ಕೃಷಿ, ದೈವಸ್ಥಾನಗಳ ಭೂಮಿ ಮೇಲೆ ಕೈಗಾರಿಕೆಗಳ ಕಣ್ಣು
ಮಂಗಳೂರು, ಜೂ. 14: ದಕ್ಷಿಣ ಕನ್ನಡ ಜಿಲ್ಲೆ ಅದ್ಭುತ ಭೌಗೋಳಿಕ ಗುಣ ಲಕ್ಷಣ ಹೊಂದಿರುವ ಜಿಲ್ಲೆ. ಆದರೆ, ಕೈಗಾರಿಕೆಗಳ ಪ್ರವೇಶದ ಬಳಿಕ ಸಾವಿರಾರು ಎಕರೆ ಕೃಷಿ ಭೂಮಿ ಕೈಗಾರಿಕೆಗಳ ಪಾಲಾಗಿದೆ. ಹಲವು ವರ್ಷದ ಬಳಿಕ ಈಗ ಮತ್ತೊಂದು ಕೈಗಾರಿಕಾ ಕೇಂದ್ರ ಜನರ ಕೃಷಿ ಭೂಮಿಯತ್ತ ಕಣ್ಣಿಟ್ಟಿದ್ದು, ಮತ್ತೆ ಸಾವಿರಾರು ಎಕರೆ ಭೂಮಿ ಸರ್ಕಾರದ ಪಾಲಾಗುವ ಆತಂಕ ಎದುರಾಗಿದೆ.
ಹೆಚ್ಚಿನ ಬೃಹತ್ ಕೈಗಾರಿಕೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆಲೆ ಕಂಡಿವೆ. ಆದರೆ ಇದೀಗ ಕೈಗಾರಿಕೆಗಳ ಸ್ಥಾಪನೆಗಾಗಿ ಶಾಂಭವಿ ನದಿ ದಡದಲ್ಲಿರುವ ಮೂರು ಗ್ರಾಮಗಳ ಜನರು ತಮ್ಮ ಮೂಲ ನೆಲೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಲ್ಲಿನ ಸುಮಾರು 1091 ಎಕರೆಯಷ್ಟು ಜನವಸತಿ ಪ್ರದೇಶ, ಕೃಷಿ ಭೂಮಿಯು ಕೈಗಾರಿಕಾ ವಲಯದಡಿ ಸಮಾಧಿಯಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ಉಳೆಪಾಡಿ, ಬಳ್ಕುಂಜೆ, ಕೊಲ್ಲೂರು ಈ ಮೂರು ಗ್ರಾಮಗಳು ಕೈಗಾರಿಕಾ ವಲಯ ಸ್ಥಾಪನೆಗೆ ಆಪೋಶನವಾಗಲಿದೆ. ಮಾರ್ಚ್ 21ರಂದು ಈ ಮೂರೂ ಗ್ರಾಮಗಳ ಭೂಮಿ ಕೈಗಾರಿಕಾ ವಲಯ ಸ್ಥಾಪನೆಗೆ ಹೋಗುತ್ತದೆ ಎಂಬ ವರದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು.
ಈ ಬಗ್ಗೆ ಕನಿಷ್ಠ ಪಕ್ಷ ಎಂಎಲ್ಎ, ಗ್ರಾಮ ಪಂಚಾಯತಿಗಳಿಗೂ ಮಾಹಿತಿ ಲಭ್ಯವಿಲ್ಲ. ಆದರೆ ಇದೀಗ ಒಂದು ವಾರದಿಂದ ಮೂರೂ ಗ್ರಾಮಗಳ ಮನೆಮನೆಗೂ ನೋಟಿಸ್ ನೀಡಲಾಗುತ್ತಿದೆ. ಪರಿಣಾಮ ಈ ಗ್ರಾಮಗಳ ನಿವಾಸಿಗಳು ತಾವು ಹುಟ್ಟಿ ಬೆಳೆದ ಮನೆ, ಕಷ್ಟಪಟ್ಟು ಬೆಳೆಸಿದ ಕೃಷಿ ಭೂಮಿ ಎಲ್ಲವನ್ನೂ ತೊರೆದು ಹೋಗಬೇಕೆನ್ನುವ ವಿಚಾರ ತಿಳಿದು ಅಕ್ಷರಶಃ ಕಂಗಾಲಾಗಿದ್ದಾರೆ.

ಸಾವಿರಾರು ಕುಟುಂಬಗಳಿಗೆ ಸಂಕಷ್ಟ
ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಮೂರೂ ಗ್ರಾಮಗಳು ಯಥೇಚ್ಛವಾಗಿ ನೀರು, ಕೃಷಿ ಇರುವ ಭೂಮಿ ಇರುವ ಪ್ರದೇಶ. ಇಲ್ಲಿನ ಜನತೆ ಕೃಷಿ, ಹೈನುಗಾರಿಕೆಯನ್ನೇ ಅವಲಂಬಿಸಿ ಬದುಕುತ್ತಿರುವವರು.
ತೆಂಗು, ಅಡಿಕೆ, ಬಾಳೆ, ಕರಿಮೆಣಸು, ಭತ್ತ, ಕಬ್ಬು, ಉದ್ದು, ಹೆಸರು, ಎಳ್ಳು, ಹಣ್ಣುಹಂಪಲುಗಳನ್ನು ಬೆಳೆದು ಸ್ವಾವಲಂಬಿಯಾಗಿ ಬದುಕುತ್ತಿರುವವರು. ಇದೀಗ ಈ ಗ್ರಾಮಗಳ ಸಾವಿರಾರು ಕುಟುಂಬಗಳು ತಮ್ಮ ಆಸ್ತಿ-ಪಾಸ್ತಿ, ಕೃಷಿ ಭೂಮಿಯನ್ನೆಲ್ಲಾ ಬಿಟ್ಟು ಹೋಗಬೇಕಾಗಿದೆ.

ಮೂಲನಿವಾಸಿಗಳು ಸಂತ್ರಸ್ತ
ಅಲ್ಲದೆ ಇಲ್ಲಿನ ಜನರು ತಮ್ಮ ಪೂರ್ವಜರ ಕಾಲದಿಂದ ನಂಬಿಕೊಂಡು ಬಂದಿರುವ ದೈವಸ್ಥಾನಗಳು, ದೇವಸ್ಥಾನ, ಮಸೀದಿ, ಚರ್ಚ್ ಕೈಗಾರಿಕಾ ವಲಯ ನಿರ್ಮಾಣದಡಿ ಅವಶೇಷವಾಗುವ ಭೀತಿಯಲ್ಲಿದೆ. ತುಳುನಾಡಿನ ಕಾರಣಿಕ ಪುರುಷರಾದ ಕಾಂತಾಬಾರೆ-ಬೂದಬಾರೆಯರ ಜನ್ಮಸ್ಥಾನಕ್ಕೆ ಸಂಬಂಧಪಟ್ಟ ಭೂಮಿ, ತುಳುನಾಡಿನ ಮೂಲ ನಿವಾಸಿಗಳಾದ ಕೊರಗರ ಸಮುದಾಯ, ಇನ್ನಿತರ ದಲಿತ ಸಮುದಾಯಗಳೂ ಸಂತ್ರಸ್ತರಾಗಿದ್ದಾರೆ.

42 ದೈವಗಳಿರುವ ದೈವಸ್ಥಾನಗಳು ಕಣ್ಮರೆ
ವಿಷಾದದ ಸಂಗತಿಯೆಂದರೆ ಕರಾವಳಿಯಲ್ಲಿ ಅತೀ ಹೆಚ್ಚು ಅಂದರೆ 11 ಎಕರೆ ಕೃಷಿ ಭೂಮಿ ಹೊಂದಿರುವ ಕೊರಗ ಸಮುದಾಯದ ಭೂಮಿ, 42 ದೈವಗಳಿರುವ ದೈವಸ್ಥಾನಗಳು ಕಣ್ಮರೆ ಆಗಲಿದೆ. ಏನೇ ಆದರೂ ತಾವು ಯಾರೂ ನಮ್ಮ ಪೂರ್ವಿಕರ ನೆಲೆಬೀಡಾಗಿರುವ ಕೃಷಿ ಭೂಮಿ, ದೈವ-ದೇವರಗಳನ್ನು ಬಿಟ್ಟು ಹೋಗುವುದಿಲ್ಲವೆಂದು ಈ ಭಾಗದ ಜನರು ಅವಲತ್ತುಕೊಳ್ಳುತ್ತಿದ್ದಾರೆ.

ನಮ್ಮ ಭೂಮಿ ನಮಗೆ ಕೊಡಿ
ನಾವು ಕಷ್ಟಪಟ್ಟು ಬೆಳೆಸಿದ ಕೃಷಿಯು ಫಸಲಿಗಾಗುವ ಹೊತ್ತಿಗೆ ಬಿಟ್ಟು ಹೋಗಿ ಎಂದು ಹೇಳಿದರೆ ನಾವು ಎಲ್ಲಿಗೆ ಹೋಗುವುದು?. ಮತ್ತೆ ನಮಗೆ ಇಷ್ಟು ಒಳ್ಳೆಯ ಭೂಮಿ ಸಿಗಲು ಸಾಧ್ಯವೇ. ಕೃಷಿ ಬಿಟ್ಟು ನಮಗೇನು ಗೊತ್ತಿಲ್ಲ. ಇಳಿ ಪ್ರಾಯದ ಹೊತ್ತಿನಲ್ಲಿ ಮಕ್ಕಳು - ಮರಿಗಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಲಿ. ನಮಗೆ ನಿಮ್ಮ ಪರಿಹಾರ ಬೇಡ, ನಮ್ಮ ಭೂಮಿಯನ್ನು ನಮಗೆ ಬಿಟ್ಟುಕೊಡಿ ಎಂದು ಹನಿಗಣ್ಣಾಗುತ್ತಾರೆ ಇಲ್ಲಿನ ಗ್ರಾಮಸ್ಥರು. ನಮ್ಮ ಫಲವತ್ತಾದ ಭೂಮಿಯನ್ನು ಆಪೋಶನ ಪಡೆದು ಕೈಗಾರಿಕಾ ವಲಯ ನಿರ್ಮಾಣ ಮಾಡಿದರೆ ಖಂಡಿತಾ ಯಾರೂ ಉದ್ಧಾರವಾಗೋದಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಸರಕಾರ ಈ ಭಾಗದ ಜನರ ಅಹವಾಲಿಗೆ ಕಿವಿಯಾಗಬೇಕಿದೆ. ಅವರ ಸಂಕಷ್ಟ, ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಇನ್ನಾದರೂ ಈ ಭಾಗದ ಜನರ ಗೋಳಿಗೆ ಸರಕಾರ ಸಕಾರಾತ್ಮಕ ಸ್ಪಂದನೆ ನೀಡುತ್ತದೆಯೇ ಎಂಬುವುದು ಗೊತ್ತಾಗಲಿದೆ.












Click it and Unblock the Notifications