ವಿವಾದಕ್ಕೆ ಗ್ರಾಸವಾದ ಕುಕ್ಕೆ ಕಿರುಷಷ್ಠಿ ಆಮಂತ್ರಣ ಪತ್ರಿಕೆ
ಮಂಗಳೂರು, ಡಿಸೆಂಬರ್ 30 : ಕಳೆದ 25 ವರ್ಷಗಳಿಂದ ಸುಳ್ಯ ಶಾಸಕರಾಗಿರುವ ಎಸ್. ಅಂಗಾರ ಅವರ ಹೆಸರನ್ನು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕಿರುಷಷ್ಠಿ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸದಿರುವುದು ವಿವಾದಕ್ಕೆ ಕಾರಣವಾಗಿದೆ.
ಇದು ದಲಿತ ಶಾಸಕನಿಗೆ ಮಾಡಿದ ಅವಮಾನ. ಜ.4ರಂದು ಜರಗುವ ಧರ್ಮಸಮ್ಮೇಳನ ಸಭಾ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿ ಮರು- ಮುದ್ರಣ ಮಾಡದಿದ್ದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಸುಳ್ಯ ಬಿಜೆಪಿ ಎಸ್.ಪಿ.ಮೊರ್ಚಾ ಘಟದ ಪ್ರದಾನ ಕಾರ್ಯದರ್ಶಿ ಶೀನಪ್ಪ ಹೇಳಿದರು.
ಆಮಂತ್ರಣ ಪತ್ರಿಕೆಯಲ್ಲಿ ಎಸ್. ಅಂಗಾರ ಅವರ ಹೆಸರನ್ನು ಪರಿಗಣಿಸದೆ, ಅವಮಾನಿಸಿದ ಆಡಳಿತ ಮಂಡಳಿ ಹಾಗು ಆಡಳಿತಾಧಿಕಾರಿಗಳ ವಿರುದ್ಧ ಸುಬ್ರಹ್ಮಣ್ಯ ದೇವಳದ ಎದಿರು ಪ್ರತಿಭಟಿಸುತ್ತೇವೆ ಎಂದು ಶೀನಪ್ಪ ಎಚ್ಚರಿಕೆ ನೀಡಿದರು.

ಈ ಧಾರ್ಮಿಕ ಕ್ಷೇತ್ರ ರಾಜಕೀಯ ರಹಿತವಾಗಿದೆ. ನಾವು ಅಧಿಕಾರ ಸ್ವೀಕರಿಸಿದ ಬಳಿಕ ಯಾವುದೇ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ನಾವೆಲ್ಲರನ್ನೂ ಭಕ್ತರಂತೆ ಕಾಣುತ್ತೇವೆ ಎಂದು ಒನ್ಇಂಡಿಯಾ ಕನ್ನಡಕ್ಕೆ ನಿತ್ಯಾನಂದ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತಿಳಿಸಿದರು.
ಆಮಂತ್ರಣ ಪತ್ರಿಕೆ ಮರುಮುದ್ರಣ : ಕಿರುಷಷ್ಠಿ ಆಮಂತ್ರಣದಲ್ಲಿ ಬಿಟ್ಟು ಹೋಗಿದ್ದ ಶಾಸಕ ಅಂಗಾರ ಹೆಸರನ್ನು ಪರಿಗಣಿಸಿ ಮುರುಮುದ್ರಿಸಿ ಎಲ್ಲರಿಗೂ ಈಗಾಗಲೇ ಹಂಚಲಾಗಿದೆ ಮತ್ತು ವಿವಾದಕ್ಕೆ ನಾಂದಿ ಹಾಡಲಾಗಿದೆ.












Click it and Unblock the Notifications