ಭಿಕ್ಷೆಯಿಂದ ಬಂದ 1ಲಕ್ಷ ರೂಪಾಯಿಯನ್ನು ಬಪ್ಪನಾಡು ಅನ್ನದಾನಕ್ಕೆ ನೀಡಿದ ವೃದ್ಧೆ
ಮಂಗಳೂರು, ಅಕ್ಟೋಬರ್ 19: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತೆ, ಎಂಭತ್ತೊಂದು ವಯಸ್ಸಿನ ವೃದ್ಧೆ ತಾನು ಭಿಕ್ಷೆ ಬೇಡಿ ಬಂದ ಒಂದು ಲಕ್ಷ ರೂಪಾಯಿ ಹಣವನ್ನು ಅಯ್ಯಪ್ಪನ ಪ್ರಿಯ ಸೇವೆಯಾದ ಅನ್ನದಾನಕ್ಕೆ ನೀಡಿ ಮಾದರಿಯಾಗಿದ್ದಾರೆ.
ಕುಂದಾಪುರ ಮೂಲದ ಅಶ್ವತ್ಥಮ್ಮ ಎಂಬ ವೃದ್ಧೆ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಿಕ್ಷೆ ಬೇಡಿ ಭಿಕ್ಷೆಯಿಂದ ಬಂದ ಒಂದು ಲಕ್ಷ ರೂಪಾಯಿ ಹಣವನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನ್ನದಾನ ನಿಧಿಗೆ ಸಮರ್ಪಿಸಿದ್ದಾರೆ.
Surathkal Toll Gate : ಸುರತ್ಕಲ್ ಟೋಲ್ ಬಂದ್ಗೆ ಆಗ್ರಹಿಸಿ ಪ್ರತಿಭಟನಾಕಾರರ ಆಕ್ರೋಶ; 360 ಜನ ವಶಕ್ಕೆ
ಪ್ರತಿ ವರ್ಷ ನಾನಾ ದೇವಸ್ಥಾನಗಳಿಗೆ ಅನ್ನದಾನಕ್ಕಾಗಿ ಹಣ ನೀಡುವ ಅಶ್ವತ್ಥಮ್ಮ ಕಳೆದ ಬಾರಿ ಪೊಳಲಿ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ಹಣ ನೀಡಿದ್ದರು. ಈ ಬಾರಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಒಂದು ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ.
ವೃದ್ಧೆಯನ್ನು ಗೌರವಿಸಿದ ದೇವಸ್ಥಾನ ಆಡಳಿತ ಮಂಡಳಿ
ಅಕ್ಟೋಬರ್ 17ರಂದು ಬಪ್ಪಾನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಅಶ್ವತ್ಥಮ್ಮ, ದೇವಸ್ಥಾನದ ಮಧ್ಯಾಹ್ನದ ಅನ್ನದಾನ ನಿಧಿಗೆ ತನ್ನ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. ಬಪ್ಪನಾಡು ದೇವಸ್ಥಾನದ ಆಡಳಿತ ಮೊಕ್ತೇಸ್ವರ ಮನೋಹರ ಶೆಟ್ಟಿ ಅಶ್ವತ್ಥಮ್ಮ ಅವರ ಸಹಾಯಧನ ಸ್ವೀಕರಿಸಿ ದೇವಳದ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿದ್ದಾರೆ. ತಾನು, ತನ್ನ ಕುಟುಂಬ ಎಂದು ಸ್ವಾರ್ಥ ಜೀವನ ನಡೆಸುವ ಈ ಕಾಲಘಟ್ಟದಲ್ಲಿ ಇಳಿವಯಸ್ಸಿನ ವೃದ್ಧೆ ಅಶ್ವತ್ಥಮ್ಮ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಣವನ್ನು ದೇವಸ್ಥಾನದ ಅನ್ನದಾನಕ್ಕೆ ನೀಡಿ ಮಾದರಿಯಾಗಿದ್ದಾರೆ.
ಮಕ್ಕಳ ಅಗಲಿಕೆ ನಂತರ ಭಿಕ್ಷಾಟನೆಗೆ ಬಂದ ಅಶ್ವತ್ಥಮ್ಮ
ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೋಡು ನಿವಾಸಿಯಾಗಿರುವ ಅಶ್ವತ್ಥಮ್ಮರ ಪತಿ 18 ವರ್ಷಗಳ ಹಿಂದೆ ಮೃತರಾಗಿದ್ದಾರೆ. ಇವರ ಮಕ್ಕಳೂ ಇಹಲೋಕ ತ್ಯಜಿಸಿದ್ದಾರೆ. ಧಾರ್ಮಿಕ ಪ್ರಜ್ಞೆ ಹೊಂದಿರುವ ಅಶ್ವತ್ಥಮ್ಮ ಆ ಬಳಿಕ ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡಲು ನಿರ್ಧಾರ ಮಾಡಿದ್ದಾರೆ. ಆದರೆ ಭಿಕ್ಷೆ ಬೇಡಿದ ಹಣವನ್ನು ಎಳ್ಳಷ್ಟೂ ಸ್ವಂತಕ್ಕೆ ಉಪಯೋಗಿಸದ ಅಶ್ವತ್ಥಮ್ಮ ಈವರೆಗೆ ಏಳು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ದೇವಸ್ಥಾನ, ಆಶ್ರಮಗಳಿಗೆ ದೇಣಿಗೆಯಾಗಿ ನೀಡಿದ್ದಾರೆ.
ಅಯ್ಯಪ್ಪ ಸ್ವಾಮಿಯ ಪರಮ ಭಕ್ತೆ ಅಶ್ವತ್ಥಮ್ಮ
81ರ ಹರೆಯದ ಇಳಿವಯಸ್ಸಿನ ಅಶ್ವತ್ಥಮ್ಮ ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೇ ನೀಡಿ ಗಮನ ಸೆಳೆದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಭಿಕ್ಷೆ ಬೇಡುತ್ತಿರುವ 80ರ ಹರೆಯ ಅಶ್ವತ್ಥಮ್ಮ ತಾನು ಭಿಕ್ಷೆ ಬೇಡಿ ಬಂದ ಹಣದಲ್ಲಿ ಈ ವರ್ಷ ಬಪ್ಪನಾಡು ದೇವಸ್ಥಾನಕ್ಕೆ ನೀಡಿದ್ದಾರೆ. ಕಳೆದ ವರ್ಷ ಒಂದು ಲಕ್ಷ ರೂಪಾಯಿಯನ್ನು ಪೊಳಲಿ ದೇವಸ್ಥಾನದ ಅನ್ನದಾನಕ್ಕೆ ನೀಡಿದ್ದರು.
ವರ್ಷದ ಬಹುತೇಕ ಸಮಯ ಅಯ್ಯಪ್ಪ ಮಾಲಾಧಾರಿಯಾಗಿಯೇ ಇರುವ ಅಶ್ವತ್ಥಮ್ಮ, ಅಯ್ಯಪ್ಪ ಸ್ವಾಮಿಯ ಪರಮ ಭಕ್ತೆಯಾಗಿದ್ದಾರೆ. ಅಯ್ಯಪ್ಪ ಸ್ವಾಮಿಯ ವೃತಾಚರಣೆಯನ್ನು ಶ್ರದ್ಧಾ- ಭಕ್ತಿಯಿಂದ ಮಾಡುತ್ತಾರೆ. ಅಯ್ಯಪ್ಪನ ವ್ರತ ನಿಯಮ ಸಾರುವ ಅನ್ನದಾನದ ಬಗ್ಗೆ ವಿಶೇಷ ಭಾವನೆ ಹೊಂದಿದ್ದಾರೆ. ಶಬರಿಮಲೆಯ ಪಂಪೆ, ಪಂದಳ, ಎರಿಮಲೆಯಲ್ಲೂ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರಿಗೆ ಅನ್ನಪೂರ್ಣೆಯಾಗಿ ಅಶ್ವತ್ಥಮ್ಮ ಅನ್ನದಾನವನ್ನು ಮಾಡಿದ್ದಾರೆ.
ಸಮಾಜ ನೀಡಿದ ಹಣವನ್ನು ಸಮಾಜಕ್ಕೆ ಅರ್ಪಿಸಿದ ವೃದ್ಧೆ
ಅಶ್ವತ್ಥಮ್ಮ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜಾತ್ರೋತ್ಸವ ಸಂದರ್ಭದಲ್ಲಿ ಸೇರಿದಂತೆ ಕ್ಷೇತ್ರದಲ್ಲಿ ತನಗೆ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಕೂಡಿಟ್ಟು ಅನ್ನದಾನದ ನಿಧಿಗೆ ಸಮರ್ಪಣೆ ಮಾಡಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ನಿತ್ಯ ಪಿಗ್ಮಿಗೆ ಕಟ್ಟಿ ಲಕ್ಷ ರೂಪಾಯಿ ಜಮೆಯಾದ ಬಳಿಕ ಆ ಹಣವನ್ನು ಅಶ್ವತ್ಥಮ್ಮ ದೇವಸ್ಥಾನದ ಅನ್ನದಾನಕ್ಕೆ ನೀಡುತ್ತಾರೆ.
ಅಶ್ವತ್ಥಮ್ಮ ಈವರೆಗೆ ಏಳು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ದೇವಸ್ಥಾನಗಳಿಗೆ ದೇಣಿಗೆಯಾಗಿ ನೀಡಿದ್ದಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನಕ್ಕೆ ಒಂದು ಲಕ್ಷ ರೂಪಾಯಿ, ಪೊಳಲಿ ಅಖಿಲೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳಿಗೆ ಒಂದೂವರೆ ಲಕ್ಷ ರೂಪಾಯಿ ದೇಣಿಗೆ, ಗಂಗೊಳ್ಳಿ ದೇವಸ್ಥಾನದಲ್ಲಿ ಅನ್ನದಾನ, ಪೊಳಲಿ ದೇವಸ್ಥಾನದ ಅನ್ನದಾನ ಸೇರಿದಂತೆ ನಾನಾ ದೇಗುಲ ಹಾಗೂ ಆಶ್ರಮಗಳಿಗೆ ಅಶ್ವತ್ಥಮ್ಮ ದೇಣಿಗೆ ನೀಡಿದ್ದಾರೆ.
ತನ್ನ ಅನ್ನದಾನದ ಸೇವೆಯ ಬಗ್ಗೆ ಮಾತನಾಡಿದ ಅಶ್ವತ್ಥಮ್ಮ, "ಸಮಾಜ ನೀಡಿದ ಹಣವನ್ನು ಸಮಾಜಕ್ಕೆ ಅರ್ಪಿಸಿದ್ದೇನೆ. ಈವರೆಗೆ ದಾನ ನೀಡಿದ್ದನ್ನು ಲೆಕ್ಕ ಇಟ್ಟಿಲ್ಲ. ದೇವರು ಎಲ್ಲರನ್ನೂ ಚೆನ್ನಾಗಿಡಲಿ. ಹಸಿದ ಹೊಟ್ಟೆಯಲ್ಲಿ ಯಾರೂ ಇರಬಾರದೆಂಬುವುದೇ ನನ್ನ ಉದ್ದೇಶ" ಎಂದು ಹೇಳಿದ್ದಾರೆ.