ಫಸಲಿನ ರುಚಿ ಕಂಡು ಮಂಡ್ಯ ರೈತರ ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು
ಮಂಡ್ಯ, ನವೆಂಬರ್.14:ಕೆಲವು ವರ್ಷಗಳಿಂದ ಮಳೆಯಿಲ್ಲದೆ ಬರದಿಂದ ತತ್ತರಿಸಿದ ರೈತರು ಇದೀಗ ಬೆಳೆಯೇನೋ ಬೆಳೆದಿದ್ದಾರೆಯಾದರೂ ಅದು ಮನೆಗೆ ತಲುಪುತ್ತೆ ಎಂಬ ನಂಬಿಕೆಯೇ ಇಲ್ಲದಾಗಿದೆ. ಕಾರಣ ಅರಣ್ಯದಿಂದ ನಾಡಿನತ್ತ ಬರುತ್ತಿರುವ ಕಾಡಾನೆಗಳ ಹಿಂಡು ಜಮೀನಿಗೆ ನುಗ್ಗಿ ಭತ್ತ, ಕಬ್ಬು, ತೆಂಗು ಬೆಳೆಗಳನ್ನು ನಾಶ ಮಾಡುತ್ತಿವೆ.
ಜಿಲ್ಲೆಯ ಹಲವೆಡೆ ಈಗಾಗಲೇ ಕಾಡಾನೆಗಳ ಹಾವಳಿಯಿಂದ ಜನ ಬೇಸತ್ತು ಹೋಗಿದ್ದಾರೆ. ಕಳೆದ ವಾರವಷ್ಟೇ ಮದ್ದೂರು ಪಟ್ಟಣದ ಗಡಿ ಅಂಚಿಗೆ ಬಂದಿದ್ದ ನಾಲ್ಕು ಕಾಡಾನೆಗಳು ಇದೀಗ ಭಾರತೀನಗರ ವ್ಯಾಪ್ತಿಯ ಚಿಕ್ಕರಸಿನಕೆರೆ ಹೋಬಳಿಯ ಚಾಕನಹಳ್ಳಿ ಹಾಗೂ ಕಳ್ಳಿಮೆಳ್ಳೆದೊಡ್ಡಿ ಗ್ರಾಮಗಳ ಜಮೀನುಗಳಿಗೆ ನುಗ್ಗಿದ್ದು ರೈತರನ್ನು ಆತಂಕಕ್ಕೆ ತಳ್ಳಿವೆ.
ಚನ್ನಪಟ್ಟಣ ತಾಲೂಕಿನ ಕಬ್ಬಾಳು ಅರಣ್ಯ ವಲಯದಿಂದ ಕಳೆದ ವಾರ ಮದ್ದೂರು ಪಟ್ಟಣದ ಶಿಂಷಾ ನದಿ ಬಳಿಗೆ ಬಂದಿದ್ದ ಕಾಡಾನೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಚನ್ನಪಟ್ಟಣ ಗಡಿ ಭಾಗದ ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲಾಗಿತ್ತು.

ಆದರೆ ಜಮೀನಿಗೆ ನುಗ್ಗಿ ಫಸಲನ್ನು ತಿಂದು ರುಚಿ ಕಂಡು ಕೊಂಡ ಕಾಡಾನೆಗಳು ಮತ್ತೆ ಚಾಕನಹಳ್ಳಿ ಹಾಗೂ ಕಳ್ಳಿಮೆಳ್ಳೆದೊಡ್ಡಿ ಗ್ರಾಮಗಳ ಜಮೀನುಗಳಿಗೆ ಲಗ್ಗೆ ಇಟ್ಟಿದ್ದು, ಆನೆಗಳು ಸಂಚರಿಸಿರುವ ವ್ಯಾಪ್ತಿಯ ಕಬ್ಬು, ಭತ್ತ, ತೆಂಗು ಸೇರಿದಂತೆ ಹಲವು ಬೆಳೆಗಳು ನಾಶವಾಗಿವೆ.
ಕಾಡಾನೆಗಳು ಜಮೀನಿಗೆ ನುಗ್ಗಿದ ಹಿನ್ನಲೆಯಲ್ಲಿ ಅದನ್ನು ನೋಡಲು ನೆರೆಯ ಕ್ಯಾತಘಟ್ಟ, ಬೊಮ್ಮನದೊಡ್ಡಿ ಮತ್ತಿತರ ಅಪಾರ ಸಂಖ್ಯೆಯ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು, ಆನೆಗಳ ಬಳಿ ತೆರಳದಂತೆ ಭಾರತೀನಗರ ಪೊಲೀಸರು ಸೂಚಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಮತ್ತು ಪೊಲೀಸರು ಮೊಕ್ಕಾಂ ಹೂಡಿದ್ದು ಅವುಗಳನ್ನು ಕಾಡಿಗೆ ಅಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಕಾಡಾನೆಗಳು ಯಾವಾಗ ಯಾವ ಕಡೆಗೆ ಹೋಗುತ್ತವೆಯೋ ಎಂಬ ಭಯದಲ್ಲಿ ರೈತರು, ಗ್ರಾಮದ ಜನರು ಕಾಲ ಕಳೆಯುವಂತಾಗಿದೆ.












Click it and Unblock the Notifications