ಮಂಗಳೂರು : ಎಂಆರ್ಪಿಎಲ್ ವಿಸ್ತರಣೆಗೆ 1012 ಎಕರೆ ಭೂ ಸ್ವಾಧೀನ
ಮಂಗಳೂರು, ಜುಲೈ 19 : 'ಮಂಗಳೂರು ತೈಲಾಗಾರ ಸಂಸ್ಕರಣ ಸಂಸ್ಥೆಯ ಮುಂದಿನ ಹಂತದ ವಿಸ್ತರಣೆಗಾಗಿ 1012 ಎಕರೆ ಭೂಸ್ವಾಧೀನಕ್ಕೆ ರಾಜ್ಯ ಉನ್ನತ ಮಟ್ಟದ ಸಮಿತಿ ಒಪ್ಪಿಗೆ ನೀಡಿದೆ. ಸ್ಥಳೀಯ ಶೇ. 75 ರಷ್ಟು ಮಂದಿ ಜಾಮೀನು ಬಿಟ್ಟು ಕೊಡಲು ಸಿದ್ಧರಿದ್ದಾರೆ' ಎಂದು ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಚ್. ಕುಮಾರ್ ಹೇಳಿದ್ದಾರೆ.
ಹಂತ-ಹಂತವಾಗಿ ಎಂಆರ್ಪಿಎಲ್ ವಿಸ್ತರಣೆ ಮಾಡಲಾಗುತ್ತಿದ್ದು, ಮುಂದಿನ 3 ರಿಂದ 4 ವರ್ಷಗಳಲ್ಲಿ ಸುಮಾರು 15 ಸಾವಿರ ಕೋಟಿ ರೂ. ಮೊತ್ತದ ಕಚ್ಚಾ ಪೆಟ್ರೋಲಿಯಂ ಕೊಕ್ ಗ್ಯಾಸಿಫಿಕೇಷನ್ ಸಂಕೀರ್ಣ ಸ್ಥಾಪಿಸಲಾಗುತ್ತದೆ. ಸದ್ಯ, 1012 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ. [ಮಂಗಳೂರಿಗೆ ಬರಲಿದೆ ವಿಶ್ವದರ್ಜೆ ಕೌಶಲ್ಯ ಅಭಿವೃದ್ಧಿ ಕೇಂದ್ರ]

ಪೆರ್ಮುದೆ ಗ್ರಾಮದಲ್ಲಿ 446, ಕುತ್ತೆತ್ತೂರಿನಲ್ಲಿ 383, ಮುಳೂರು- ಕಂದಾವರದಲ್ಲಿ 175 ಎಕರೆ ಮತ್ತು ತೆಂಕ ಎಕ್ಕಾರಿನಲ್ಲಿ 7.75 ಸೇರಿ ಒಟ್ಟೂ 1012 ಎಕರೆ ಭೂಸ್ವಾಧೀನ ಮಾಡಲಿದ್ದು, ಅದರಲ್ಲಿ ಮುಳೂರು- ಕಂದಾವರದ 175 ಎಕರೆಯನ್ನು ಪುನರ್ವಸತಿ ಕಾಲೋನಿಗೆ ಬಳಸಲಾಗುತ್ತದೆ. [ಎಂಆರ್ ಪಿಎಲ್ ಮುಂದೆ ಶವವಾದ ಗ್ರಾಮಸ್ಥರು]
ಈ ಪ್ರದೇಶದಲ್ಲಿ 238 ಮಂದಿ ಭೂಮಾಲೀಕರು ಇದ್ದಾರೆ. ಒಟ್ಟು ಶೇ. 71 ರಷ್ಟು ಒಣಭೂಮಿ ಮತ್ತು ಶೇ. 29ರಷ್ಟು ಕೃಷಿ ಭೂಮಿ ಇದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಕೆಐಎಡಿಬಿ ಮಾಡುತ್ತಿದ್ದು, ಈಗಾಗಲೇ ಶೇ. 70ರಷ್ಟು ಮಂದಿ ಭೂಮಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಭೂಮಿ ಕೊಟ್ಟವರಿಗೆ ಕೆಐಎಡಿಬಿ ನಿಯಮಾವಳಿಯಂತೆ ಪರಿಹಾರ, ಪುನರ್ವಸತಿ ಹಾಗೂ ಉದ್ಯೋಗ ನೀಡಲಾಗುತ್ತದೆ.
ಜೋಕಟ್ಟೆಯಲ್ಲಿ ಎಂಆರ್ಪಿಎಲ್ನ ಕೊಕ್ ಮತ್ತು ಸಲ್ಫರ್ ಸ್ಥಾವರದಿಂದ ಆಗಿರುವ ಸಮಸ್ಯೆ ಪರಿಹಾರಕ್ಕಾಗಿ 27 ಎಕರೆ ಭೂಸ್ವಾಧೀನಕ್ಕೆ ಸರಕಾರ ಆದೇಶಿಸಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮೀಕ್ಷೆ ನಡೆಯುತ್ತಿದೆ. ಈ ಪ್ರದೇಶ ಹಾಗೂ ಪಿಲಿಕುಳದಲ್ಲಿ ಗಿಡ ನೆಟ್ಟು ಅರಣ್ಯ ಬೆಳಸಲು ಯೋಜನೆ ರೂಪಿಸಲಾಗಿದೆ.
ಒಟ್ಟು ಭೂಮಿಯಲ್ಲಿ 200 ಎಕರೆ ಪುನರ್ವಸತಿ, ಶೇ. 13ರಷ್ಟು ಹಸಿರು ಪ್ರದೇಶಕ್ಕೆ ಬಳಸಿ ಸುಮಾರು 650 ಎಕರೆ ಉದ್ಯಮ ಸ್ಥಾಪನೆಗೆ ಲಭ್ಯವಾಗಲಿದೆ. ಅದರಲ್ಲಿ ಇಂಧನ ಗುಣಮಟ್ಟ ಸ್ಥಾವರ, ಬೆನ್ಝೀನ್ ಮತ್ತಿತರ ಸ್ಥಾವರಗಳು ಸ್ಥಾಪನೆಯಾಗಲಿವೆ ಎಂದರು.
ಸುಪ್ರೀಂಕೋರ್ಟ್ ನಿರ್ದೇಶನ ಮತ್ತು ಕೇಂದ್ರ ಸರಕಾರದ ಆಟೋ ಇಂಧನ ಮೇಲ್ದರ್ಜೆ ನಿಯಮಾವಳಿ ಪ್ರಕಾರ, 2010ರ ವೇಳೆಗೆ ಬಿಎಸ್-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದಿಸಲಾಗುವುದು. ಇದು ಪೆಟ್ರೋಲ್ ಮತ್ತು ಡೀಸೆಲ್ನಲ್ಲಿ ಸಲ್ಫರ್ ಅಂಶ ಕಡಿಮೆಗೊಳಿಸಿ ವಾಹನಗಳ ಹೊಗೆಯಿಂದ ಹೊರಬರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲಿದೆ. ಇದಕ್ಕಾಗಿ ಹೆಚ್ಚುವರಿ ಜಮೀನಿನ ಅಗತ್ಯವಿದೆ.












Click it and Unblock the Notifications