ ಭಟ್ ಅವರ ಬೈಕ್ ಯಂತ್ರ ಗಮನ ಸೆಳೆದಿದೆ. ಗಣಪತಿ ಭಟ್ ಅವರ ಅಡಿಕೆ ಮರ ಏರುವ ಬೈಕ್ ಮಹೀಂದ್ರ ಸಂಸ್ಥೆಯ ಅಧ್ಯಕ್ಷ ಆನಂದ ಮಹೀಂದ್ರ ಅವರನ್ನು ಆಕರ್ಷಿಸಿದೆ. ಗಣಪತಿ ಭಟ್ ಅವರ ಆವಿಷ್ಕಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅವರು ಟ್ವೀಟ್ ಮಾಡಿದ್ದಾರೆ.
ತಮ್ಮ ಟ್ವಿಟರ್ ನಲ್ಲಿ ಆನಂದ್ ಮಹೀಂದ್ರ, ಇದೊಂದು ಪರಿಣಾಮಕಾರಿ ಯಂತ್ರದಂತೆ ತೋರುತ್ತಿದೆ. ಉತ್ತಮವಾಗಿ ಕೆಲಸ ನಿರ್ವಹಣೆ ಜೊತೆ ಕಡಿಮೆ ತೂಕದೊಂದಿಗೆ ಸೊಗಸಾಗಿ ವಿನ್ಯಾಸ ಗೊಳಿಸಲಾಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿ ಮತ್ತು ಭಟ್ ಅವರ ಈ ಯಂತ್ರವನ್ನು ನಮ್ಮ ಸಂಸ್ಥೆಯ ಕೃಷಿ ಯಂತ್ರೋಪಕರಣಗಳ ಭಾಗವಾಗಿಸಿ ಮಾರುಕಟ್ಟೆಗೆ ಒದಗಿಸುವ ಬಗ್ಗೆ ಯೋಚಿಸಿ ಎಂದು ತಮ್ಮ ಸಂಸ್ಥೆಯ ತಂತ್ರಜ್ಞರ ತಂಡಕ್ಕೆ ಟ್ವೀಟ್ ಮಾಡಿದ್ದಾರೆ.
ಅಡಿಕೆ ಮರ ಏರಲು ಕೂಲಿ ಕಾರ್ಮಿಕರ ಸಮಸ್ಯೆ ಎದುರಾಗಿರುವ ಇಂದಿನ ದಿನಗಳಲ್ಲಿ ಗಣಪತಿ ಭಟ್ ಅವರು, ಅಡಿಕೆ ಮರಕ್ಕೆ ಅತ್ಯಂತ ಸುಲಭವಾಗಿ ಹತ್ತಿ ಅಡಿಕೆ ಕೀಳುವ ಬೈಕ್ ಮಾದರಿಯ ಯಂತ್ರವೊಂದನ್ನು ಸಿದ್ಧಪಡಿಸಿದ್ದರು. ಈ ಯಂತ್ರದ ಮೂಲಕ ಮಹಿಳೆಯರೂ ಸುಲಭವಾಗಿ ಮರ ಏರಲು ಸಾಧ್ಯವಿದ್ದು, ಯುವತಿಯೋರ್ವಳು ಮರ ಏರುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ದೇಶ ಹಾಗೂ ಹೊರದೇಶಗಳಿಂದಲೂ ಬೇಡಿಕೆ ಬರುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗಣಪತಿ ಭಟ್, ಇದುವರೆಗೆ ಮಹೀಂದ್ರಾ ಕಂಪನಿಯವರು ನನ್ನನ್ನು ಸಂಪರ್ಕಿಸಿಲ್ಲ. ನಾನು ಯಾವುದೇ ಕಂಪನಿಗೆ ಈ ಯಂತ್ರದ ಉತ್ಪಾದನೆ ಹಕ್ಕು ನೀಡುವುದಿಲ್ಲ. ನಾನೇ ಉತ್ಪಾದಿಸಿ ರೈತರಿಗೆ ತಲುಪಿಸುತ್ತೇನೆ. ಅದಕ್ಕಾಗಿ ಪ್ರತ್ಯೇಕ ತಂಡ ರೂಪಿಸುತ್ತೇನೆ ಎಂದಿದ್ದಾರೆ.

ಈ ಯಂತ್ರಕ್ಕೆ ಜಿಲ್ಲೆ, ಹೊರ ಜಿಲ್ಲೆಗಳಿಂದ ಮಾತ್ರವಲ್ಲದೆ ಸಿಂಗಾಪುರ, ಮಲೇಷಿಯಾ, ಬರ್ಮಾ, ದಕ್ಷಿಣ ಆಫ್ರಿಕಾಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ಜನರಿಂದಲೂ ಬೇಡಿಕೆ ಇದೆ. 500 ಯಂತ್ರಗಳಿಗೆ ಬೇಡಿಕೆ ಬಂದಿದ್ದು, ಈಗಾಗಲೇ 50 ಮಂದಿ ಮುಂಗಡ ಹಣ ಪಾವತಿಸಿದ್ದಾರೆ.












Click it and Unblock the Notifications