ಮಂಗಳೂರಿನಿಂದ ಝೀರೋ ಟ್ರಾಫಿಕ್ ನಲ್ಲಿ ಬಂದಿದ್ದ ಮಗುವಿಗೆ ಯಶಸ್ವಿ ಚಿಕಿತ್ಸೆ
ಮಂಗಳೂರು, ಫೆಬ್ರವರಿ 17: ಕೆಲವೇ ದಿನಗಳ ಹಿಂದೆ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪುಟ್ಟ ಮಗುವನ್ನು ಮಂಗಳೂರಿನಿಂದ ಬೆಂಗಳೂರಿಗೆ ಆಂಬುಲೆನ್ಸ್ ನಲ್ಲಿ ಝೀರೋ ಟ್ರಾಫಿಕ್ ನಲ್ಲಿ ಕರೆದುಕೊಂಡು ಬರಲಾಗಿತ್ತು. ಸ್ವಯಂ ಪ್ರೇರಕವಾಗಿ ಜನರು ಝೀರೋ ಟ್ರಾಫಿಕ್ ಮಾಡಿಕೊಟ್ಟು ಸ್ಪಂದಿಸಿದ್ದರು.
ಇದೀಗ ಆ ಮಗು ಆರೋಗ್ಯವಾಗಿದ್ದು, ಜಯದೇವ ಆಸ್ಪತ್ರೆಯ ವೈದ್ಯರ ತಂಡ ಮಗುವನ್ನು ಆತ್ಮೀಯವಾಗಿ ಆಸ್ಪತ್ರೆಯಿಂದ ಕಳುಹಿಸಿಕೊಟ್ಟಿದ್ದಾರೆ. ಫೆಬ್ರವರಿ 6ರಂದು 40 ದಿನದ ಮಗುವನ್ನು ಕರೆದುಕೊಂಡು ಬರಲಾಗಿತ್ತು. ವೈದ್ಯರು ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ವೈದ್ಯರ ತಂಡ ಮಗುವನ್ನು ಕಳುಹಿಸಿಕೊಟ್ಟಿದೆ.
ಸೈಫುಲ್ ಅಝ್ಮಾನ್ ಎಂಬ ಪುಟ್ಟ ಮಗುವಿಗೆ ಓಪನ್ ಹಾರ್ಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಫೆಬ್ರವರಿ 7ರಂದು 12 ಜನರ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದ್ದರು. ಇದೀಗ ಮಗು ಆರೋಗ್ಯವಾಗಿ ಹಿಂದಿರುಗಿದೆ. ಮಗುವಿನ ಚಿಕಿತ್ಸೆಗೆ ಒಂದೂವರೆ ಲಕ್ಷ ರೂ. ಖರ್ಚಾಗಿದೆ. ಇದರಲ್ಲಿ ಬಿಪಿಎಲ್ ವರ್ಗದಿಂದ 1,20,000 ರೂಪಾಯಿ ಸಿಕ್ಕಿದೆ. ಉಳಿದ ಹಣವನ್ನು ಜಯದೇವ ಆಸ್ಪತ್ರೆಯ ಆಂತರಿಕ ಸಂಪನ್ಮೂಲದಿಂದ ನೀಡಲಾಗಿದೆ.

"ಮಂಗಳೂರಿಂದ ಇಲ್ಲಿಗೆ ಬರುವಾಗ ಮಗುವಿನ ಜೀವದ ಬಗ್ಗೆ ಭರವಸೆಯಿರಲಿಲ್ಲ. ವೈದ್ಯರು ನಮ್ಮ ಮಗುವನ್ನು ಉಳಿಸಿದ್ದಾರೆ. ತುಂಬಾ ಖುಷಿಯಾಗುತ್ತಿದೆ" ಎಂದು ಸಂತಸ ವ್ಯಕ್ತಪಡಿಸಿದರು ಮಗುವಿನ ಪೋಷಕರು.












Click it and Unblock the Notifications