ಹಿಂದೂ ನಾಯಕರ ಬಂಧನ ಯತ್ನ- ಸಂಸದ ನಳಿನ್ ಪ್ರವಾಸ ಮೊಟಕು
ಮಂಗಳೂರು, ಜುಲೈ 12: ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ನಾಯಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್ಕುಮಾರ್ ಕಟೀಲ್ ತಮ್ಮ ರಷ್ಯಾ ಪ್ರವಾಸ ಮೊಟಕುಗೊಳಿಸಿ ಬುಧವಾರ ಮಂಗಳೂರಿಗೆ ವಾಪಾಸಾಗಲಿದ್ದಾರೆ.
ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ನೇತ್ರತ್ವದ ಸಂಸದೀಯ ನಿಯೋಗದ ಜತೆ ಸಂಸದರು ರಷ್ಯಾಕ್ಕೆ ತೆರಳಿದ್ದರು. 3 ದಿನಗಳ ಕಾಲ ರಷ್ಯಾ ಫೆಡರೇಶನ್ನ ವಿವಿಧ ಸಭೆಗಳಲ್ಲಿ ಭಾಗವಹಿಸಿ , ಜು.14ರಂದು ಭಾರತಕ್ಕೆ ಮರಳುವ ಕಾರ್ಯಕ್ರಮ ನಿಗದಿಯಾಗಿತ್ತು. ಇದೀಗ ಸ್ಪೀಕರ್ ಅವರ ಅನುಮತಿ ಪಡೆದು ನಳಿನ್ ಕುಮಾರ್ ಕಟೀಲ್ ಮುಂಚಿತವಾಗಿಯೇ ಸ್ವದೇಶಕ್ಕೆ ಮರಳಲಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್.ಎಸ್.ಎಸ್)ದ ಕಾರ್ಯಕರ್ತ ಶರತ್ ಮಡಿವಾಳ ಶವಯಾತ್ರೆ ವೇಳೆ ಗಲಭೆ ಸೃಷ್ಠಿಸಿದ ಆರೋಪದ ಮೇಲೆ ಐವರು ಹಿಂದು ಸಂಘಟನೆಯ ನಾಯಕರ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ)ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಅಲ್ಲದೆ ಇವರ ಬಂಧನಕ್ಕೂ ಪೊಲೀಸರು ಮುಂದಾಗಿರುವುದು ಜಿಲ್ಲೆಯ ಹಿಂದೂ ನಾಯಕರ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ.
ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಭಜರಂಗದಳ ಪ್ರಾಂತ ಸಂಯೋಜಕ ಶರಣ್ ಪಂಪ್ ವೆಲ್, ಭಜರಂಗದಳದ ಮುಖಂಡ ಪ್ರದೀಪ್ ಪಂಪ್ ವೆಲ್, ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಪೂಂಜ, ಭಜರಂಗದಳದ ದಕ್ಷಿಣ ಪ್ರಾಂತ ಗೋರಕ್ಷಾ ಪ್ರಮುಖ ಮುರಳಿಕೃಷ್ಣ ಹಸಂತಡ್ಕ ಸೇರಿದಂತೆ ಬಿಜೆಪಿ ಹಾಗೂ ಭಜರಂಗದಳದ 20ಕ್ಕೂ ಹೆಚ್ಚು ಜನರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಶರತ್ ಅವರ ಶವಯಾತ್ರೆ ವೇಳೆ ಬಂಟ್ವಾಳ ತಾಲ್ಲೂಕಿನ ಕೈಕಂಬದಿಂದ ಬಿ.ಸಿ.ರೋಡ್ವರೆಗಿನ ಮಾರ್ಗದಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಈ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸುಧೀರ್ಕುಮಾರ್ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications