ನೀರಿನ ವಿಷ್ಯದಲ್ಲಿ ಒಗ್ಗಟ್ಟು ಮುಖ್ಯ: ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಅವರು ಮಂಗಳೂರಿಗೆ ಭೇಟಿ ನೀಡಿ, ಕಟ್ಟಪಾಡಿ ಕಟ್ಟಪ್ಪ ಚಿತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬರ, ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದರು.
ಮಂಗಳೂರು, ಮಾರ್ಚ್ 02: ನಟ ಶಿವರಾಜ್ ಕುಮಾರ್ ಅವರು ಬುಧವಾರ (ಮಾರ್ಚ್ 01) ದಂದು ಬಲ್ಮಠಕ್ಕೆ ಭೇಟಿ ನೀಡಿದರು. ಕಟ್ಟಪಾಡಿ ಕಟ್ಟಪ್ಪ ತುಳು ಚಿತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಬರ, ಎತ್ತಿನಹೊಳೆ ಯೋಜನೆ ಬಗ್ಗೆ ಮಾತನಾಡಿದರು.
ಬಲ್ಮಠದಲ್ಲಿರುವ ಕ್ಯಾಡ್ ಸ್ಟುಡಿಯೋದಲ್ಲಿ 'ಕಟಪಾಡಿ ಕಟ್ಟಪ್ಪ' ಚಿತ್ರದ ಆಲ್ಬಂ ಸಾಂಗ್ ರೆಕಾರ್ಡಿಂಗ್ ಮುಹೂರ್ತ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಅವರು ಭಾಗವಹಿಸಿದ್ದರು.

ಈ ವೇಳೆಯಲ್ಲಿ ತುಳು ಚಿತ್ರನಟ ದೇವದಾಸ್ ಕಾಪಿಕಾಡ್, ವಿಜಯ್ ಕುಮಾರ್ ಕೊಡಿಯಾಲ್ ಬೈಲ್ , ಪ್ರಕಾಶ್ ಪಾಂಡೇಶ್ವರ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, 'ಬರಪೀಡಿತ ಎಂದು ಘೋಷಣೆಯಾದ ನಂತರರ ಮೊದಲ ಬಾರಿ ಮಂಗಳೂರಿಗೆ ಭೇಟಿ ನೀಡಿದ್ದೇನೆ. ನೀರು, ಗಡಿ ವಿಷ್ಯದಲ್ಲಿ ನಾವು ಐಕ್ಯತೆ ತೋರಿಸಬೇಕು.

ಮಂಗಳೂರು ಅಷ್ಟೇ ಅಲ್ಲ, ಮಂಡ್ಯ, ಕೊಪ್ಪಳ ಸಹ ಬರಪೀಡಿತ ಜಿಲ್ಲೆಯಾಗಿದೆ. ಬರಮುಕ್ತ ನಾಡನ್ನ ನಾವು ಕಟ್ಟಬೇಕಾಗಿದೆ. ನಾವು ಒಗ್ಗಟ್ಟಾಗಿದ್ದರೆ ಯಾವುದೇ ಸಮಸ್ಯೆಗೂ ಪರಿಹಾರ ಹುಡುಕಬಹುದು' ಎಂದರು.
' ಐ ಲವ್ ಮಂಗಳೂರು ಎಂದ ಶಿವರಾಜ್ ಕುಮಾರ್, ಮಂಗಳೂರನ್ನ ಅಪ್ಪಾಜಿ ಇಷ್ಟಪಟ್ಟಿದ್ದರು' ಎತ್ತಿನಹೊಳೆ ಯೋಜನೆಗೆ ಕನ್ನಡ ಚಿತ್ರರಂಗದಿಂದ ಸಂಪೂರ್ಣ ಬೆಂಬಲವಿದೆ, ಹೋರಾಟ ಅನಿವಾರ್ಯವಿದ್ದರೆ ಕರಾವಳಿ ಜನರ ಜೊತೆ ನಾವು ಇದ್ದೇವೆ ಎಂದು ಹೇಳಿದರು.
ಡಬ್ಬಿಂಗ್ ವಿಚಾರವಾಗಿ ಮಾತನಾಡಿ, ನಾನು ಮೊದಲಿನಿಂದೂ ಡಬ್ಬಿಂಗ್ ವಿರೋಧಿಸುತ್ತಾ ಬಂದಿದ್ದೇನೆ, ಕನ್ನಡದಲ್ಲಿಯೇ ಉತ್ತಮ ಚಿತ್ರಕಥೆಗಳಿದ್ದು ಡಬ್ಬಿಂಗ್ ನ ಅವಶ್ಯಕತೆ ಇಲ್ಲ ಎಂದರು.(ಒನ್ಇಂಡಿಯಾ ಸುದ್ದಿ)












Click it and Unblock the Notifications