ಉಳ್ಳಾಲ ಕಡಲ್ಕೊರೆತ ತಡೆಗೆ 911 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ
ಮಂಗಳೂರು, ಜೂನ್ 12: ಕಳೆದ 25 ವರ್ಷಗಳ ಅವಧಿಯಲ್ಲಿ ಉಳ್ಳಾಲ ಕಡಲ ಕಿನಾರೆಯ ಕಡಲ್ಕೊರೆತ ತಡೆಗೆ 35 ಕೋಟಿ ರೂ ಖರ್ಚು ಮಾಡಲಾಗಿದೆ. ಇದೀಗ ರಾಜ್ಯ ಸರ್ಕಾರ ಉಳ್ಳಾಲ ಕಡಲ ಕಿನಾರೆಯಲ್ಲಿ ತಡೆಗೋಡೆ ನಿರ್ಮಿಸಲು 911 ಕೋಟಿ ರೂ. ವಿನಿಯೋಗಿಸಲಿದೆ.
50 ಮೀಟರ್ ಅಂತರದಲ್ಲಿ ನಿರ್ಮಿಸಲಾಗುವ ತಡೆಗೋಡೆಯು ಸಮುದ್ರದ ಭಾರೀ ಅಲೆಗಳನ್ನು ತಡೆಯಲಿದ್ದು, ಇದರಿಂದ ಕಿನಾರೆಯ 143 ಮನೆಗಳಿಗೆ ರಕ್ಷಣೆ ಸಿಗಲಿದೆ. ಉಳ್ಳಾಲ ಕಡಲ ಕಿನಾರೆಗೆ ಹೊಂದಿಕೊಂಡಿರುವ ಹಿಲರಿನಗರ, ಮುಕ್ಕಚ್ಚೇರಿ, ಮೊಗವೀರಪಟ್ಣ, ಕೈಕೋ ಮತ್ತು ಕೋಟೆಪುರದಲ್ಲಿ ತಡೆಗೋಡೆ ನಿರ್ಮಾಣಗೊಳ್ಳಲಿದೆ.

ಆದರೆ "ನೀರಿಗೆ ಹಣ ಹರಿಯಬಿಡುವ ಬದಲಾಗಿ ಒಟ್ಟು ಹಣದಲ್ಲಿ ಅರ್ಧದಷ್ಟನ್ನು ರಸ್ತೆಗಳು, ಕುಡಿಯುವ ನೀರು, ವಿದ್ಯುತ್, ಫೋನ್ ಲೈನುಗಳು ಮತ್ತು ಪಕ್ಕಾ ಮನೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಬಹುದು" ಎಂದು ಉಳ್ಳಾಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಇಲ್ಲಿನ ಮನೆಗಳು ಶಿಥಿಲಾವಸ್ಥೆಯಲ್ಲಿದ್ದು, ರಾಜಕಾರಣಿಗಳ ಭರವಸೆಯ ಮಾತಿನಲ್ಲಿ ಸ್ಥಳೀಯರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದು ಅವರ ಅಭಿಪ್ರಾಯ.
ಇದರ ಜತೆಗೆ ಇಲ್ಲಿ ಸಿಆರ್'ಝಡ್ ನಿಯಮಗಳು ಉಲ್ಲಂಘನೆಯಾಗಿವೆ. ಸಮುದ್ರ ಕಿನಾರೆಯಲ್ಲಿ ಮನೆ ನಿರ್ಮಿಸುವುದಕ್ಕೆ ಅಧಿಕಾರಿಗಳು ಆಕ್ಷೇಪಿಸಿದ್ದರೂ, ಸ್ಥಳೀಯ ರಾಜಕಾರಣಿಗಳು ಅಧಿಕಾರಿಗಳ ಕ್ರಮ ತಡೆಹಿಡಿದಿದ್ದರು. ಹೀಗಾಗಿ ಇವತ್ತು ಮನೆಗಳು ಸಮುದ್ರಪಾಲಾಗುತ್ತಿವೆ ಎಂಬ ಟೀಕೆಗಳು ಕೇಳಿಬಂದಿವೆ.
ಕರಾವಳಿ ಪ್ರದೇಶದಲ್ಲಿ ಕಡಲ್ಕೊರೆತ ತಡೆಯಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಕಳೆದ 25 ವರ್ಷಗಳ ಅವಧಿಯಲ್ಲಿ ತೊಂದರೆಗೊಳಗಾಗಿರುವ 800 ಮೀಟರ್ ಪ್ರದೇಶವು 400 ಮೀಟರಿಗೆ ಕಡಿತಗೊಂಡಿದೆ. ಈ ಎಲ್ಲ ಸಮಸ್ಯೆ ಮುಂದಿಟ್ಟುಕೊಂಡು ಕಡಲ ಕಿನಾರೆಯನ್ನು ಬಫರ್ ಝೋನ್/ಮಾನವ ವಾಸ್ತವ್ಯ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ.












Click it and Unblock the Notifications