ಮಂಗಳೂರಿನಲ್ಲಿ 21 ಆಧಾರ್ ನೋಂದಣಿ ಕೇಂದ್ರಗಳು ಆರಂಭ
ಮಂಗಳೂರು, ಫೆ. 23 : ಮಂಗಳೂರಿನಲ್ಲಿ ಇನ್ನು ಮುಂದೆ ಸುಲಭವಾಗಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು. ಜಿಲ್ಲೆಯಲ್ಲಿ ಆಧಾರ್ ಕಾರ್ಡ್ನ 21 ಸೇವಾ ಕೇಂದ್ರಗಳನ್ನು ಮುಂದಿನವಾರ ಆರಂಭಿಸಲಾಗುತ್ತಿದೆ. ಅಟಲ್ ಜೀ ಜನಸ್ನೇಹಿ ಕೇಂದ್ರ ಹಾಗೂ ಮಂಗಳೂರು ಒನ್ ಸೇವಾ ಕೇಂದ್ರಗಳಲ್ಲಿ ಆಧಾರ್ ಕೇಂದ್ರ ಆರಂಭಗೊಳ್ಳಲಿವೆ.
21 ಶಾಶ್ವತ ಸೇವಾ ಕೇಂದ್ರಗಳನ್ನು ತೆರೆಯಲು ಬೇಕಾದ ವ್ಯವಸ್ಥೆ ಈಗಾಗಲೇ ಸಿದ್ಧವಾಗಿದೆ. ಕೇಂದ್ರಕ್ಕೆ ಬೇಕಾದ ಕಂಪ್ಯೂಟರ್, ಸಾಫ್ಟ್ವೇರ್ ಕಿಟ್ ಆಗಮಿಸಿದ್ದು ಇವುಗಳ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ತರಬೇತಿ ನೀಡುವ ಕಾರ್ಯ ನಡೆಯುತ್ತಿದೆ. [ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಈ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪಡೆದಿರುವ ಆಧಾರ್ ಕಾರ್ಡ್ ಕಳೆದುಕೊಂಡರೆ, ಅದರ ನಂಬರ್ ನೀಡಿ ಹೊಸ ಆಧಾರ್ ಕಾರ್ಡ್ ಪಡೆದುಕೊಳ್ಳುವ ಸೌಲಭ್ಯವೂ ಇದೆ. ಈ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಪಡೆಯಲು ಉಚಿತವಾಗಿ ಹೆಸರು ನೋಂದಾಯಿಸಬಹುದಾಗಿದೆ. [ಪಾಸ್ ಪೋರ್ಟ್ ಪಡೆಯಲು ಆಧಾರ್ ಕಡ್ಡಾಯ?]
ಕೇಂದ್ರಗಳು ಎಲ್ಲೆಲ್ಲಿ : ಮಂಗಳೂರಿನ ಲಾಲ್ ಬಾಗ್, ಬಾವುಟ ಗುಡ್ಡೆ, ಕದ್ರಿ ಹಾಗೂ ಸುರತ್ಕಲ್ನಲ್ಲಿರುವ ಮಂಗಳೂರು ಒನ್ ಕೇಂದ್ರಗಳಲ್ಲಿ ಮುಂದಿನ ವಾರದಿಂದ ಆಧಾರ್ ನೋಂದಣಿ ಕೇಂದ್ರ ಆರಂಭವಾಗಲಿದೆ.
ಹಾಗೆಯೇ ಅಟಲ್ ಜೀ ಜನಸ್ನೇಹ ಕೇಂದ್ರಗಳಾದ ಮಂಗಳೂರು ತಾಲೂಕು ಕಚೇರಿ ಸಮೀಪ, ತೊಕ್ಕೊಟ್ಟು, ಸುರತ್ಕಲ್, ಗುರುಪುರ, ಮೂಲ್ಕಿ, ಬಂಟ್ವಾಳ, ಪಾಣೆಮಂಗಳೂರು, ವಿಟ್ಲ, ಬೆಳ್ತಂಗಡಿ, ವೇಣೂರು, ಕೊಕ್ಕಡ, ಪುತ್ತೂರು, ಕಡಬ, ಉಪ್ಪಿನಂಗಡಿ, ಸುಳ್ಯ, ಪಂಜ, ಮೂಡುಬಿದಿರೆಗಳಲ್ಲಿ ಆಧಾರ್ ಕೇಂದ್ರ ಕಾರ್ಯನಿರ್ವಹಿಸಲಿದೆ.
ಮಂಗಳೂರು ಒನ್ ಕೇಂದ್ರಗಳಲ್ಲಿ ಜನರಿಗೆ ಈಗಾಗಲೇ ನೀರು, ವಿದ್ಯುತ್, ಟೆಲಿಫೋನ್ ಬಿಲ್, ಆಸ್ತಿ ತೆರಿಗೆ, ಕೆಎಸ್ಆರ್ಟಿಸಿ ಟಿಕೆಟ್ ಸೇರಿದಂತೆ ವಿವಿಧ ಸೇವೆಗಳು ದೊರೆಯುತ್ತಿವೆ. ಇದರ ಜೊತೆಗೆ ಇನ್ನು ಮುಂದೆ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ಸೇವೆ ಸಹ ಲಭ್ಯವಾಗಲಿದೆ.












Click it and Unblock the Notifications