'ಯಜಮಾನ'ನ ನಿರೀಕ್ಷೆಯಲ್ಲಿದ್ದ 'ಬಸವ'ನಿಗೆ ವರವಾಗುತ್ತಾ ಲಾಕ್ ಡೌನ್ ವಿನಾಯಿತಿ?
ಅದು ಕಾವೇರಿದ್ದ ಪ್ರತಿಷ್ಟಿತ ಮಂಡ್ಯ ಲೋಕಸಭಾ ಚುನಾವಣಾ ಅಖಾಡ. ಸ್ವಾಭಿಮಾನದ ಹೆಸರಿನಲ್ಲಿ ನಡೆಯುತ್ತಿದ್ದ ಜಿದ್ದಾಜಿದ್ದಿನ ಕದನ. ಒಂದ್ಕಡೆ 'ಮಂಡ್ಯದ ಗಂಡು' ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್.. ಇನ್ನೊಂದು ಕಡೆ 'ಮಣ್ಣಿನ ಮಗ' ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ ನಿಖಿಲ್ ಕುಮಾರ್.. ಇವರಿಬ್ಬರ ನಡುವೆ 'ವಿಜಯಲಕ್ಷ್ಮಿ' ಯಾರಿಗೆ ಒಲಿಯಲಿದ್ದಾಳೆ ಎಂಬ ಕೌತುಕ.
ಇಡೀ ರಾಜ್ಯದ ಗಮನ ಸೆಳೆದಿದ್ದ ಈ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ಸ್ಟಾರ್.. ಡಿ ಬಾಸ್.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಜೋಡೆತ್ತುಗಳಾಗಿ ಪ್ರಚಾರದ ತೇರು ಎಳೆಯುತ್ತಿದ್ದರು.
ಇದೇ ಸಂದರ್ಭದಲ್ಲಿ ಮಂಡ್ಯದ ಸಾಲಿಗ್ರಾಮ ಒಂದು ಅಚ್ಚರಿಯ ಘಟನೆಗೆ ಸಾಕ್ಷಿಯಾಯಿತು. ಪ್ರಚಾರದ ಸಲುವಾಗಿ ಸಾಲಿಗ್ರಾಮಕ್ಕೆ ನಟ ದರ್ಶನ್ ಬಂದಿದ್ದರು. ಅಪಾರ ಜನಸ್ತೋಮ ಅಲ್ಲಿ ನೆರೆದಿತ್ತು. ಇಡೀ ಜನ ಸಮೂಹವನ್ನೇ ನಡುಗಿಸುವಂತೆ ಪ್ರಚಾರದ ಮಾರ್ಗದ ನಡುವಲ್ಲಿ ಬಂದ ಗೂಳಿ (ಬಸವ) ಯೊಂದು ಗುಟುರು ಹಾಕಿ ಅಡ್ಡಿಯಾಗಿ ನಿಂತಿತ್ತು.
ಗೂಳಿ ಕಂಡ ಜನ ಬೆದರಿ ನಿಂತಿದ್ದರು. ಈ ವೇಳೆ ಪ್ರಚಾರ ವಾಹನದಿಂದ ಕೆಳಗೆ ಇಳಿದು ಬಂದ ದರ್ಶನ್, ಪರಿಚಯವಿರದ ಗೂಳಿ (ಬಸವ) ಕಡೆಗೆ ನಿರ್ಬಿಡೆಯಿಂದ ಧಾವಿಸಿ, ಅದರ ಮೈದಡವಿ, ಸಮಾಧಾನ ಮಾಡಿದ್ದರು. ದರ್ಶನ್ ನಡವಳಿಕೆಗೆ ಸ್ಪಂದಿಸಿದ ಗೂಳಿ (ಬಸವ) ಶಾಂತವಾಗಿತ್ತು. ಇಂದು ಅದೇ ಗೂಳಿ (ಬಸವ) ಮಂಕಾಗಿ ಕೂತಲ್ಲೇ ಕೂತಿದೆ.

ದರ್ಶನ್ ಬಾಂಧವ್ಯ ಬೆಸೆದುಕೊಂಡಿದ್ದ ಗೂಳಿ (ಬಸವ)
ಎಲ್ಲರಿಗೂ ಅಚ್ಚರಿಯಾಗುವಂತೆ ಅಂದು ದರ್ಶನ್ ಗೆ ಬಾಂಧವ್ಯ ಬೆಸೆದುಕೊಂಡಿದ್ದ ಗೂಳಿ (ಬಸವ) ಈಗ ಸಾಲಿಗ್ರಾಮ ತಾಲೂಕಿನ ಕಾಳಮ್ಮನಕೊಪ್ಪಲು ದೇವಾಲಯದ ಆವರಣದಲ್ಲಿ ನೆಲಕ್ಕೆ ತಲೆಯಾನಿಸಿ ಮಲಗಿದೆ. ಕಾಲಿಗೆ ಆದ ಪೆಟ್ಟಿನಿಂದಾಗಿ ಗೂಳಿ (ಬಸವ) ಒಂದಿಂಚೂ ಅಲುಗಾಡದಂತಾಗಿದೆ. ಪೆಟ್ಟಿನಿಂದಾಗಿ ಗೂಳಿ ನೋವಿನಲ್ಲಿ ನರಳಾಡುತ್ತಿದೆ. ಅತಿಯಾದ ನೋವಿನಿಂದ ಗೂಳಿ (ಬಸವ) ಮೇವು ತಿನ್ನದೆ ದಿನ ದೂಡುತ್ತಿದೆ.

ಮಂಕಾಗಿ ಕೂತಿದೆ
ಗೂಳಿ (ಬಸವ)ಯ ನೋವಿಗೆ ಸ್ಪಂದಿಸಿದ ಗ್ರಾಮಸ್ಥರು, ಪಶುವೈದ್ಯರನ್ನು ಕರೆಯಿಸಿ ಚಿಕಿತ್ಸೆಯನ್ನು ಮಾಡಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಗೂಳಿ (ಬಸವ) ಮಂಕಾಗಿ ಕೂತಿದೆ.

ಮೂಕ ಪ್ರಾಣಿಯ ನೋವಿಗೆ ಸ್ಪಂದಿಸಿ
ಗೂಳಿ (ಬಸವ)ಯ ನಡವಳಿಕೆಯನ್ನು ಗಮನಿಸಿರುವ ಗ್ರಾಮಸ್ಥರು, ಪೆಟ್ಟಿನ ಜೊತೆಗೆ ಮಾನಸಿಕವಾಗಿ ಕುಗ್ಗಿರುವ ಗೂಳಿ (ಬಸವ)ಗೆ ಚೈತನ್ಯ ತುಂಬಿದರೆ ಮೊದಲಿನಂತಾಗಬಹುದು ಎಂದಿದ್ದಾರೆ. ಜೊತೆಗೆ ಈ ಕೆಲಸ ದರ್ಶನ್ ರಿಂದ ಮಾತ್ರ ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ್ಶನ್ ಗೆ ಗ್ರಾಮಸ್ಥರು ''ಪ್ರಾಣಿ ಪ್ರಿಯರಾದ ದರ್ಶನ್ ಮೂಕ ಪ್ರಾಣಿಯ ನೋವಿಗೆ ಸ್ಪಂದಿಸಿ'' ಎಂದು ಮನವಿ ಮಾಡಿದ್ದಾರೆ.

ಪ್ರಾಣಿ ಪ್ರಿಯ ದರ್ಶನ್ ಗೆ ಬಸವನ ವೇದನೆ ಕೇಳಿಸದೆ ಇರುತ್ತಾ?
ಅಂದು ಗುಟುರು ಹಾಕಿದ್ದ ಗೂಳಿ (ಬಸವ) ಯ ಮೈದಡವಿ, ಸಮಾಧಾನ ಮಾಡಿದ್ದ ಡಿ-ಬಾಸ್ ಮತ್ತೊಮ್ಮೆ ಅದೇ ಗೂಳಿ (ಬಸವ) ಆರೋಗ್ಯವಾಗಿ ಮೇಲೇಳುವಂತೆ ಮಾಡಲು ಮುಂದಾಗುತ್ತಾರಾ.? ಸಂಕಷ್ಟದಲ್ಲಿ ಇದ್ದವರಿಗೆ ಸದಾ ಸಹಾಯ ಹಸ್ತ ಚಾಚುವ ದರ್ಶನ್ ಗೆ ಗೂಳಿ (ಬಸವ)ನ ವೇದನೆ ಕೇಳಿಸದೆ ಇರುತ್ತಾ?

ಲಾಕ್ ಡೌನ್ ವಿನಾಯಿತಿ
ತುರ್ತು ಸಂದರ್ಭಗಳೂ ಸೇರಿದಂತೆ ಕೆಲವು ಚಟುವಟಿಕೆಗಳಿಗಾಗಿ ಜಿಲ್ಲೆಗಳ ನಡುವೆ ಓಡಾಡಲು ಇಂದಿನಿಂದ ಅವಕಾಶ ಇದೆ. ಇದನ್ನ ಸದ್ಬಳಕೆ ಮಾಡಿಕೊಂಡು, ಗೂಳಿ (ಬಸವ) ಗುಣಮುಖವಾಗುವಂತೆ ದರ್ಶನ್ ಮಾಡುತ್ತಾರಾ? ನೋಡೋಣ.












Click it and Unblock the Notifications