ಉಂಡ ಮನೆಗೆ ಕನ್ನ ಹಾಕಿದ ನಾಲ್ವರು ಅಂದರ್: ವಂಚನೆ ಹಣದಲ್ಲಿ ಐಷಾರಾಮಿ ಜೀವನ
ಮಂಗಳೂರು ಅಕ್ಟೋಬರ್ 14: ಇತ್ತೀಚಿಗೆ ಉಂಡ ಮನೆಗೆ ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಮನೆ ಕೆಲಸಕ್ಕೆ ಸೇರಿಕೊಂಡು ಕಳ್ಳತನ ಮಾಡುವುದು, ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಗಳಲ್ಲಿ ಸರಕುಗಳನ್ನು ಕದ್ದು ಮಾರುವುದು ಇಂತಹ ಅನೇಕ ಪ್ರಕರಣಗಳು ನಡೆಯುತ್ತಿರುತ್ತದೆ. ಇದೇ ರೀತಿಯ ಘಟನೆ ಮಂಗಳೂರಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಮಂಗಳೂರು ನಗರದ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕಂಪನಿಯಿಂದ ಕೋಟ್ಯಂತರ ರೂಪಾಯಿ ಪ್ಲಾಸ್ಟಿಕ್ ಕಚ್ಚಾ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಸಿಬ್ಬಂದಿ ಸೇರಿದಂತೆ ಇತರ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಪಣಂಬೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ನಗರ ಬಿಜೈ ಕಾಪಿಕಾಡು ನಿವಾಸಿ ಮಹೇಶ್ ಕುಲಾಲ್ ಅಲಿಯಾಸ್ ಮಹೇಶ್ ರಘು ಕುಲಾಲ್(38), ಶಕ್ತಿನಗರ ಕ್ಯಾಸಲಿನ ಕಾಲೋನಿ ರಸ್ತೆ ನಿವಾಸಿ ಅನಂತ ಸಾಗರ(39), ಕಡಂದಲೆ ಪೋಸ್ಟ್ ಪಟ್ಣ ಹೌಸ್ ನಿವಾಸಿ ಸಾಯಿ ಪ್ರಸಾದ್ (35), ಚೆನ್ನೈ ಎಂ.ಕೆ.ಬಿ. ನಗರ ಮೂಲದ ಕಿರಣ್ ಸಮಾನಿ(53) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಕೋಟ್ಯಂತರ ರೂಪಾಯಿ ದೋಚಿದ ಖದೀಮರು
ಬೈಕಂಪಾಡಿಯ ಬ್ರೈಟ್ ಪ್ಯಾಕೆಜಿಂಗ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ಅಗತ್ಯದ ಪಾಲಿಪ್ರೊಪಿಲೀನ್ (Polypropylene) ಎಂಬ ಕಚ್ಚಾ ಸರಕುಗಳನ್ನು ತರಿಸಲಾಗುತ್ತಿದೆ. ಈ ಕಂಪೆನಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಲಾಲ್ ಎಂಬಾತ ಪೋರ್ಜರಿ ದಾಖಲಾತಿಗಳನ್ನು ಸೃಷ್ಟಿಸಿಕೊಂಡು 2019ರ ಡಿಸೆಂಬರ್ ನಿಂದ 2022 ಜನವರಿವರೆಗೆ 36 ಟ್ರಕ್ಗಳಲ್ಲಿ ಬಂದ ಕೋಟ್ಯಾಂತರ ರೂಪಾಯಿ ಮೌಲ್ಯದ ಪಾಲಿಪ್ರೊಪಿಲೀನ್ ಕಚ್ಚಾ ಸರಕುಗಳನ್ನು ಸ್ವೀಕೃತಿಗೊಂಡಂತೆ ಮಾಡಿ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ.

ನಾಲ್ವರ ಖತರ್ನಾಕ್ ವಂಚನೆ ಬಯಲು
ಪಾಲಿಪ್ರೊಪಿಲೀನ್ ಕಚ್ಚಾ ಸರಕುಗಳನ್ನು ಮಹೇಶ್ ಕುಲಾಲ್ ತನ್ನ ಸ್ನೇಹಿತ ಅನಂತ ಸಾಗರ ಎಂಬಾತನಿಗೆ ನೀಡಿದ್ದಾನೆ. ಆತ ಈ ಕಚ್ಚಾ ಸರಕುಗಳನ್ನು ತಾನು ಕೆಲಸ ಮಾಡುವ ಬೈಕಂಪಾಡಿಯ ವಿಧಿ ಎಂಟರ್ ಪ್ರೈಸಸ್ನ ಹೆಸರಿನಲ್ಲಿ ನಕಲಿ ಬಿಲ್ಗಳನ್ನು ಮಾಡಿ ಬೆಂಗಳೂರಿನ ಹೆಚ್.ಎಸ್.ಪಾಲಿಮಾರ್ನ ಆರೋಪಿ ಕಿರಣ್ ಸಾಮಾನಿ ಎಂಬಾತನಿಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸಿಸಿಬಿ-ಪಣಂಬೂರು ಪೊಲೀಸರ ಜಂಟಿ ಕಾರ್ಯಾಚರಣೆ
ಆರೋಪಿಗಳು ಕೋಟ್ಯಂತರ ರೂಪಾಯಿ ಮೌಲ್ಯದ 36 ಲೋಡ್ 840 ಟನ್ ಪಾಲಿಪ್ರೊಪಿಲೀನ್ (Polypropylene) ಕಚ್ಚಾ ಸರಕುಗಳನ್ನು ಕಂಪನಿಗೆ ಗೊತ್ತಿಲ್ಲದೆ ಕಳವು ಮಾಡಿ ಮಾರಾಟ ಮಾಡಿರುತ್ತಾರೆ. ಈ ಬಗ್ಗೆ ಕಂಪನಿ ಮಾಲೀಕರಿಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ದೂರು ದಾಖಲಿಸಿದ್ದಾರೆ. ಕಂಪನಿ ಮಾಲೀಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಹಾಗೂ ಪಣಂಬೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ಪ್ರಮುಖ ಆರೋಪಿಯ ಆಸ್ತಿಯ ವಿವರ
ಆರೋಪಿ ಮಹೇಶ್ ಕುಲಾಲ್ ಕಂಪನಿಗೆ ಮೋಸ ಮಾಡಿ ಬಂದಿರುವ ಹಣದಲ್ಲಿ ಮಂಗಳೂರಿನ ವಿವಿಧೆಡೆ ಜಮೀನು ಖರೀದಿ ಮಾಡಿದ್ದಲ್ಲದೆ, ದುಬಾರಿ ಕಾರುಗಳನ್ನು ಖರೀದಿಸಿ ಐಶಾರಾಮಿ ಜೀವನ ನಡೆಸುತ್ತಿದ್ದನು. ಅಲ್ಲದೇ ತನ್ನ ಪತ್ನಿಯ ಹೆಸರಿನಲ್ಲಿ ಬ್ಯಾಂಕ್ನಲ್ಲಿ ಹಣ ಠೇವಣಿ ಇರಿಸಿ, ಇನ್ಸೂರೆನ್ಸ್, ಶೇರ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಿರುತ್ತಾನೆ. ಪತ್ನಿಯ ಹೆಸರಿನಲ್ಲಿ ನಗರದ 3 ಕಡೆಗಳಲ್ಲಿ ಐಷಾರಾಮಿ ಸೆಲೂನ್ಗಳನ್ನು ಆರಂಭಿಸಿದ್ದಾನೆ. ಇನ್ನು ಮತ್ತೋರ್ವ ಆರೋಪಿ ಅನಂತ ಸಾಗರ್ ಐಷಾರಾಮಿ ಮನೆಯನ್ನು ಕಟ್ಟಿಸಿ ದುಬಾರಿ ಕಾರನ್ನು ಖರೀದಿ ಮಾಡಿ ಐಶಾರಾಮಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.

ವಂಚಕರನ್ನು ಜೈಲಿಗಟ್ಟಿದ ಪೊಲೀಸರು
ಸದ್ಯ ಸಿಸಿಬಿ ಪೊಲೀಸರು ಹಾಗೂ ಪಣಂಬೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಬಂಧಿತ ಆರೋಪಿಗಳಿಂದ ಆರು ಮೊಬೈಲ್ ಪೋನ್ಗಳು, 4 ಲ್ಯಾಪ್ ಟಾಪ್ಗಳು, 1 ಕಂಪ್ಯೂಟರ್, ಮಹೇಶ್ ಕುಲಾಲ್ಗೆ ಸೇರಿದ ಹುಂಡೈ ಕಂಪೆನಿಯ ಕಾರು, ರೆನಾಲ್ಡ್ ಕಾರು, ಅನಂತ ಸಾಗರ್ಗೆ ಸೇರಿದ ಸೆಲ್ಟೋಸ್ ಕಾರು, ಟಾಟಾ ಕಂಪೆನಿಯ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ವಾಸ್ತುಗಳ ಮೌಲ್ಯ ಸರಿಸುಮಾರು 74 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.












Click it and Unblock the Notifications