ದಕ್ಷಿಣ ಕನ್ನಡ; ದುಬೈನಿಂದ ಬಂದ 15 ಮಂದಿಯಲ್ಲಿ ಕೊರೊನಾ ಸೋಂಕು
ಮಂಗಳೂರು, ಮೇ 15: ಫಸ್ಟ್ ನ್ಯೂರೋದ ಕೊರೊನಾ ನಂಟಿನಿಂದಾಗಿ ಆತಂಕದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಇದೀಗ ದುಬೈನಿಂದ ಮಂಗಳೂರಿಗೆ ಆಗಮಿಸಿರುವ ಪ್ರಯಾಣಿಕರ ಪೈಕಿ ಬರೋಬ್ಬರಿ 15 ಮಂದಿಯಲ್ಲಿ ಸೋಂಕು ದೃಢಪಟ್ಟಿರುವುದು ಇಡೀ ಜಿಲ್ಲೆಯಲ್ಲಿ ಆತಂಕ ಮೂಡಿಸಿದೆ.
ಮೇ.12 ರಂದು ವಿಶೇಷ ವಿಮಾನದ ಮೂಲಕ ಬಂದಿಳಿದ 179 ಮಂದಿ ಪೈಕಿ, ದಕ್ಷಿಣ ಕನ್ನಡ ಮೂಲದ 69 ಜನರ ಗಂಟಲಿನ ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ 15 ಮಂದಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಇವರಲ್ಲಿ 12 ಪುರುಷರಿಗೆ ಮತ್ತು 4 ಮಹಿಳೆಯರಿಗೆ ಸೋಂಕು ದೃಢವಾಗಿದೆ. 15 ಮಂದಿ ಪೈಕಿ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದಾರೆ. ಇದಲ್ಲದೆ ಸುರತ್ಕಲ್ ಮೂಲದ ಮಹಿಳೆಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ದ.ಕ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ದುಬೈನಿಂದ ಬಂದ 179 ಕರಾವಳಿಗರನ್ನು ಕ್ವಾರಂಟೈನ್ ಗೆ ಒಳಪಡಿಸಿತ್ತು. ಈ ಕ್ರಮದಿಂದ ಜಿಲ್ಲೆಯ ಜನರಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಇದೆ. ದುಬೈನಿಂದ ಬಂದ ವಿಮಾನದಲ್ಲಿ ದ.ಕ. ಜಿಲ್ಲೆಯ 96, ಉಡುಪಿ ಜಿಲ್ಲೆಯ 52 ಹಾಗೂ ಇತರ ಜಿಲ್ಲೆಗಳ 31 ಪ್ರಯಾಣಿಕರಿದ್ದರು. ಅವರಲ್ಲಿ 38 ಗರ್ಭಿಣಿಯರು ಇದ್ದರು.

ದ.ಕ. ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಪಾಸಿಟಿವ್ ಕೇಸ್ ಗಳ ಸಂಖ್ಯೆ 50ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ 5 ಮಂದಿ ಬಲಿಯಾಗಿದ್ದಾರೆ.












Click it and Unblock the Notifications