ಆತಗೂರು ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದ ಕೊಲೆ ಪ್ರಕರಣ
ಮಂಡ್ಯ, ಡಿಸೆಂಬರ್ 14: ಕುಡಿದು ಬಂದು ಚಿತ್ರಹಿಂಸೆ ನೀಡುತ್ತಿದ್ದ ಗಂಡನನ್ನು ಹೆಂಡತಿ ಹಾಗೂ ಆಕೆಯ ತಮ್ಮ ಇಬ್ಬರೂ ಸೇರಿ ಕೊಲೆ ಮಾಡಿದ ಘಟನೆ ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರಮೇಶ್ (36) ಎಂಬಾತನೇ ಹೆಂಡತಿ ಹಾಗೂ ಬಾಮೈದನಿಂದ ಕೊಲೆಯಾದವನಾಗಿದ್ದರೆ, ಹೆಂಡತಿ ಉಮಾ, ಬಾಮೈದ ಭೈರವ ಕೊಲೆ ಮಾಡಿದ ಹಂತಕರಾಗಿದ್ದಾರೆ. ರಮೇಶ್ ಆಟೋ ಚಾಲಕನಾಗಿದ್ದನು. ಆದರೆ ದುಡಿದ ಹಣವನ್ನೆಲ್ಲ ಹೆಂಡ ಕುಡಿದು ಮನೆಗೆ ಬರುತ್ತಿದ್ದುದಲ್ಲದೆ, ಹಿಂಸೆ ನೀಡುವುದು, ಹೆಂಡತಿ ಮೇಲೆ ಅನುಮಾನಪಡುವುದು ಮಾಡುತ್ತಿದ್ದನು.
ಇದರಿಂದ ಬೇಸತ್ತ ಉಮಾ ತನ್ನ ತಮ್ಮ ಭೈರವನ ಜೊತೆ ಸೇರಿ ಕಳೆದ ನ.23ರಂದು ಮನೆಯಲ್ಲಿ ರಮೇಶ್ ಮಲಗಿದ್ದ ಸಮಯದಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಳು.

ಆ ನಂತರ ಮಲಗಿದ್ದಲ್ಲೇ ರಮೇಶ್ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ್ದಳು. ಸದಾ ಕುಡಿಯುತ್ತಿದ್ದ ಆತನ ಬಗ್ಗೆ ತಿಳಿದಿದ್ದವರಿಗೆ ಆತ ಬಹುಶಃ ಹೃದಯಾಘಾತದಿಂದ ಸಾವನ್ನಪ್ಪಿರಬಹುದೆಂದು ನಂಬಿ ಸುಮ್ಮನಾಗಿದ್ದಾರಲ್ಲದೆ, ಯಾವುದೇ ಅನುಮಾನ ಪಡದೆ ಶವವನ್ನು ಅಂತ್ಯಸಂಸ್ಕಾರ ಮಾಡಿ, ಪುಣ್ಯ ತಿಥಿ ಕಾರ್ಯವನ್ನೂ ಮುಗಿಸಿದ್ದರು.
ಈ ನಡುವೆ ರಮೇಶನ ಹೆಂಡತಿ ಉಮಾಳ ವರ್ತನೆ ಬಗ್ಗೆ ರಮೇಶನ ತಂಗಿ ಯಶೋಧಾಳಿಗೆ ಅನುಮಾನ ಬಂದಿದ್ದು ಈ ಸಂಬಂಧ ಆಕೆ ಕೆಸ್ತೂರು ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಮೃತ ರಮೇಶನ ಹೆಂಡತಿ ಉಮಾ ಮತ್ತು ಭೈರವ ಅವರನ್ನು ಕರೆಯಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ತಾವು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications