ಬೆಳ್ತಗಂಡಿ: 2014ರಲ್ಲಿ ಅತ್ಯಾಚಾರ, ಆರೋಪಿಗೆ 7 ವರ್ಷ ಕಾರಗೃಹ
ಮಂಗಳೂರು, ಫೆಬ್ರವರಿ. 17 : 2014 ಜುಲೈನಲ್ಲಿ ಬೆಳ್ತಗಂಡಿಯ ಕಡಿರುದ್ಯಾವರ ಗ್ರಾಮದ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶುಕ್ರವಾರ ಮಂಗಳೂರು ಸೆಷನ್ ನ್ಯಾಯಾಲಯ ಕಲಂ 376 ಮತ್ತು 417 ಪ್ರಕಾರ 7 ವರ್ಷ ಕಾರಾಗೃಹ ಶಿಕ್ಷೆ ಮತ್ತು 2 ಸಾವಿರ ರೂ.ದಂಡ ವಿಧಿಸಿ ಆದೇಶ ಹೊರಡಿಸಿದೆ.
ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕರೆಕೋಡಿ ಮನೆ ನಿವಾಸಿ ಪ್ರವೀಣ್ (29) ಶಿಕ್ಷೆಗೊಳಗಾದ ಆರೋಪಿ. ಈತ ಬೆಳ್ತಗಂಡಿ ಕಡಿರುದ್ಯಾವರ ಗ್ರಾಮದ 22 ವರ್ಷ ವಯಸ್ಸಿನ ಯುವತಿ ಮೇಲೆ ಅತ್ಯಾಚಾರವಿಸಗಿದ್ದ.
ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿಯಾಗಿರುವ ನಾಗೇಶ್ ಎಂಬಾತನ ವಿಚಾರಣೆ ಮುಂದುವರೆಯುತ್ತಿದೆ. ಇದಲ್ಲದೆ ಪ್ರವೀಣ್ ಕಲ್ಲಡ್ಕದಲ್ಲಿ ನಡೆದ ಇನ್ನೊಂದು ಅತ್ಯಾಚಾರದಲ್ಲಿ ಭಾಗಿಯಾಗಿದ್ದು, ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಪ್ರಕರಣದ ವಿವರ: ಎರಡನೇ ಆರೋಪಿ ನಾಗೇಶ ಎಂಬಾತನಿಂದ ಯುವತಿ ಮೊಬೈಲ್ ನಂಬರ್ ಪಡೆದುಕೊಂಡಿದ್ದ ಪ್ರವೀಣ ತಾನು ನಾಗೇಶನ ಗೆಳೆಯ ಎಂದು ಪರಿಚಯ ಮಾಡಿಕೊಂಡು ಆಕೆಯೊಂದಿಗೆ ಮಾತನಾಡಲಾರಂಭಿಸಿದ್ದ.
ಮದುವೆಯ ಬಗ್ಗೆ ಮಾತನಾಡಬೇಕಿದೆ ಎಂದು ಯುವತಿಗೆ ಕರೆ ಮಾಡಿ 2014ರ ಜುಲೈ 8ರಂದು ಕರೆದಿದ್ದ. ಇದನ್ನು ನಂಬಿದ ಯುವತಿ ಪ್ರವೀಣ್ ಹೇಳಿದ್ ಜಾಗಕ್ಕೆ ಬಂದಿದ್ದಳು.
ಆಗ ನಿನ್ನ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ ಅಲ್ಲಿನ ಲಾಡ್ಜ್ ಗೆ ಕರೆದೊಯ್ದು ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದ. ಬಳಿಕ ಆಕೆ ಗರ್ಭಿಣಿಯಾಗಿದ್ದಳು.
ಮದುವೆಯಾಗುವಂತೆ ಒತ್ತಾಯ ಮಾಡಿದರೂ ಆತ ನಿರಾಕರಿಸಿದ್ದ. ಆತ ಮೋಸ ಮಾಡಿರುವುದನ್ನು ಅರಿತು ಯುವತಿ ಬೆಳ್ತಂಗಡಿಯ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಳು.
ಯುವತಿ 2015 ಜುಲೈ 8 ರಂದು ಬೆಳ್ತಂಗಡಿ ಠಾಣೆಗೆ ಪ್ರವೀಣನ ವಿರುದ್ಧ ಅತ್ಯಾಚಾರ ದೂರು ನೀಡಿದ್ದಳು. ಬಳಿಕ ಪೊಲೀಸರು ಪ್ರವೀಣ್ ನನ್ನು ವಶಕ್ಕೆ ಪಡೆದುಕೊಂಡಿದ್ದರು.