ಬೆಳ್ತಂಗಡಿ, ಪುತ್ತೂರು, ಬಂಟ್ವಾಳ, ಸುಳ್ಯದಲ್ಲಿ ನಿಷೇಧಾಜ್ಞೆ ಮುಂದುವರಿಕೆ
ಮಂಗಳೂರು, ಜೂನ್ 30: ಜಿಲ್ಲೆಯ ಕೆಲವೆಡೆ ಅಹಿತಕರ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲಿ ಸಿಆರ್'ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆಯನ್ನು ಜುಲೈ 2ರವರೆಗೆ ಮುಂದುವರಿಸಲಾಗಿದೆ. ನಿಷೇಧಾಜ್ಞೆ ಮುಂದುವರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಜೂ.27ರವರೆಗೆ ಇದ್ದ ನಿಷೇಧಾಜ್ಞೆಯನ್ನು ಜೂ.30ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದೀಗ ಅದನ್ನು ಮತ್ತೆ ವಿಸ್ತರಿಸಲಾಗಿದೆ.

ದ.ಕ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿರುವ ನಿಷೇಧಾಜ್ಞೆಯನ್ನು ಹಾಕಲಾಗಿದೆ. ಸದ್ಯ ಸಹಜ ಸ್ಥಿತಿಯತ್ತ ಜಿಲ್ಲೆ ಮರಳುತ್ತಿದ್ದರೂ ಮುಂಜಾಗ್ರತಾ ಕ್ರಮವಾಗಿ ನಾಲ್ಕು ತಾಲೂಕುಗಳಲ್ಲಿ ಇನ್ನೂ ನಿಷೇಧಾಜ್ಞೆ ಮುಂದುವರೆಸಲಾಗಿದೆ.
ಕೋಮು ಸಂಘರ್ಷ ಆರಂಭವಾಗಿದ್ದು ಜೂನ್ 27. ಬಂಟ್ವಾಳದ ಕಲ್ಲಡ್ಕ ಎಂಬಲ್ಲಿ ಮಿಥುನ್ ಎಂಬಾತ ಹಾಶೀರ್ ಎಂಬಾತನಿಗೆ ಚೂರಿಯಿಂದ ಇರಿದಿದ್ದ. ತಕ್ಷಣ ಕಲ್ಲಡ್ಕದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಬೆನ್ನಿಗೆ ನಿಷೇಧಾಜ್ಞೆ ಹೇರಲಾಗಿತ್ತು.
ಇನ್ನು ನಿಷೇಧಾಜ್ಞೆಯ ಮಧ್ಯೆಯೂ ಬೆಂಜರಪದವಿನ ಅಶ್ರಫ್ ಕುಲಾಯಿ ಹತ್ಯೆ ನಡೆದಿತ್ತು. ಹೀಗಾಗಿ ಮತ್ತೆ ನಿಷೇಧಾಜ್ಞೆಯನ್ನು 30ರವರೆಗೆ ವಿಸ್ತರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೆಜಿ ಜಗದೀಶ್ ಆದೇಶ ನೀಡಿದ್ದರು. ಆದರೆ ಈಗ ಜುಲೈ 2ರವರೆಗೆ ಮುಂದುವರಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.












Click it and Unblock the Notifications