ಸಾವಿಗೆ ಶರಣಾಗಲು ಬಂದಿದ್ದ ಮಹಿಳೆಯ ಜೀವ ಉಳಿಸಿದ ಸಾಕು ನಾಯಿ: ಅಷ್ಟಕ್ಕೂ ಆಗಿದ್ದೇನು..?
ಮಂಗಳೂರು, ಜೂನ್ 29: ಪತಿಯೊಂದಿಗೆ ಜಗಳವಾಡಿ ರಾತೋರಾತ್ರಿ ಮನೆಬಿಟ್ಟು ಬಂದ ಮಹಿಳೆ ನದಿಗೆ ಹಾರಿ ಜೀವ ಕಳೆದುಕೊಳ್ಳಲು ಬಂದಾಕೆಯನ್ನು ಶ್ವಾನವೊಂದು ಉಳಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
ಗುರುವಾರ ತಡರಾತ್ರಿ ಪತಿಯೊಂದಿಗೆ ಜಗಳವಾಡಿ ರಾತೋರಾತ್ರಿ ಮನೆಬಿಟ್ಟು ಬಂದ ಮಹಿಳೆ ಆತ್ಮಹತ್ಯೆಗೆ ಮುಂದಾಗಿದ್ದು, ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಸಾಕು ನಾಯಿ ಆಕೆಯ ಶಾಲು ಹಿಡಿದು ಎಳೆದು ಬೊಗಳುವ ಮೂಲಕ ರಕ್ಷಣೆಗೆ ಮುಂದಾಗಿದೆ. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಇನ್ನೇನು ನದಿಗೆ ಹಾರಲು ಸಿದ್ಧವಾದ ಮಹಿಳೆಯನ್ನು ಚಾಣಾಕ್ಷತನದಿಂದ ರಕ್ಷಣೆ ಮಾಡಿದ್ದಾರೆ.

ಈ ಘಟನೆಯ ಹಿನ್ನೆಲೆ ಏನು..?
ಉಪ್ಪಿನಂಗಡಿ ಸಮೀಪದ ಪಿಲಿಗೋಡು ಸಮೀಪ ವಾಸವಾಗಿರುವ ಹಾಗೂ ವೃತ್ತಿಯಲ್ಲಿ ಮ್ಯಕಾನಿಕ್ ಆಗಿರುವ ವ್ಯಕ್ತಿಯೊಬ್ಬರು ಹದಿನಾರು ವರ್ಷಗಳ ಹಿಂದೆ ಬೆಂಗಳೂರು ಮೂಲದ ಯುವತಿಯನ್ನು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಪತಿಯ ಪಿತ್ರಾರ್ಜಿತ ಆಸ್ತಿಯ ಪಾಲಿನಲ್ಲಿ ಪುಟ್ಟದೊಂದು ಮನೆಕಟ್ಟಿಕೊಂಡು ಈವರೆಗೂ ಚೆನ್ನಾಗಿಯೇ ಇದ್ದರು. ಆದರೆ ಗುರುವಾರ (ಜೂನ್ 27 ) ರಂದು ಪತಿ ಪತ್ನಿ ನಡುವೆ ಯಾವುದೋ ವಿಚಾರದಲ್ಲಿ ಜಗಳ ನಡೆದಿದೆ.
ಇದರಿಂದ ಬೇಸರಗೊಂಡ ಪತ್ನಿ ರಾತ್ರಿಯಲ್ಲಿ ಮಳೆಯ ನಡುವೆ ನಡೆದುಕೊಂಡು ನಾಲ್ಕು ಕಿಲೋ ಮೀಟರ್ ದೂರದ ಉಪ್ಪಿನಂಗಡಿಗೆ ಬಂದಿದ್ದಾರೆ. ಉಪ್ಪಿನಂಗಡಿ ನೇತ್ರಾವತಿ ನದಿಯ ಸೇತುವೆ ಮೇಲಿನಿಂದ ನದಿಗೆ ಹಾರುವ ಪ್ರಯತ್ನ ನಡೆಸಿದ್ದಾರೆ. ಆದರೆ ಆಕೆಯ ಜೊತೆ ಬಂದಿದ್ದ ಸಾಕು ನಾಯಿ ಆಕೆಯ ಶಾಲು ಎಳೆದು ಬೊಗಳತ್ತಾ ತನ್ನದೇ ಭಾಷೆಯಲ್ಲಿ ಆಕೆಯನ್ನು ಸಂತೈಸಲು ಯತ್ನಿಸಿದೆ.
ಈ ವೇಳೆ ಇದೇ ದಾರಿಯಲ್ಲಿ ಬೈಕ್ನಲ್ಲಿ ಬಂದಿದ್ದ ವ್ಯಕ್ತಿಯೊಬ್ಬರು ಅನುಮಾನಗೊಂಡು ಈ ವಿಚಾರವನ್ನು ಸ್ಥಳೀಯ ಸಮಾಜ ಸೇವಕ ಫಯಾಝ್ ಎಂಬವರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಫಯಾಜ್ ಇನ್ನೇನು ನದಿಗೆ ಹಾರಬೇಕು ಅಂತಿದ್ದ ಮಹಿಳೆಯನ್ನು ಚಾಣಾಕ್ಷತನದಿಂದ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಯ ಬಳಿಕ ಶುಕ್ರವಾರ ( ಜೂನ್ 28) ರಂದು ಪೊಲೀಸರು ದಂಪತಿಗೆ ಕೌನ್ಸಿಲಿಂಗ್ ಮಾಡಿದ್ದಾರೆ. ಆದರೆ ಪತಿಯ ಜೊತೆಗೆ ಹೋಗಲು ಒಪ್ಪದ ಮಹಿಳೆ ಬೆಂಗಳೂರಿನ ತವರಿಗೆ ಹೋಗುವುದಾಗಿ ಹಠ ಹಿಡಿದಿದ್ದಾರೆ. ಮಕ್ಕಳು ಮಾತ್ರ ತಂದೆಯ ಜೊತೆಗೆ ಇರುವುದಾಗಿ ಹೇಳಿದ್ದಾರೆ. ಆದರೆ ಮಹಿಳೆ ಇಷ್ಟೊಂದು ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಅನ್ನೋದು ಮಾತ್ರ ಈವರೆಗೂ ತಿಳಿದು ಬಂದಿಲ್ಲ. ಘಟನೆಯಲ್ಲಿ ಮಹಿಳೆಯ ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಮಹಿಳೆಯನ್ನು ರಕ್ಷಿಸಿದ ವ್ಯಕ್ತಿಯ ಸಮಯಪ್ರಜ್ಞೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.












Click it and Unblock the Notifications