ಪುತ್ತೂರು: ಲಂಚ ಕೇಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ
ಪುತ್ತೂರಿನ ಅರಿಯಾಪು ಗ್ರಾಮದ ರೈತರೊಬ್ಬರಿಂದ ಜಮೀನು ವಾಣಿಜ್ಯ ಪರಿವರ್ತನೆ ಮಾಡಲು 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಪುತ್ತೂರು ನಗರ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ನಿರ್ದೇಶಕಿ ಎಸ್. ಲಾವಣ್ಯರನ್ನು ಬಂಧಿಸಲಾಗಿದೆ.
ಮಂಗಳೂರು, ಏಪ್ರಿಲ್ 12: ಎನ್ಓಸಿ ನೀಡಲು ಲಂಚ ಕೇಳಿದ ದಕ್ಷಿಣ ಕನ್ನಡದ ಪುತ್ತೂರಿನ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.
ಪುತ್ತೂರಿನ ಅರಿಯಾಪು ಗ್ರಾಮದ ರೈತರೊಬ್ಬರು ತಮ್ಮ ಜಮೀನನ್ನು ವಾಣಿಜ್ಯ ಪರಿವರ್ತನೆ ಮಾಡುವಂತೆ ಪುತ್ತೂರು ನಗರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸಹಾಯಕ ನಿರ್ದೇಶಕಿ ಎಸ್. ಲಾವಣ್ಯ ಎಂಬುವವರು 10,000 ಹಣ ನೀಡುವಂತೆ ಕೇಳಿದ್ದರು. ಈ ಬಗ್ಗೆ ರೈತ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

ಬುಧವಾರ ಲಾವಣ್ಯ ಲಂಚ ಸ್ವೀಕರಿಸುತ್ತಿದ್ದ ವೇಳೆ ದಿಢೀರ್ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಧಿಕಾರಿಯನ್ನ ವಶಕ್ಕೆ ಪಡೆದುಕೊಂಡರು. [ದಾವಣಗೆರೆಯಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ]
ಕೃಷ್ಣ ಮಠಕ್ಕೆ ಈಶ್ವರಪ್ಪ ಭೇಟಿ
ಬಿಜೆಪಿ ಪಕ್ಷದ ಹಿರಿಯ ಮುಖಂಡ ಕೆ.ಎಸ್ ಈಶ್ವರಪ್ಪ ಬುಧವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದರು. ಈ ವೇಳೆ ಪೇಜಾವರ ಶ್ರೀಗಳ ಜೊತೆ ಮಾತುಕತೆ ನಡೆಸಿದರು.
ಭೇಟಿ ಬಳಿಕ ಮಾತನಾಡಿದ ಈಶ್ವರಪ್ಪ, 'ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಖಚಿತ. ಮೋದಿ- ಯಡಿಯೂರಪ್ಪ ಪ್ರಭಾವದಿಂದ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯವೇ ಪ್ಲಸ್ ಪಾಯಿಂಟ್ ಆಗಲಿದೆ' ಅಂದರು. [ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಲಂಚ ಬಾಕರು]
ಇದೇ ವೇಳೆ ಉಡುಪಿ ಜಿಲ್ಲಾಧಿಕಾರಿ ಕೊಲೆಯತ್ನ ಪ್ರಕರಣದ ಕುರಿತು ಮಾತನಾಡಿದ ಅವರು, ' ಅಕ್ರಮ ಮಾಡುವವರಿಗೆ ಸಚಿವ ಪ್ರಮೋದ್ ಮಧ್ವರಾಜ್ ರಕ್ಷಣೆ ನೀಡುತ್ತಿದ್ದಾರೆ. ಸಕ್ರಮ ಮಾಡುವವರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಉಡುಪಿ ಡಿಸಿ, ಎಸಿ ಅವರಿಗೆ ಧೈರ್ಯ ಹೇಳಬೇಕಿತ್ತು. ಆದರೆ ಪ್ರಮೋದ್ ಮಧ್ವರಾಜ್ ಈ ಕೆಲಸ ಮಾಡಿಲ್ಲ' ಎಂದು ಆಪಾದಿಸಿದರು.
"ಸಿದ್ದರಾಮಯ್ಯ ನೇತೃತ್ವ ಸರ್ಕಾರ ಬೇಜವಾಬ್ದಾರಿ ಸರ್ಕಾರ. ರಾಜ್ಯದಲ್ಲಿ ಅಧಿಕಾರಿಗಳಿಗೆ ರಕ್ಷಣೆಯಿಲ್ಲ. ಸರ್ಕಾರ ಮರಳು ಮಾಫಿಯಾದ ಕೈವಶದಲ್ಲಿದೆ. ರಾಜ್ಯದಲ್ಲಿ ಅಕ್ರಮ ಮರಳು ಮಾಫಿಯಾ, ಅಕ್ಕಿ ಮಾಫಿಯಾ ಹಿಡಿತದಲ್ಲಿದೆ. ಅಕ್ರಮದ ಬಗ್ಗೆ ಮಾತನಾಡದಿರುವಂತೆ ಸಿಎಂ ಸೂಚನೆ ಕೊಟ್ಟಿರಬಹುದು. ರಾಜ್ಯದ ಇತಿಹಾಸದಲ್ಲಿ ಅಧಿಕಾರಿಗಳ ಮೇಲೆ ದಾಳಿ ನಡೆದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಮಾಡುವ ಪ್ರಭಾವಿಗಳ ಕೈಯಲ್ಲಿ ರಾಜ್ಯ ಸರ್ಕಾರವಿದೆ' ಎಂದು ಆಪಾದಿಸಿದರು.












Click it and Unblock the Notifications