ಮಂಗಳೂರು : ಲಕ್ಷದ್ವೀಪದಿಂದ ಬಂದ ನೌಕೆ ಮುಳುಗಡೆ
ಮಂಗಳೂರು, ಜ.13 : ಲಕ್ಷ ದ್ವೀಪದ ಕಿಲ್ತಾನ್ ಎಂಬಲ್ಲಿಂದ ಸರಕು ಹೇರಿಕೊಂಡು ಮಂಗಳೂರಿಗೆ ಬರುತ್ತಿದ್ದ ನೌಕೆಯೊಂದು ಸಮುದ್ರದಲ್ಲಿ ಮುಳಗಿದ ಘಟನೆ ನಡೆದಿದೆ. ನೌಕೆಯಲ್ಲಿದ್ದ ಏಳು ಮಂದಿಯನ್ನು ಮೀನುಗಾರರು ರಕ್ಷಿಸಿದ್ದಾರೆ.
ಜನವರಿ 10 ರಂದು ಕಿಲ್ತಾನ್ ದ್ವೀಪದಿಂದ ಹೊರಟಿದ್ದ ವಿಜಯಲಕ್ಷ್ಮಿ ಎಂಬ ಹೆಸರಿನ ನೌಕೆಯು ಸೋಮವಾರ ಮುಂಜಾನೆ 4 ಗಂಟೆಯ ಸುಮಾರಿಗೆ ಮಂಗಳೂರು ಸಮುದ್ರದಿಂದ 5 ನಾಟಿಕಲ್ ದೂರದಲ್ಲಿದ್ದಾಗ ಅಪಘಾತಕ್ಕೀಡಾಗಿದೆ. [ಹೊತ್ತಿ ಉರಿದ ಕಾವಲು ಪಡೆ ನೌಕೆ]

ನೌಕೆಯ ಕ್ಯಾಪ್ಟನ್ ಜಿ.ಮುತ್ತು (46), ಸಿಬ್ಬಂದಿಯಾದ ಟಿ. ಕೃಷ್ಣನ್ (37), ಪಿ.ಕರುಣಾನಿಧಿ (42), ಕೆ.ಮಾಣಿಕ್ಯವೇಲು (39), ಪನ್ನೀರ್ ಸೆಲ್ವಂ (59), ಪಿ.ಮಣಿಕಂಠನ್ (26), ಕೆ.ರಘುರಾಮ್ (24) ಅವರನ್ನು ರಕ್ಷಿಸಿದ್ದಾರೆ. ಇವರು ಸುಮಾರು ಏಳು ಗಂಟೆಗಳ ಕಾಲ ಸಮುದ್ರದಲ್ಲಿದ್ದರು.
ಅವಘಡಕ್ಕೀಡಾದ ನೌಕೆ ತಮಿಳುನಾಡು ಮೂಲದ ವಿ.ವಿಜಯಲಕ್ಷ್ಮಿ ಅವರಿಗೆ ಸೇರಿದ್ದಾಗಿದೆ. ಎರಡು ವರ್ಷಗಳ ಹಿಂದೆ ಈ ನೌಕೆಯನ್ನು ನಿರ್ಮಿಸಲಾಗಿದ್ದು, ಇದರ ಮೌಲ್ಯ 1.5 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.
ಮೀನುಗಾರರಿಗೆ ಆತಂಕ : ಸಮುದ್ರದಲ್ಲಿ ಮುಳುಗಿದ ನೌಕೆಯ ವಿಲೇವಾರಿ ಆಗಿಲ್ಲ. ಆದ್ದರಿಂದ ಈ ಪ್ರದೇಶದಿಂದ ಹಾದು ಬರುವ ಹಡಗು, ಮೀನುಗಾರಿಕೆ ದೋಣಿಗಳು ಅಪಾಯಕ್ಕೆ ಸಿಲುಕುವ ಆತಂಕ ಎದುರಾಗಿದೆ. ಸಮುದ್ರದ ನೀರಿನ ಇಳಿತದ ಸಮಯದಲ್ಲಿ ಮುಳಗಿದ ನೌಕೆ ಕಾಣುತ್ತಿದೆ. ಉಬ್ಬರದ ಸಮಯದಲ್ಲಿ ಕಾಣದಿರುವುದರಿಂದ ಮೀನುಗಾರರು ಆತಂಕಗೊಂಡಿದ್ದಾರೆ.












Click it and Unblock the Notifications