ಮುಳುಗುತ್ತಿದ್ದ ಬಾರ್ಜ್ ನಲ್ಲಿದ್ದವರ ಜೀವ ಉಳಿಸಿ ಹೀರೋ ಆದ ಶೋಭಿತ್
ಮಂಗಳೂರು, ಜೂನ್ 5: ಅಂದು ಶನಿವಾರ ಮಧ್ಯಾಹ್ನ ೧ ಗಂಟೆಯ ಸಮಯ. ನೋಡ ನೋಡುತ್ತಿದ್ದಂತೆಯೇ ಭೀಕರ ಅಲೆಗಳು ಬಾರ್ಜ್ ಗೆ ಅಪ್ಪಳಿಸತೊಡಗಿದವು . ೧.೩೦ರ ವೇಳೆಗೆ ಬಾರ್ಜ್ ಆಂಕರ್ ತುಂಡಾಗಿ ನಿಯಂತ್ರಣ ತಪ್ಪಿತ್ತು. ಒಂದು ಕ್ಷಣ ಇಡೀ ಬಾರ್ಜ್ ಅಲ್ಲೋಲ - ಕಲ್ಲೋಲವಾಯಿತು. ಎಲ್ಲರು ಬೊಬ್ಬೆ ಹಾಕಿದೆವು. ಬಲವಾದ ಗಾಳಿ, ರಕ್ಕಸ ಅಲೆಗಳ ರಭಸಕ್ಕೆ ನಮ್ಮ ಬಾರ್ಜ್ ತಡೆಗೋಡೆಗಳ ಮೇಲೇರಿ ನಿಂತಿತ್ತು. ಅದೃಷ್ಟವಶಾತ್ ಯಾರಿಗೇನೋ ಆಗಿಲ್ಲ.
- ಈ ಮಾತುಗಳನ್ನು ಹೇಳಿದ್ದು ಶನಿವಾರ ರಾತ್ರಿ ಉಳ್ಳಾಲ ಸಮೀಪದ ಸಮುದ್ರದಲ್ಲಿ ಬಂಡೆಗಲ್ಲಿಗೆ ಅಪ್ಪಳಿಸಿ ಮುಳುಗುವ ಭೀತಿ ಹುಟ್ಟಿಸಿದ್ದ ಬಾರ್ಜ್ ನಲ್ಲಿದ್ದ 22 ಪ್ರಯಾಣಿಕರಲ್ಲೊಬ್ಬರಾಗಿದ್ದ ಶೋಭಿತ್.

ಇದೇ ಶೋಭಿತ್, ಸಾವಿನ ದವಡೆಯಲ್ಲಿ ನಿಂತಾಗಲೂ ಸಮಯ ಪ್ರಜ್ಞೆ ಮೆರೆದು ತಾವು ಅಪಾಯದ ಸುಳಿಯಲ್ಲಿ ಸಿಲುಕಿದ್ದನ್ನು ಹೊರ ಜಗತ್ತಿನ ಅರಿವಿಗೆ ಬರುವಂತೆ ಮಾಡಿದ್ದು. ಅವರ ಆ ಪ್ರಯತ್ನದಿಂದಲೇ ಆ ಹಡಗಿನಲ್ಲಿದ್ದ ಎಲ್ಲಾ 22 ಮಂದಿ ಇದು ಜೀವಂತವಾಗಿ ಬದುಕಿಬರಲು ಸಾಧ್ಯವಾಗಿದ್ದು. ಇಲ್ಲವಾದರೆ, ಮುಸ್ಸಂಜೆಯಲ್ಲಿ ಸಾಗರಕ್ಕಿಳಿದಿದ್ದ ಆ ಹಡಗು ರಾತ್ರಿಯ ಕತ್ತಲೆಯಲ್ಲಿ ಸಾಗರದ ನೀರಿನಲ್ಲಿ ತನ್ನಲ್ಲಿನ 22 ಮಂದಿಯೊಂದಿಗೆ ಅನಾಮತ್ತಾಗಿ ಕರಗಿಹೋಗುತ್ತಿತ್ತು.
ಬಾರ್ಜ್ ಯಾವುದೇ ಕಾರಣಕ್ಕೂ ತೆರವು ಮಾಡುವುದು ಅಸಾಧ್ಯ ವಾಗಿತ್ತು. ನಾವೇ ಅಲ್ಲಿಂದ ಹೊರಬರುವುದು ಅನಿವಾಯವಾಗಿತ್ತು. ನಾವು ತೀರದಿಂದ ಸುಮಾರು ೧.೬ ಕಿ.ಮೀ ದ್ರವಿದ್ದ ಕರಣ ಸ್ಪಷ್ಟವಾಗಿ ನೇರ ಸಂಪರ್ಕ ಮಾಡುವಂತಿರಲಿಲ್ಲ . ಮೊಬೈಲ್ ಸಂಪರ್ಕ ಸಿಗುತ್ತಿರಲಿಲ್ಲ. ಆಗ ಬಾರ್ಜ್ ನಲ್ಲಿಯೇ ಸಿಡಿಮದ್ದು ಸಿಡಿಸಿ ಅಪಾಯದ ಮುನ್ಸೂಚನೆಯನ್ನು ದಡದಲ್ಲಿದ್ದವರಿಗೆ ಸೂಚಿಸಿದೆವು. ಅವರು ಸ್ಪಂದಿಸಿದರು ಎನ್ನುತ್ತಾರೆ ಶೋಭಿತ್ .

ಸುಮಾರು ೨ ಗಂಟೆಯ ನಂತರ ನನ್ನ ಮೊಬೈಲ್ ನ ಸಂಪರ್ಕ ಸಿಕ್ತು, ತಕ್ಷಣ ನನ್ನ ತಂದೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಅವರು ಕೂಡಲೇ ಉಳ್ಳಾಲದ ಜೀವರಕ್ಷಕರಾದ ರಾಜೇಶ್ ಮತ್ತು ತಂಡಕ್ಕೆ ವಿಷಯ ತಿಳಿಸಿದರಂತೆ. ಬೆಂಗರೆಯಿಂದ ಉಳ್ಳಾಲಕ್ಕೆ ಬರುವುದಾಗಿ ಹೇಳಿದರು. ಇದರಿಂದ ನಮಗೆ ಸ್ವಲ್ಪ ಧೈರ್ಯಬಂತು ಎಂದರು ಅವರು.
ಅವರ ಆತಂಕ ಕಂಡಾಗ ನಾನು ಮರುಗುತ್ತಿದ್ದೆ. ಉಳ್ಳಾಲ ತೀರದಲ್ಲಿ ಅಗ್ನಿಶಾಮಕದಳ , ಪೊಲೀಸ್ ವಾಹನಗಳು ಕಾಣುತ್ತಿದ್ದಂತೆಯೇ ತುಸು ಧೈರ್ಯ ಬಂತು. ಉಳ್ಳಾಲದ ರಾಜೇಶ್ ಅವರು ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದರು ಮಾತ್ರವಲ್ಲದೆ ಕೋಸ್ಟ್ ಗೌರ್ಡ್ ಶಿಪ್ ಬರುವ ಬಗ್ಗೆ ಮಾಹಿತಿ ನೀಡಿದರು. ಇದು ಮಾತ್ರವಲ್ಲದೆ ಕೆಲವು ಮಿತ್ರರು , ಸಂಬಂಧಿಗಳು ಕರೆ ಮಾಡಿ ಧೈರ್ಯ ತುಂಬುತ್ತಿದ್ದರು.
ರಾತ್ರಿ ಊಟಕ್ಕಾಗಿ ಹಡಗಿನ ಕೆಳ ಅಂತಸ್ತಿನಲ್ಲಿದ್ದ ಮೆಸ್ಗೆ ಕೆಳಗೆ ಹೋಗಬೇಕಾಗಿತ್ತು. ಆದರೆ, ಅಲ್ಲಿ ನೀರು ತುಂಬಿಕೊಂಡಿರಬಹುದೆಂದು ಎಣಿಸಿದ ನಾವು ಮೆಸ್ಗೆ ಹೋಗದೆ ಊಟ ಮಾಡದೆ ರಾತ್ರಿಯನ್ನು ಕಳೆದೆವು. ಸರಿಯಾದ ನಿದ್ದೆ ಇಲ್ಲದೆ ಆತಂಕದಲ್ಲೇ ಇದ್ದೆವು ಎಂದು ಶೋಭಿತ್ ತಿಳಿಸಿದರು.
ಕೋಸ್ಟ್ಗಾರ್ಡ್ನವರ ಬಗ್ಗೆ ನಮಗೆ ಅಸಮಾಧಾನ ಇಲ್ಲ. ಅಲ್ಲಿದ್ದ ಬಂಡೆ ಕಲ್ಲುಗಳನ್ನು ದಾಟಿ ಬರುವುದು ಕೂಡ ಅಷ್ಟು ಸುಲಭ ಇರಲಿಲ್ಲ. ಕೋಸ್ಟ್ಗಾರ್ಡ್ ನವರು ಏನು ಹೇಳುತ್ತಾರೋ ಅದನ್ನೇ ನಾವು ಪಾಲಿಸಬೇಕಿತ್ತು ಎಂದೂ ಅವರು ತಿಳಿಸಿದರು.












Click it and Unblock the Notifications