ಕೊನೆಗೂ ಕುವೈಟ್ನಿಂದ ಮಂಗಳೂರಿಗೆ ಬಂದ ವಿಮಾನ
ಮಂಗಳೂರು, ಆಗಸ್ಟ್ 13 : ಕುವೈಟ್ನಲ್ಲಿ ಸಿಲುಕಿದ್ದ ಅನಿವಾಸಿ ಭಾರತೀಯರು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಮೂರು ಬಾರಿ ವಿಮಾನ ಹಾರಾಟಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಅಂತಿಮವಾಗಿ ಗುರುವಾರ ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
114 ಭಾರತೀಯರು ಕುವೈಟ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಗುರುವಾರ ಮುಂಜಾನೆ 2.30ರ ಸುಮಾರಿಗೆ ಕುವೈಟ್ ಏರ್ ವೇಸ್ ವಿಮಾನ ಮಂಗಳೂರಿನಲ್ಲಿ ಲ್ಯಾಂಡ್ ಆಗಿದೆ. 45 ದಿನಗಳ ಕಾಲ ಇದ್ದ ಆತಂಕ ದೂರವಾಗಿದೆ.
45 ದಿನಗಳ ಹಿಂದೆ ಅನಿವಾಸಿ ಭಾರತೀಯರು ಕುವೈಟ್ನಿಂದ ವಾಪಸ್ ಆಗಲು ವಿಮಾನ ಬುಕ್ ಮಾಡಿದ್ದರು. ಕುವೈಟ್ನ ಅಲ್-ರಶೀದ್ ಈ ವಿಮಾನ ವ್ಯವಸ್ಥೆ ಮಾಡಿತ್ತು. ಅಲ್ಲಿದ್ದ ಭಾರತೀಯರು ಮನೆ, ಫ್ಲ್ಯಾಟ್ ಎಲ್ಲಾ ಮಾರಿ ಭಾರತಕ್ಕೆ ವಾಪಸ್ ಆಗಲು ಸಿದ್ಧವಾಗಿದ್ದರು.
ಆದರೆ, ವಿಮಾನ ಭಾರತಕ್ಕೆ ಆಗಮಿಸಲು ಡಿಜಿಸಿಎ ಅನುಮತಿ ಸಿಗದ ಕಾರಣ ಎಲ್ಲರೂ ಅತಂತ್ರರಾಗಿದ್ದರು. ಪರಿಚಯಸ್ಥರು, ಗೆಳೆಯರ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಮೂರು ಬಾರಿ ಭಾರತಕ್ಕೆ ಬರಲು ವಿಮಾನ ಹಾರಾಟಕ್ಕೆ ಅವಕಾಶ ನಿರಾಕರಿಸಲಾಗಿತ್ತು.

3 ಬಾರಿ ಅನುಮತಿ ತಿರಸ್ಕಾರ
ಅಲ್ ರಶೀದ್ ಸಂಸ್ಥೆ ಮೂರು ಬಾರಿ ವಿಮಾನ ಹಾರಾಟಕ್ಕೆ ಸಲ್ಲಿಸಿದ್ದ ಅನುಮತಿಯನ್ನು ತಾಂತ್ರಿಕ ಕಾರಣಗಳಿಗಾಗಿ ಡಿಜಿಸಿಎ ತಿರಸ್ಕಾರ ಮಾಡಿತ್ತು. ನಾಲ್ಕನೇ ಬಾರಿ ಆಗಸ್ಟ್ 12ರಂದು ವಿಮಾನ ಸಂಚಾರಕ್ಕೆ ಅವಕಾಶವನ್ನು ನೀಡಲಾಗಿತ್ತು.

ಕೆಲವು ತಾಂತ್ರಿಕ ತೊಂದರೆಗಳು
ಕುವೈಟ್ ಮತ್ತು ಭಾರತದ ನಡುವೆ 500 ಜನರನ್ನು ಕರೆದುಕೊಂಡು ಹೋಗಲು ಅನುಮತಿ ಇತ್ತು. ಆದರೆ, ಕೋಟಾ ಆಗಸ್ಟ್ 9ಕ್ಕೆ ಮುಗಿದಿತ್ತು. ಆದ್ದರಿಂದ, ಡಿಜಿಸಿಎ ವಿಮಾನದ ಹಾರಾಟಕ್ಕೆ ಅನುಮತಿ ನೀಡಿರಲಿಲ್ಲ. ಕೊನೆಗೂ ಆರತಿ ಕೃಷ್ಣ ಅವರ ನೆರವಿನಿಂದ ಆಗಸ್ಟ್ 12ರಂದು ಸಂಜೆ ವಿಮಾನ ಹಾರಾಟಕ್ಕೆ ಭಾರತದಿಂದ ಅನುಮತಿ ಸಿಕ್ಕಿತ್ತು.

114 ಪ್ರಯಾಣಿಕರು ವಾಪಸ್
114 ಭಾರತೀಯರು ಬುಧವಾರ ರಾತ್ರಿ ಕುವೈಟ್ನಿಂದ ಹೊರಟಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಲು ಡಿಜಿಸಿಎ ಅನುಮತಿ ನೀಡಿತ್ತು. ಗುರುವಾರ ಮುಂಜಾನೆ 2.30ರ ಸುಮಾರಿಗೆ ವಿಮಾನ ಮಂಗಳೂರಿಗೆ ಬಂದು ತಲುಪಿದೆ.

ಕೊರೊನಾ ಪರಿಣಾಮ
ಕೊರೊನಾ ವೈರಸ್ ಪರಿಣಾಮ ಕುವೈಟ್ನಲ್ಲಿ ಕೆಲಸ ಕಳೆದುಕೊಂಡಿದ್ದ, ಇದ್ದ ಕೆಲಸ, ಮನೆಯನ್ನು ಬಿಟ್ಟು 114 ಭಾರತೀಯರು ದೇಶಕ್ಕೆ ವಾಪಸ್ ಆಗಿದ್ದಾರೆ. ಸುಮಾರು 45 ದಿನಗಳ ಕಾಲ ವಿಮಾನ ಹಾರಾಟಕ್ಕೆ ಅವಕಾಶ ಸಿಗದೇ ಭಾರತೀಯರು ಪರದಾಡಬೇಕಾಯಿತು.












Click it and Unblock the Notifications