ಬೆಳ್ತಂಗಡಿ: ಸಾರ್ವಜನಿಕರೇ ಆರೋಪಿಯನ್ನು ಥಳಿಸಿ ಕೊಂದು ಹಾಕಿದ್ರು
ಮಂಗಳೂರು,ಫೆಬ್ರವರಿ,16: ಕಳ್ಳತನ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಸಾರ್ವಜನಿಕರು ಥಳಿಸಿ ಹತ್ಯೆ ಮಾಡಿದ ಅಮಾನುಷ ಘಟನೆ ಚಾರ್ಮಾಡಿ ಗ್ರಾಮ ಪಂಚಾಯತು ವ್ಯಾಪ್ತಿಯ ತೋಟ ತ್ತಾಡಿಯ ಕುತ್ರಿಜಾಲು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.
ಹಲ್ಲೆಗೆ ಒಳಗಾಗಿ ಮೃತಪಟ್ಟ ಸ್ಥಳೀಯ ನಿವಾಸಿಯೇ ಪೀಟರ್. ಈತ ಕಳೆದ ಡಿಸೆಂಬರ್ 25ರಂದು ಮನೆಯಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದನು. ತಿಂಗಳ ಕಾಲ ಜೈಲಿನಲ್ಲಿದ್ದ ಪೀಟರ್ ವಾರದ ಹಿಂದೆಯಷ್ಟೇ ಜೈಲಿನಿಂದ ಹೊರ ಬಂದಿದ್ದನು.[ಮಂತ್ರವಾದಿ ಮಾತು ಕೇಳಿ ಹಾವು ಕೊಂದ ವ್ಯಕ್ತಿ ಮೇಲೆ ಹಲ್ಲೆ]
ಘಟನೆ ವಿವರ:
ಜೈಲಿನಿಂದ ಹೊರ ಬಂದಿದ್ದ ಪೀಟರ್ ಎರಡು ದಿನಗಳ ಹಿಂದೆ ತೋಟ ತ್ತಾಡಿಯ ಮನೆಯೊಂದಕ್ಕೆ ನುಗ್ಗಿ ಅಡಿಕೆ ಕಳ್ಳತನ ಮಾಡಿ ಕಾಡಿನಲ್ಲಿ ತಲೆಮರೆಸಿಕೊಂಡಿದ್ದನು. ಈ ಬಗ್ಗೆ ತನಿಖೆ ಕೈಗೊಂಡ ಬೆಳ್ತಂಗಡಿ ಪೊಲೀಸರಿಗೆ ಈತನ ಸುಳಿವು ದೊರೆತಿರಲಿಲ್ಲ.[ದರೋಡೆ ಯತ್ನ, ಭೂಗತ ಪಾತಕಿ ವಿಕ್ಕಿಶೆಟ್ಟಿ ಸಹಚರರ ಬಂಧನ]
ಈ ನಡುವೆ ಸೋಮವಾರ ಸಂಜೆ ವೇಳೆ ಈತನಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಕಾಡಿನ ನಡುವೆ ಸ್ಥಳೀಯರಿಗೆ ಸಿಕ್ಕಿ ಬಿದ್ದಿದ್ದಾನೆ. ಪೀಟರ್ ಸಿಕ್ಕಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸುವ ಮೊದಲೇ ಸ್ಥಳಿಯರು ಆತನನ್ನು ಸರಿಯಾಗಿ ಥಳಿಸಿದ್ದಾರೆ.
ಬಳಿಕ ಬೆಳ್ತಂಗಡಿ ಎಸೈ ನೇತೃತ್ವದ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ಜನರನ್ನು ಚದುರಿಸಿ ತೀವ್ರ ಹಲ್ಲೆಗೆ ಒಳಗಾದ ಪೀಟರ್ ನನ್ನು ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ತರುವ ಮೊದಲೇ ಮೃತಪಟ್ಟಿದ್ದು, ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]
ಪೀಟರ್ ಮರ ಕಳ್ಳತನ ಸೇರಿದಂತೆ ಸುಮಾರು ಒಂಭತ್ತಕ್ಕೂ ಹೆಚ್ಚು ಪ್ರಕರಣಗಳ ಆರೋಪಿಯಾಗಿದ್ದನು. ಇತ್ತೀಚಿನ ದಿನಗಳಲ್ಲಿ ಈತ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದನು. ಡಿಸೆಂಬರ್ ತಿಂಗಳಿನಲ್ಲಿ ನಡೆದ ಕಳ್ಳತನದ ಆರೋಪದಲ್ಲಿ ಬಂಧಿಯಾಗಿ ಸೆರೆವಾಸ ಅನುಭವಿಸಿದ್ದನು.