ಆಟೋ ಓಡಿಸಿ ಡಾಕ್ಟರೇಟ್ ಪದವಿ ಪಡೆದ ಮಂಗಳೂರಿನ ಯುವಕ
ಮಂಗಳೂರು, ಏಪ್ರಿಲ್ 18: ವಿದ್ಯೆ ಎಲ್ಲರ ತಲೆಗೂ ಹತ್ತಲ್ಲ, ವಿದ್ಯೆ ಸಿದ್ಧಿಸಿಕೊಂಡವರಿಗೆ ನೂರಾರು ಅಡೆತಡೆಗಳು ಬರುತ್ತದೆ. ಅದರಲ್ಲೂ ಮಧ್ಯಮ ಕುಟುಂಬದವರಿಗೆ ಉನ್ನತ ಶಿಕ್ಷಣ ಅನ್ನೋದು ಗಗನ ಕುಸುಮವಾಗಿ ಬಿಡುತ್ತದೆ. ಆದರೆ, ಬಂದಂತಹ ಅಡೆತಡೆಗಳನ್ನೆಲ್ಲವನ್ನೂ ಮೆಟ್ಟಿ ನಿಂತು ಯಶಸ್ಸಿನ ಗುರಿ ಮುಟ್ಟಿದ ಕರಾವಳಿಯ ವಿದ್ಯಾ ಸಾಧಕನ ಕಥೆ ಇದು.
ನಿಯಾಜ್ ಪಣಕಜೆ ಎಂಬ ಯುವಕ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ನಿಯಾಜ್ ಪಣಕಜೆ ಈಗ ಡಾ.ನಿಯಾಜ್ ಪಣಕಜೆಯಾಗಿ ಬದಲಾದ ಹಾದಿ ಬಹಳ ರೋಚಕರವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಣಕಜೆ ನಿವಾಸಿ ನಿಯಾಜ್ ಬೆಳೆದು ಬಂದ ಹಾದಿ ಹೂವಿನ ಹಾದಿಯಾಗಿರಲಿಲ್ಲ. ಆದರೆ ಛಲ ಮಾತ್ರ ನಿಶ್ಚಲವಾಗಿತ್ತು. ಹೀಗಾಗಿ ಬಡತನವನ್ನೇ ಸವಾಲಾಗಿಸಿ ಕಲಿಕೆಯ ಏಕೈಕ ಉದ್ದೇಶದಿಂದ ಕೂಲಿ ಕೆಲಸ ಮಾಡಿ ತನ್ನ ಕನಸನ್ನು ನನಸಾಗಿಸಿದ್ದಾರೆ.

ಅನಾರೋಗ್ಯ ಪೀಡಿತ ತಂದೆ, ಬೀಡಿ ಕಟ್ಟಿ ಮಕ್ಕಳ ಹೊಟ್ಟೆಗೆ ಉಣಬಡಿಸುತ್ತಿದ್ದ ತಾಯಿ. ಇದರ ನಡುವೆ ವಿದ್ಯೆಯ ಹುಚ್ಚು ಆವರಿಸಿದ್ದ ನಿಯಾಜ್ ಶಾಲೆಯ ನಡುವೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಉನ್ನತ ಶಿಕ್ಷಣ ಪಡೆಯುವವರೆಗೂ ಕೂಲಿ ಕೆಲಸ ಮಾಡುತ್ತಿದ್ದರು. ಬಾವಿ ತೋಡುವುದು, ಮಣ್ಣು ಎತ್ತವುದು, ಪರಿಸರ ಸ್ವಚ್ಛತೆ, ಸೈಕಲ್ ರಿಪೇರಿ, ಗಾರೆ ಕೆಲಸ, ಮೀನು ಮಾರಾಟ, ಬೆಳಗಿನ ಜಾವ ಹಾಲು, ಪೇಪರ್ ಮಾರಾಟ, ಸಂಜೆ ಆಟೋ ರಿಕ್ಷಾದಲ್ಲಿ ದುಡಿಮೆ, ಉನ್ನತ ಶಿಕ್ಷಣ ವಿಧ್ಯಾಭ್ಯಾಸದ ವೇಳೆ ಲಾಡ್ಜ್ ನಲ್ಲಿ ರಿಸೆಪ್ಷನಿಸ್ಟ್ ಹೀಗೆ ಎಲ್ಲಾ ಕೆಲಸ ಮಾಡಿ ನಿಯಾಝ್ ವಿದ್ಯಾಭ್ಯಾಸ ಪೂರೈಸಿದ್ದಾರೆ.

ಪ್ರಸ್ತುತ ಮಂಗಳೂರಿನ ಶ್ರೀನಿವಾಸ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಕಾಮರ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿರುವ ನಿಯಾಜ್ ಮಂಡಿಸಿರುವ ರೋಲ್ ಆಫ್ ಕೋ-ಆಪರೇಟಿವ್ ಬ್ಯಾಂಕಿಗ್ ಇನ್ ಸೋಷಿಯೋ ಎಕಾನಾಮಿಕ್ ಡೆವಲಪ್ಮೆಂಟ್ ಆಫ್ ರೂರಲ್ ಮುಸ್ಲಿಂ ಕಮ್ಯನಿಟೀಸ್-ಎ ಸ್ಟಡಿ ಇನ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್ ಆಫ್ ಕರ್ನಾಟಕ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.











Click it and Unblock the Notifications