ಮತ್ತೆ ಶುರುವಾಗಿದೆ ಆನೆದಂತ ಚೋರರ ಜಾಲ; ಬೆಳ್ತಂಗಡಿಯಲ್ಲಿ 30 ಲಕ್ಷ ಮೌಲ್ಯದ ಆನೆದಂತ ವಶಕ್ಕೆ
ಮಂಗಳೂರು, ಜನವರಿ 08: ಅಕ್ರಮವಾಗಿ ಆನೆ ದಂತ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿ, ಅವರಿಂದ 30 ಲಕ್ಷ ರೂ. ಮೌಲ್ಯದ ಎರಡು ಆನೆ ದಂತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿಯ ಹೆರವನಾಡು ಗ್ರಾಮದ ಅಪ್ಪಂಗಳ ನಿವಾಸಿ ಪಿ.ಕೆ.ದಿನೇಶ (33), ಸಕಲೇಶಪುರ ತಾಲೂಕಿನ ನಡಹಳ್ಳಿ ಗ್ರಾಮದ ಕುಂಬರಡಿ ನಿವಾಸಿ ವಿ.ಕುಮಾರ (37) ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬೆಳ್ತಂಗಡಿ ತಾಲ್ಲೂಕು ಧರ್ಮಸ್ಥಳದ ಪುದುವೆಟ್ಟು ಎಂಬಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.

ಅವರಿಂದ ಎರಡು ಆನೆ ದಂತ, ಓಮ್ನಿ ಕಾರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಪುತ್ತೂರು ಅರಣ್ಯ ಸಂಚಾರಿ ದಳದ ಸಿಬಂದಿ ಸುಂದರ್ ಶೆಟ್ಟಿ, ವಿಜಯ ಸುವರ್ಣ, ಉದಯ, ರಾಧಕೃಷ್ಣಾ ಅವರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪುದುವೆಟ್ಟು, ನೆರಿಯಾ, ದಿಡುಪೆ, ಚಾರ್ಮಾಡಿ ಘಾಟ್ ಪರಿಸರದಲ್ಲಿ ಆನೆಗಳ ಓಡಾಟ ಹೆಚ್ಚಿರುವ ನಡುವೆಯೇ ಆನೆ ದಂತ ಚೋರರು ಸೆರೆಯಾಗಿರುವುದರಿಂದ ಮತ್ತಷ್ಟು ಅನುಮಾನಕ್ಕೆ ಆಸ್ಪದ ನೀಡಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಉಜಿರೆ ಸಮೀಪ ಮನೆಯೊಂದರ ಶೆಡ್ ನಲ್ಲಿ ಇರಿಸಲಾಗಿದ್ದ 51.730 ಕೆ.ಜಿ. ತೂಕದ ಆನೆ ದಂತಗಳನ್ನು ವಶಪಡಿಸಿಕೊಂಡು, ಮೂವರು ಆರೋಪಿಗಳನ್ನು ಮಂಗಳೂರು ವಿಶೇಷ ಅರಣ್ಯ ಸಂಚಾರಿ ದಳದವರು ಬಂಧಿಸಿದ್ದರು. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಆನೆ ದಂತಚೋರರ ಜಾಲ ಎಲ್ಲೆಡೆ ವಿಸ್ತರಿಸಿರುವುದರ ಬಗ್ಗೆ ಇಲಾಖೆ ಮತ್ತಷ್ಟು ತನಿಖೆ ನಡೆಸುತ್ತಿದೆ.












Click it and Unblock the Notifications