ಅಫ್ಘಾನ್ನಿಂದ ಮಂಗಳೂರಿಗೆ ಮರಳಿದವರು ತೆರೆದಿಟ್ಟ ಭಯಾನಕ ಸಂಗತಿ!
ಮಂಗಳೂರು, ಆಗಸ್ಟ್ 24; ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಸೃಷ್ಟಿಸಿದ ನರಕಕೂಪದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಣೆ ಮಾಡುವ ಕೆಲಸ ಭರದಿಂದ ನಡೆಯುತ್ತಿದೆ. ಪ್ರತಿದಿನವೂ ಕನ್ನಡಿಗರ ರಕ್ಷಣೆಯಾಗುತ್ತಿದ್ದು, ಕಾಬೂಲ್ ನಲ್ಲಿ ನ್ಯಾಟೋ ಮಿಲಿಟರಿ ಪಡೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರಿನ ನಾಲ್ವರು ವಾಪಸ್ ಆಗಿದ್ದಾರೆ.
Recommended Video
ನಾಲ್ವರು ಸೋಮವಾರ ರಾತ್ರಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಾಲ್ವರನ್ನು ಅಮೆರಿಕ ರಾಯಭಾರ ಕಚೇರಿ ತನ್ನ ವಿಮಾನದ ಮೂಲಕ ಕಾಬೂಲ್ನಿಂದ ಕತಾರ್ಗೆ ಕರೆದುಕೊಂಡು ಬಂದಿತ್ತು. ಬಳಿಕ ಕತಾರ್ನಿಂದ ದೆಹಲಿ, ದೆಹಲಿಯಿಂದ ಮಂಗಳೂರಿಗೆ ಬಂದಿದ್ದಾರೆ.
ಮಂಗಳೂರಿನ ಬಿಜೈ ಶ್ರವಣ್ ಅಂಚನ್, ಮೂಡಬಿದಿರೆಯ ಜಗದೀಶ್ ಪೂಜಾರಿ, ಬಜಪೆಯ ದಿನೇಶ್ ರೈ, ಕಿನ್ನಿಗೋಳಿ ಪಕ್ಷಿಕೆರೆಯ ನಿವಾಸಿ ಡೆಸ್ಮಂಡ್ ಡಿಸೋಜಾ ಕಾಬೂಲ್ನಿಂದ ಸುರಕ್ಷಿತವಾಗಿ ಮಂಗಳೂರು ತಲುಪಿದ್ದು, ಸ್ನೇಹಿತರು, ಕುಟುಂಬದವರು ಸ್ವಾಗತಿಸಿದರು.

ಆಗಸ್ಟ್ 23 ರಾತ್ರಿ ದೆಹಲಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಲ್ವರು ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಲ್ವರು ನರಕ ಭೂಮಿಯಲ್ಲಿ ತಮಗಾದ ಅನುಭವಗಳನ್ನು ತೆರೆದಿಟ್ಟಿದ್ದಾರೆ.
ಮಂಗಳೂರಿನ ಬಜಪೆ ನಿವಾಸಿ ದಿನೇಶ್ ರೈ ಮಾತನಾಡಿ, "ನಾನು ಕಳೆದ 10 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ನ್ಯಾಟೋ ಮಿಲಿಟರಿ ಪಡೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಮಗೆ ಹೊರಗಿನ ಜನರ ಯಾವುದೇ ಸಂಪರ್ಕ ಇರೋದಿಲ್ಲ. ನಾವಿದ್ದ ಜಾಗಕ್ಕೆ ನ್ಯಾಟೋ ಸಂಪೂರ್ಣ ಭಧ್ರತೆ ನೀಡಿದೆ. ಕಳೆದ ಕೆಲ ದಿನಗಳಿಂದ ಕಾಬೂಲ್ ಸೇರಿದಂತೆ ಪೂರ್ತಿ ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶ ವಾಗುತ್ತಿರುವುದು ನೋಡಿ ಆತಂಕ ಉಂಟಾಗಿತ್ತು" ಎಂದರು.

"ನಮ್ಮನೆಲೆಗೆ ಅವರು ಬರೋಕೆ ಸಾಧ್ಯವಾಗಿಲ್ಲ. ನಮ್ಮ ನೆಲೆಯ ಹತ್ತಿರದಲ್ಲೇ ಕಾಬೂಲ್ ವಿಮಾನ ನಿಲ್ದಾಣ ಇರುವುದರಿಂದ ಸ್ಥಳೀಯರು ಅಮೆರಿಕ ವಿಮಾನಕ್ಕೆ ಮುತ್ತಿಗೆ ಹಾಕಿದ್ದರು. ಈ ದೃಶ್ಯವನ್ನು ನಾನು ಕಣ್ಣಾರೆ ಕಂಡಿದ್ದೇನೆ ಮತ್ತು ಹೊರಭಾಗದಲ್ಲಿ ಗುಂಡಿನ ಮೊರೆತವಾಗುತ್ತಿತ್ತು. ನಾವು ಕಾಬೂಲ್ನಲ್ಲಿ ಇದ್ದಿದ್ದರಿಂದ ಮನೆಯವರಿಗೂ ಭಯವಾಗಿತ್ತು. ಸದ್ಯ ನಾವು ಸೇಫ್ ಆಗಿ ಮರಳಿ ಬಂದಿದ್ದೇವೆ ಅನ್ನೋದೊಂದೇ ಖುಷಿ" ಎಂದು ದಿನೇಶ್ ರೈ ಹೇಳಿದರು.
ಸ್ಥಿತಿ ಬದಲಾಯಿತು; ಮೂಡಬಿದಿರೆಯ ಜಗದೀಶ್ ಪೂಜಾರಿ ಮಾತನಾಡಿ, "ನಾನೂ ಕಳೆದ 10 ವರ್ಷಗಳಿಂದ ಕಾಬೂಲ್ನಲ್ಲಿ ಅಮೆರಿಕ ಆರ್ಮಿಯ ಜೊತೆ ಕಾರ್ಯ ನಿರ್ವಹಿಸುತ್ತಿದ್ದೆ. ಆಗಸ್ಟ್ 16ನೇ ತಾರೀಖಿನಿಂದ ಇಡೀ ಕಾಬೂಲ್ ಸ್ಥಿತಿ ಬದಲಾಯಿತು. ಆರ್ಮಿ ಬೇಸ್ ನಲ್ಲಿ ಇದ್ದರೂ, ನ್ಯಾಟೋ ಪಡೆ ರಕ್ಷಣೆ ಇದ್ದರೂ ಸ್ವಲ್ಪ ಆತಂಕ ಇತ್ತು. ನಾನು ಮನೆಯವರಿಗೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ" ಎಂದರು.
"ತಾಲಿಬಾನಿಗಳು ಪೂರ್ಣ ಪ್ರಮಾಣದಲ್ಲಿ ಆಕ್ರಮಿಸಿಕೊಳ್ಳುತ್ತಾರೆ ಅಂತಾ ಭಾವಿಸಿರಲಿಲ್ಲ. ಆದರೆ ಅಮೆರಿಕಾ ಸೇನೆ ಒಂದೊಂದೇ ನೆಲೆಯನ್ನು ಬಿಟ್ಟು ಹೋದ ಹಾಗೆ ತಾಲಿಬಾನಿಗಳು ಇಡೀ ಪ್ರದೇಶವನ್ನು ಆವರಿಸಿಕೊಂಡು ಹೋದರು" ಎಂದು ಜಗದೀಶ್ ಪೂಜಾರಿ ವಿವರಿಸಿದರು.

ಕಿನ್ನಿಗೋಳಿ ಪಕ್ಷಿಕೆರೆಯ ನಿವಾಸಿ ಡೆಸ್ಮಂಡ್ ಡಿಸೋಜಾ ಕೂಡಾ ಅಫ್ಘಾನಿಸ್ತಾನದಲ್ಲಿ ತಮಗಾದ ಅನುಭವ ಹಂಚಿಕೊಂಡರು. "ನಾನು ಅಮೆರಿಕ ಮಿಲಿಟರಿಯ ದಾಸ್ತಾನು ಕಛೇರಿಯ ಆಡಳಿತಾತ್ಮಕ ವಿಭಾಗದಲ್ಲಿ 2011 ರಿಂದ ಕೆಲಸ ಮಾಡುತ್ತಿದ್ದೆ. ಆಗಸ್ಟ್ 17ರಂದು ಅಮೆರಿಕ ಸೇನೆಯ ವಿಮಾನ ಕಾಬೂಲ್ನಿಂದ ನಮ್ಮನ್ನು ಏರ್ ಲಿಫ್ಟ್ ಮಾಡಿತ್ತು. ಕಾಬೂಲ್ನಿಂದ ಕತಾರ್ಗೆ ಅಮೆರಿಕಾ ವಿಮಾನದಲ್ಲಿ ಸುರಕ್ಷಿತವಾಗಿ ಬಿಡಲಾಯಿತು" ಎಂದರು.
"ಕತಾರ್ನಲ್ಲಿ ಭಾರತೀಯ ರಾಯಭಾರಿ ಕಚೇರಿ ತುಂಬಾ ಸಹಾಯ ಮಾಡಿದೆ. ಭಾರತ ಪ್ರಯಾಣಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ಶೀಘ್ರವಾಗಿ ತಯಾರು ಮಾಡಿ ಕೊಟ್ಟಿದೆ. ಹೀಗಾಗಿ ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಾಧ್ಯವಾಯಿತು"ಎಂದು ಡೆಸ್ಮಂಡ್ ಡಿಸೋಜಾ ಹೇಳಿದರು.
ಆಗಸ್ಟ್ 23ರಂದು ಒಟ್ಟು 5 ಮಂದಿ ಅಫ್ಘಾನಿಸ್ತಾನದಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಮತ್ತಷ್ಟು ಜನ ಬರುವ ಸಾಧ್ಯತೆಗಳು ಇದೆ. ಒಟ್ಟಿನ್ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಟ್ಟಹಾಸ ಮೆರೆಯುತ್ತಿದ್ದರೂ, ಕನ್ನಡಿಗರು ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಮರಳಿ ಭಾರತಕ್ಕೆ ಬರುತ್ತಿರುವುದು ನಿಜಕ್ಕೂ ಖುಷಿಯ ಸಂಗತಿಯಾಗಿದೆ.












Click it and Unblock the Notifications