ಆಸ್ತಿ ವಿವಾದ: 3 ವರ್ಷದ ಮಗು, ನಾದಿನಿಗೆ ಆ್ಯಸಿಡ್ ಎರಚಿದ ಕೀಚಕ
ಮಂಗಳೂರು, ಜನವರಿ 24: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಾದಿನಿ ಹಾಗೂ ಆಕೆಯ ಮೂರು ವರ್ಷದ ಮಗುವಿನ ಮುಖಕ್ಕೆ ಆ್ಯಸಿಡ್ ಎರಚಿರುವ ಘಟನೆ ಪುತ್ತೂರು ತಾಲ್ಲೂಕಿನ ಕಡಬದ ಕೋಡಿಂಬಾಳದಲ್ಲಿ ನಡೆದಿದೆ.
ರಬ್ಬರ್ ಶೀಟ್ ಮಾಡಲು ಬಳಸುವ ಆ್ಯಸಿಡ್ ಅನ್ನು ನಾದಿನಿ ಸ್ವಪ್ನಾ ಹಾಗೂ ಆಕೆಯ ಮೂರು ವರ್ಷದ ಮಗುವಿನ ಮೇಲೆ ಎರಚಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಇವರಿಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಯಾನಂದ ಕೊಠಾರಿ ಎಮಬುವವನೇ ಈ ದುಷ್ಕೃತ್ಯ ಎಸಗಿದ್ದಾನೆ. ಜಯಾನಂದನ ಸ್ವಂತ ತಮ್ಮ ತೀರಿ ಹೋದ ಬಳಿಕ ಆತನ ಹೆಂಡತಿ ಸ್ವಪ್ನಾ ಜೊತೆ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೇ ಆಸ್ತಿ ವಿವಾದ, ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ವಂತ ತಮ್ಮನ ಹೆಂಡತಿ ಹಾಗೂ ಚಿಕ್ಕ ಮಗುವಿನ ಮೇಲೆ ಆ್ಯಸಿಡ್ ಹಾಕಿದ್ದಾನೆ. ಈ ಕುರಿತು ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿ ಜಯಾನಂದನನ್ನು ವಶಕ್ಕೆ ಪಡೆದಿದ್ದಾರೆ.












Click it and Unblock the Notifications