ಅಕ್ರಮ ಟೋಲ್ ಸಂಗ್ರಹದ ವಿರುದ್ಧ ವಿಭಿನ್ನ ಪ್ರತಿಭಟನೆ ಮಾಡಿದ ಮಂಗಳೂರಿನ 'ಆಪದ್ಬಾಂಧವ'
ಮಂಗಳೂರು, ಫೆಬ್ರವರಿ 15: ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿರುವ ಸುರತ್ಕಲ್ ಟೋಲ್ಗೇಟ್ ತೆರವು ಮಾಡಬೇಕೆಂದು ಮಂಗಳೂರಿನ ವ್ಯಕ್ತಿಯೊಬ್ಬರು ವಿಭಿನ್ನ ರೀತಿಯಲ್ಲಿ ಮುಷ್ಕರ ಕೈಗೊಂಡಿದ್ದಾರೆ. 'ಆಪದ್ಬಾಂಧವ' ಎಂದೇ ಹೆಸರು ವಾಸಿಯಾಗಿರುವ ಸಾಮಾಜಿಕ ಕಾರ್ಯಕರ್ತ ಆಸೀಫ್ ಅಕ್ರಮ ಟೋಲ್ ತೆರವಿಗಾಗಿ ಹೋರಾಟ ಆರಂಭಿಸಿದ್ದಾರೆ.
ಸಾರ್ವಜನಿಕರಿಗೆ ಕಂಟಕವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಟೋಲ್ ಗೇಟ್ ಅನ್ನು ಸರ್ಕಾರ ತೆರವು ಮಾಡುವವರೆಗೆ ಈ ಮುಷ್ಕರ ಅನಿಯಮಿತವಾಗಿ ಮುಂದುವರೆಸುತ್ತೇನೆ. ಟೋಲ್ ತೆರವಾಗದಿದ್ದಲ್ಲಿ ವಿಷ ಕುಡಿಯುವುದಕ್ಕೂ ತಯಾರಿದ್ದೇನೆ ಎಂದು ಆಪದ್ಬಾಂಧವ ಆಸೀಫ್ ಹೇಳಿದ್ದಾರೆ.
ಹಾಸನ: ಟೋಲ್ ಹೆಸರಿನಲ್ಲಿ ಸಿಬ್ಬಂದಿಯಿಂದ ಅಕ್ರಮ ಹಣ ವಸೂಲಿ; ಸ್ಥಳೀಯರ ಆಕ್ರೋಶ
ಸುರತ್ಕಲ್ ಟೋಲ್ ಗೇಟ್ನಿಂದ 9 ಕಿ.ಮೀ ದೂರದ ಹೆಜಮಾಡಿ ಟೋಲ್ ಗೇಟ್ ಆರಂಭವಾದ ಬಳಿಕ ಸುರತ್ಕಲ್ ಟೋಲ್ ಗೇಟ್ ಮುಚ್ಚುವ ಒಪ್ಪಂದದೊಂದಿಗೆ ತಾತ್ಕಾಲಿಕವಾಗಿ ಸುರತ್ಕಲ್ ಟೋಲ್ ಗೇಟ್ ಕಾರ್ಯಾಚರಣೆ ಮಾಡಿತ್ತು. ಆದರೆ, ಹೆಜಮಾಡಿ ಟೋಲ್ ಗೇಟ್ ಆರಂಭವಾಗಿ ಮೂರು ವರ್ಷಗಳು ಕಳೆದರೂ ಇನ್ನೂ ಸುರತ್ಕಲ್ ಟೋಲ್ ಗೇಟ್ನಲ್ಲಿ ಸುಂಕ ವಸೂಲಾತಿ ಮುಂದುವರಿಯುತ್ತಲೇ ಇದೆ.
ಟೋಲ್ ಗೇಟ್ ತೆರವಿಗೆ ಎರಡು ವರ್ಷಗಳಿಂದ ಹೋರಾಟ
ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ಕಳೆದ ಎರಡು ವರ್ಷಗಳಿಂದ ಸಾಕಷ್ಟು ಹೋರಾಟ, ಮುಷ್ಕರ ನಡೆದಿತ್ತು. ಆದರೆ, ಆಡಳಿತ ನಡೆಸುವ ಸರ್ಕಾರದಿಂದ ಯಾವುದೇ ಸ್ಪಂದನೆ ದೊರಕಿರಲಿಲ್ಲ. ಇದೀಗ ಈ ಟೋಲ್ ಗೇಟ್ ತೆರವು ಮಾಡಬೇಕೆಂದು 'ಆಪದ್ಬಾಂಧವ' ಆಸೀಫ್ ಬೀದಿಗಿಳಿದಿದ್ದಾರೆ.
ಫೆ.7ರಿಂದ ಇವರು ಟೋಲ್ ಗೇಟ್ನಲ್ಲಿ ಮುಷ್ಕರ ಆರಂಭಿಸಿದ್ದು, ಟೋಲ್ ತೆರವು ಆದೇಶ ಬರುವವರೆಗೆ ಈ ಮುಷ್ಕರವನ್ನು ಮುಂದುವರಿಸಲಾಗುತ್ತದೆ ಎಂದು ಆಸೀಫ್ ಹೇಳಿದ್ದಾರೆ. ಆಪದ್ಬಾಂಧವ ಆಸೀಫ್ ಮೂರು ದಿನಗಳಿಂದ ಸಾಂಕೇತಿಕ ಮುಷ್ಕರ ಮಾಡಿದ್ದರು. ಆ ಬಳಿಕ ಕೆಸರು ನೀರಿನಲ್ಲಿ ಹೊರಳಾಟ, ಅಣಕು ಮೃತದೇಹ ಪ್ರದರ್ಶನ, ಜೀವಂತ ಸಮಾಧಿ, ಸಂಕೋಲೆಯ ಬೇಡಿ, ಗಾಜಿನ ಚೂರಿನ ಮೇಲೆ ಮಲಗಿರುವುದು, ಟ್ಯೂಬ್ ಲೈಟ್ ಮೇಲೆ ಮಲಗಿರುವುದು, ಟೋಲ್ ಮಾಫಿಯಾ ಎಂಬ ಬ್ರಿಟಿಷರ ದಾಳಿ ಹೀಗೆ ದಿನವೂ ಭಿನ್ನ ರೀತಿಯ ಮುಷ್ಕರ ನಡೆಸುತ್ತಿದ್ದಾರೆ.
ಮುಷ್ಕರಕ್ಕೆ ಟ್ರಕ್ ಮಾಲೀಕರ ಸಂಘ ಬೆಂಬಲ
ತನ್ನ ಹೋರಾಟದ ಬಗ್ಗೆ ಮಾತನಾಡಿದ ಆಪದ್ಬಾಂಧವ ಆಸೀಫ್, "ಸದ್ಯಕ್ಕೆ ಏಕಾಂಗಿಯಾಗಿ ಮುಷ್ಕರ ಆರಂಭಿಸಿದ್ದೇನೆ. ಅನಿವಾರ್ಯವಾದಲ್ಲಿ ಮತ್ತಷ್ಟು ಜನ ಸೇರಿಸಿ ಮುಷ್ಕರ ನಡೆಸಲಾಗುತ್ತದೆ. ಈ ಮುಷ್ಕರಕ್ಕೆ ಟ್ರಕ್ ಮಾಲೀಕರ ಸಂಘ, ಟ್ರ್ಯಾಕ್ಸ್ ಅಸೋಸಿಯೇಷನ್, ಬಸ್ ಮಾಲೀಕರ ಸಂಘ ಹೀಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ. ಜಿಲ್ಲಾಡಳಿತ ತಕ್ಷಣ ಈ ಹೋರಾಟಕ್ಕೆ ಸ್ಪಂದನೆ ನೀಡಬೇಕು. ಜಿಲ್ಲಾಧಿಕಾರಿ, ಮುಷ್ಕರ ಮಾಡುವ ಸ್ಥಳಕ್ಕೆ ಬಂದು ಟೋಲ್ ತೆರವು ಮಾಡಿಸುವ ಆದೇಶದ ಪ್ರತಿ ನೀಡುವ ತನಕ ಹೋರಾಟ ಮುಂದುವರೆಸುತ್ತೇನೆ. ಒಂದು ವೇಳೆ ಬೇಡಿಕೆಗೆ ಸ್ಪಂದನೆ ನೀಡದಿದ್ದಲ್ಲಿ ವಿಷ ಪ್ರಾಷಣ ಮಾಡಿ ಸಾಯಲು ಸಿದ್ಧನಿದ್ದೇನೆ," ಎಂದು ಹೇಳಿದ್ದಾರೆ.
ನೆಲಮಂಗಲ- ಹಾಸನ ರಾಷ್ಟ್ರೀಯ ಹೆದ್ದಾರಿ-75ರ ಟೋಲ್ ದರ ಹೆಚ್ಚಳ
ಟೋಲ್ ಗೇಟ್ಗೆ 60 ಕಿ.ಮೀ ಅಂತರವಿರಬೇಕು
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ ಪ್ರಕಾರ ಒಂದು ಟೋಲ್ ಗೇಟ್ನಿಂದ ಮತ್ತೊಂದು ಟೋಲ್ ಗೇಟ್ಗೆ 60 ಕಿ.ಮೀ ಅಂತರವಿರಬೇಕು. ಆದರೆ ಮಂಗಳೂರು ತಾಲೂಕಿನ ಸುತ್ತಮುತ್ತ 48 ಕಿ.ಮೀ ಅಂತರದಲ್ಲಿ 4 ಟೋಲ್ ಗೇಟ್ಗಳಿದ್ದು, ಹಗಲು ದರೋಡೆ ನಡೆಯುತ್ತಿದೆ. ಕೇರಳ ಗಡಿಭಾಗ ತಲಪಾಡಿಯಿಂದ ಹೆಜಮಾಡಿ ಟೋಲ್ ಗೇಟ್ಗೆ ಇರುವ ದೂರ 48 ಕಿ.ಮೀ ಆಗಿದೆ. ಇದರ ಮಧ್ಯೆ ಸುರತ್ಕಲ್ ಟೋಲ್ ಗೇಟ್ ಬರುತ್ತದೆ. ಎನ್ಐಟಿಕೆಯಿಂದ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ಗೆ ಇರುವ ದೂರ 38 ಕಿ.ಮೀ ದೂರವಾಗಿದೆ.
ಗುತ್ತಿಗೆ ಆಧಾರದಲ್ಲಿ ಟೋಲ್ ಸಂಗ್ರಹ
ಸುರತ್ಕಲ್ನಿಂದ ಬಂಟ್ವಾಳ ಚತುಷ್ಪಥ ರಸ್ತೆಯನ್ನು ಇರ್ಕಾನ್ ಸಂಸ್ಥೆ ನಿರ್ಮಾಣ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಬಿಟ್ಟು ಕೊಟ್ಟು, ಈಗ ಪ್ರಾಧಿಕಾರ ಗುತ್ತಿಗೆ ಆಧಾರದಲ್ಲಿ ಟೋಲ್ ಸಂಗ್ರಹಿಸುತ್ತಿದೆ. ಹೆಜಮಾಡಿ- ತಲಪಾಡಿ ಹೆದ್ದಾರಿಯನ್ನು ನವಯುಗ ಸಂಸ್ಥೆ ಬಿಒಟಿ ಒಪ್ಪಂದದಲ್ಲಿ ನಿರ್ಮಿಸಿದೆ. ಇರ್ಕಾನ್ ಸಂಸ್ಥೆ ನಿಮಿಸಿದ ಸುರತ್ಕಲ್- ಬ್ರಹ್ಮರಕೂಟ್ಲು ಟೋಲ್ ಗೇಟ್ಗೆ ಕೇವಲ 30 ಕಿ.ಮೀ ಅಂತರವಿದ್ದು, ಎರಡೂ ಕಡೆಯೂ ಸುಂಕ ವಸೂಲಿ ಮಾಡುತ್ತಿರುವುದು ನಿಯಮ ಬಾಹಿರವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಲೀಸ್ಟ್ನಲ್ಲಿ ಸುರತ್ಕಲ್ ಟೋಲ್ನ ಹೆಸರೇ ಇಲ್ಲದಿದ್ದರೂ, ಗುತ್ತಿಗೆದಾರರು ಹಣ ಸಂಗ್ರಹಿಸುತ್ತಿರುವುದರ ಹಿಂದೆ ಭಾರೀ ಲಾಬಿ ಇರುವ ಬಗ್ಗೆ ಸಂಶಯ ಎದುರಾಗಿದೆ. 2018ರಲ್ಲೇ ಈ ಟೋಲ್ ಗೇಟ್ನ್ನು ಹೆಜಮಾಡಿ ಟೋಲ್ಗೆ ವಿಲೀನ ಮಾಡಲು ಸರ್ಕಾರ ನಿರ್ದೇಶನ ಕೊಟ್ಟಿದ್ದರೂ ಟೋಲ್ ಸಂಗ್ರಹವಾಗುತ್ತಿದೆ ಅನ್ನುವುದು ಸಾಮಾಜಿಕ ಹೋರಾಟಗಾರರ ಆರೋಪವಾಗಿದೆ.