ಮಂಗಳೂರಲ್ಲಿ ದೈವ ಪೀಠ ಧ್ವಂಸ : ಪ್ರತಿಭಟನೆಗೆ ಸಿದ್ಧತೆ
ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ನಗರದ ಉರ್ವಾಸ್ಟೋರ್ ನಲ್ಲಿ ಸುಮಾರು ೮೦ ವರ್ಷಗಳಿಂದ ಇದ್ದ ದೈವದ ಪೀಠ ಹಾಗು ವೈದ್ಯನಾಥ ಯುವಕ ಮಂಡಲದ ಕಟ್ಟಡವನ್ನು ಧ್ವಂಸ ಮಾಡಲಾಗಿದೆ. ಇದೀಗ ಇಲ್ಲಿನ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳೂರು, ಮೇ 19: ನಗರದ ಉರ್ವಾಸ್ಟೋರ್ ನಲ್ಲಿ ಸುಮಾರು ೮೦ ವರ್ಷಗಳಿಂದ ಇದ್ದ ದೈವದ ಪೀಠ ಹಾಗು ವೈದ್ಯನಾಥ ಯುವಕ ಮಂಡಲದ ಕಟ್ಟಡವನ್ನು ಧ್ವಂಸ ಮಾಡಲಾಗಿದೆ. ಇಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಇದನ್ನು ಇತ್ತೀಚೆಗೆ ಕೆಡವಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಂತೋಷ್ ಕುಮಾರ್ ಅವರ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶ್ರೀ ಕೋಟೆದ ಬಬ್ಬುಸ್ವಾಮಿ ದೈವಸ್ಥಾನ ಸೇವಾ ಸಮಿತಿ ವತಿಯಿಂದ ಸೋಮವಾರ ಬೆಳಗ್ಗೆ 10ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷರಾದ ರೋಹಿತಾಕ್ಷ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಸುಮಾರು ೮೦ ವರ್ಷಗಳಿಂದ ರೇಡಿಯೋ ಗುಡ್ಡದಲ್ಲಿ ಸ್ವಾಮಿ ಹಾಗು ಪರಿವಾರ ದೈವಗಳನ್ನು ಆರಾಧಿಸಿಕೊಂಡು ಬಂದಿದ್ದೆವು. ವರ್ಷವಧಿ ನೇಮೋತ್ಸವ ಕೂಡ ನೆರವೇರಿಸಿ ಕೊಂಡು ಬರಲಾಗಿದೆ. ಆದರೆ ಈಗ ಈ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುತ್ತಿದ್ದು ನಮ್ಮ ದೈವದ ಪೀಠವನ್ನು ಏಕಾಏಕಿ ನೆಲಸಮಗೊಳಿಸಲಾಗಿದೆ ಎಂದು ಅವರು ದೂರಿದ್ದಾರೆ.

ಅಲ್ಲದೆ ಬಹಳಷ್ಟು ವರ್ಷಗಳಿಂದ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವ ಶ್ರೀವೈದ್ಯನಾಥ ಯುವಕ ಮಂಡಲ ಎಂಬ ಸಂಘದ ಕಟ್ಟಡ ಕೂಡಾ ಇದೆ ಸ್ಥಳದಲ್ಲಿತ್ತು . ಬಡ ಮಕ್ಕಳಿಗೆ ಉಚಿತ ಪುಸ್ತಕವನ್ನು ದಾನ ಮಾಡುವ ಪರಿಪಾಠ ಮೊದಲಿಗೆ ಪ್ರಾರಂಭಿಸಿದ ಕೀರ್ತಿ ಕೂಡಾ ಇದೇ ಸಂಘಕ್ಕೆ ಸಲ್ಲುತ್ತದೆ. ಈ ಸಂಘದ ಕಟ್ಟಡವನ್ನು ಕೂಡಾ ಧ್ವಸಂಗೊಳಿಸಲಾಗಿದೆ ಎನ್ನುತ್ತಾರೆ ರೋಹಿತಾಕ್ಷ.

ಈ ಕಟ್ಟಡಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕೇಸು ಇದೆ. ಹೀಗಿದ್ದೂ ಯಾವುದೇ ನೋಟೀಸು ನೀಡದೆ, ಗ್ರಾಮಸ್ಥರ ವಿರೋಧದ ನಡುವೆಯೇ ಕಟ್ಟಡ ಮತ್ತು ಪೀಠವನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಂತೋಷ್ ಕುಮಾರ್ ನೆಲಸಮಗೊಳಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಜಿಲ್ಲೆಯ ಎಲ್ಲ ಬಬ್ಬುಸ್ವಾಮಿ ದೈವಸ್ಥಾನದ ಸಮಿತಿಯವರಿಗೂ ಸೋಮವಾರ ನಡೆಯಲಿರುವ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗಿದೆ.
{promotion-urls}












Click it and Unblock the Notifications