ಮಾ.17ರಂದು ಮಂಗಳೂರಿನಲ್ಲಿ 'ಅನುಭಾವ ಸಂಗಮ' ಚಿಂತನಗೋಷ್ಠಿ
ಮಂಗಳೂರು, ಮಾರ್ಚ್ 15: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ದ.ಕ. ಹಾಗೂ ಶಕ್ತಿನಗರದ ಶಕ್ತಿ ಪಿ.ಯು. ಕಾಲೇಜಿನ ಶಕ್ತಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾ.17 ರಂದು ಮಧ್ಯಾಹ್ನ 2.30 ಕ್ಕೆ ಶಕ್ತಿ ಪಿ.ಯು.ಕಾಲೇಜಿನಲ್ಲಿ "ಅನುಭಾವ ಸಂಗಮ" ಚಿಂತನಗೋಷ್ಠಿಗಳು ನಡೆಯಲಿವೆ.
'ವರ್ತಮಾನಕ್ಕೂ ವಚನ' ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಚಿಂತನಗೋಷ್ಠಿಗಳ ಉದ್ಘಾಟನೆಯನ್ನು ದ.ಕ.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಪ್ರದೀಪ್ ಕುಮಾರ್ ಕಲ್ಕೂರ ನಡೆಸಲಿದ್ದಾರೆ.
ಡಿ.28ರಿಂದ ಮೂರು ದಿನಗಳ ಕಾಲ ಶರಣ ಸಂಸ್ಕೃತಿ ಉತ್ಸವ
ಜಗನ್ನಾಥಪ್ಪ ಪನಸಾಳೆ ಜನವಾಡಾ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು, ಪ್ರಾಚಾರ್ಯ ಪ್ರಭಾಕರ ಜಿ.ಎಸ್. ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಗೋಪಾಲ ಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಿ. ನಾೖಕ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು.
'ವಚನಗಳು ಸಾರುವ ಸಾರ್ವಕಾಲಿಕ ಮೌಲ್ಯಗಳು' ವಿಷಯದ ಕುರಿತಂತೆ ಸಾವಿತ್ರಿ ರಮೇಶ್ ಭಟ್, 'ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದ ವಚನಗಳು' ಕುರಿತಂತೆ ಡಾ. ಎಸ್. ಪಿ ಗುರುದಾಸ್ ಚಿಂತನಗೋಷ್ಠಿಯಲ್ಲಿ ವಿಚಾರ ಮಂಡಿಸಲಿರುವರು.
ಡಾ. ನಾಯಕ್ ರೂಪ್ ಸಿಂಗ್ ಹಾಗೂ ಸುಜಯ ಶೆಟ್ಟಿ ಗೋಷ್ಠಿಗಳ ಅಧ್ಯಕ್ಷತೆ ವಹಿಸಲಿರುವರು. ಸಂಜೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ. ಮುರಳೀಧರ್ ನಾೖಕ್ ವಹಿಸಲಿದ್ದು, ವಿದ್ಯಾ ಕಾಮತ್ ಜಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ.
ಬೈಕಾಡಿ ಜನಾರ್ದನ ಆಚಾರ್ ಸಮಾರೋಪ ಭಾಷಣ ಮಾಡಲಿರುವರು. ಕಾರ್ಯಕ್ರಮದಲ್ಲಿ ಇಂಚರ ತಂಡ ಉರ್ವ ಇದರ ಸದಸ್ಯರು ವಚನ ಗಾಯನ ಪ್ರಸ್ತುತ ಪಡಿಸಲಿದ್ದಾರೆ.
ದ.ಕ. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬೈಕಾಡಿ ಜನಾರ್ದನ ಆಚಾರ್, ಕಾರ್ಯದರ್ಶಿ ಕೆ.ಜಿ. ಪಾಟೀಲ, ಶಕ್ತಿ ಪಿ.ಯು. ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್., ಸದಸ್ಯ ರಮೇಶ್ ಕೆ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.