ಪೋಳ್ಯದಲ್ಲಿ ಸಿನಿಮೀಯ ಶೈಲಿಯಲ್ಲಿ ಬಾಂಬ್ ಸ್ಫೋಟಿಸಿದ ದುಷ್ಕರ್ಮಿ, ಮಹಿಳೆ ಗಂಭೀರ
ಮಂಗಳೂರು, ಅಕ್ಟೋಬರ್.16: ದುಷ್ಕರ್ಮಿಗಳು ಮನೆಗೆ ಬಾಂಬ್ ಇಟ್ಟು ಸ್ಫೋಟಿಸುವ ದೃಶ್ಯಗಳನ್ನು ನಾವು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೋಡಿದ್ದುಂಟು . ಆದರೆ ವಾಸ್ತವದಲ್ಲೂ ಇಂತಹ ಕೃತ್ಯಕ್ಕೆ ದುಷ್ಕರ್ಮಿಗಳು ಕೈ ಹಾಕಿದ್ದಾರೆ ಎಂದರೆ..?
ಹೌದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹೊಂದು ಪ್ರಕರಣ ಬೆಳಕಿಗೆ ಬಂದಿದೆ. ಪುತ್ತೂರು ತಾಲೂಕಿನ ಕಬಕ ಸಮೀಪದ ಪೋಳ್ಯ ಎಂಬಲ್ಲಿ ಈ ಘಟನೆ ಸಂಭವಿಸಿದೆ.
ಇಲ್ಲಿಯ ನಾರಾಯಣ ಪ್ರಸಾದ್ ಎಂಬುವವರ ಮನೆಯನ್ನು ದುಷ್ಕರ್ಮಿಗಳು ಕಳೆದ ತಡ ರಾತ್ರಿ ಸ್ಫೋಟಿಸಲು ಯತ್ನಿಸಿದ್ದಾರೆ. ನಾರಾಯಣ ಪ್ರಸಾದ್ ಅವರ 'ಕೈಲಾಸ್ ನಿವಾಸ'ದಲ್ಲಿ ದುಷ್ಕರ್ಮಿಗಳು ಸ್ಫೋಟಕ ಸಿಡಿಸಿದ್ದು, ಘಟನೆಯಲ್ಲಿ ಮನೆ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ತಡರಾತ್ರಿ ಸುಮಾರು 2:30ಕ್ಕೆ ವ್ಯಕ್ತಿಯೋರ್ವ ಮನೆಯ ಸುತ್ತ ಬಂಡೆ ಒಡೆಯುವ ಜಿಲೇಟಿನ್ ಸ್ಫೋಟಕಗಳನ್ನು ಅಳವಡಿಸುತ್ತಿದ್ದಾಗ ಮನೆಯವರಿಗೆ ಎಚ್ಚರವಾಗಿದೆ. ಮನೆಯ ಹೊರಗೆ ಯಾರೋ ಓಡಾಡುವ ಸದ್ದು ಕೇಳಿದ ಹಿನ್ನೆಲೆಯಲ್ಲಿ ನಾರಾಯಣ್ ಪ್ರಸಾದ್ ದಂಪತಿಗಳು ಬಾಗಿಲು ತೆರೆದಿದ್ದಾರೆ.
ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಸ್ಫೋಟಕಕ್ಕೆ ಬೆಂಕಿ ಕೊಟ್ಟು ಪರಾರಿಯಾಗುವುದು ಕಂಡು ಬಂದಿದೆ. ಇದೆ ವೇಳೆ ಸ್ಫೋಟಕ ಸಿಡಿದ ಪರಿಣಾಮ ನಾರಾಯಣ್ ಪ್ರಸಾದ್ ಅವರ ಪತ್ನಿ ಶಾಲಿನಿ (35) ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಡ ಕಚ್ಚಾ ಬಾಂಬ್ ಅನ್ನು ಮನೆಯ ಹಿಂಬಾಗಿಲು ಮತ್ತು ಎದುರ ಬಾಗಿಲ ಬಳಿ ಹಾಗೂ ಮನೆಯ ಕಿಟಕಿ ತೆರೆದು ಅಡುಗೆ ಕೋಣೆಯೊಳಗೆ ಅಳವಡಿಸಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications