ಬೂಕನಕೆರೆಯ ಜನ ಯಡಿಯೂರಪ್ಪರನ್ನು ಸ್ಮರಿಸುತ್ತಿರುವುದೇಕೆ?
ಮಂಡ್ಯ, ಜುಲೈ 27: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರ ಹುಟ್ಟೂರಿನ ಜನ ಹಲವು ರೀತಿಯಲ್ಲಿ ನೆನಪು ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ ನೀರವ ಮೌನವಿದ್ದು, ಬಹುಶಃ ಅವರು ಮುಖ್ಯಮಂತ್ರಿಯಾಗಿ ಉಳಿದಿದ್ದರೆ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದರು ಎಂಬ ಅಭಿಪ್ರಾಯಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
ಒಂದೆಡೆ ಗ್ರಾಮಸ್ಥರು ಯಡಿಯೂರಪ್ಪ ಅವರು ತಮ್ಮ ಗ್ರಾಮಕ್ಕೆ ಮಾಡಿದ ಜನಪರ ಯೋಜನೆಗಳನ್ನು ನೆನೆದು ಭಾವುಕರಾಗುತ್ತಿದ್ದಾರೆ. ಸೋಮವಾರ ಯಡಿಯೂರಪ್ಪ ರಾಜೀನಾಮೆಯನ್ನು ಕೊಟ್ಟಿದ್ದಾರೆ ಎಂಬ ಸುದ್ದಿಯನ್ನು ಸಹಿಸದ ಬೂಕನಕೆರೆ ಗ್ರಾಮಸ್ಥರು ಗ್ರಾಮದೇವತೆ ಗೋಗಾಲಮ್ಮನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಗ್ರಾಮದ ಸುಪುತ್ರ ಯಡಿಯೂರಪ್ಪನವರ ರಾಜೀನಾಮೆಯ ಸುದ್ದಿಯು ಸುಳ್ಳಾಗುವಂತೆ ಪ್ರಾರ್ಥಿಸಿದ್ದರು.
ಯಡಿಯೂರಪ್ಪ ಹುಟ್ಟೂರು ಬೂಕನಕೆರೆಯಲ್ಲಿ ನೀರವ ಮೌನ; ಅಭಿಮಾನಿ ಕಣ್ಣೀರು
ಇನ್ನು ಬಾಲ್ಯದ ನೆನಪುಗಳನ್ನು ಬಾಲ್ಯ ಸ್ನೇಹಿತ ಕಿಟ್ಟಪ್ಪ, "ಯಡಿಯೂರಪ್ಪ ಬಹಳ ಕಷ್ಟಪಟ್ಟು ಓದಿ ಹಂತ ಹಂತವಾಗಿ ರಾಜಕೀಯವಾಗಿ ಮೇಲೇರಿದ ವ್ಯಕ್ತಿ. ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಓದಿ ನಂತರ ಮಂಡ್ಯದಲ್ಲಿ ಅಕ್ಕನ ಮನೆಯಲ್ಲಿದ್ದುಕೊಂಡು ಮುಂದಿನ ವಿದ್ಯಾಭ್ಯಾಸ ಮಾಡಿದರು. ಮಂಡ್ಯದಲ್ಲಿದ್ದಾಗ ನಿಂಬೆಹಣ್ಣು ಮಾರಿ ವಿದ್ಯಾಭ್ಯಾಸ ಮಾಡುತ್ತಿದ್ದರು. ವಿದ್ಯಾರ್ಥಿ ದೆಸೆಯಲ್ಲೆ ನಾಯಕತ್ವದ ಗುಣ ಹೊಂದಿದ್ದರು.''
"ಮುಖ್ಯಮಂತ್ರಿಯಾದ ಬಳಿಕ ನನ್ನ ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಸುಮಾರು 1 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಿದ್ದರು ಎಂದು ನೆನಪು ಮಾಡಿಕೊಂಡರಲ್ಲದೆ, ಬೂಕನಕೆರೆಗೆ ಬಂದಾಗಲೆಲ್ಲ ನನ್ನನ್ನು ಚೆನ್ನಾಗಿ ಮಾತನಾಡಿಸುತ್ತಿದ್ದರು. ನಮ್ಮೂರನ್ನು ಒಂದು ಪಟ್ಟಣಕ್ಕೆ ಸರಿಸಮನಾಗಿ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು,'' ಎಂದು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಇನ್ನು "ಕೆ.ಆರ್. ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಮನೆಮನೆ ಗಂಗೆ ಯೋಜನೆಗೆ 690 ಕೋಟಿ, ಬೂಕನಕೆರೆ, ಶೀಳನೆರೆ ಹೋಬಳಿಯ ಏತ ನೀರಾವರಿ ಯೋಜನೆಗೆ 165 ಕೋಟಿ, ಸಂತೇಬಾಚಹಳ್ಳಿ ಏತ ನೀರಾವರಿ ಯೋಜನೆಗೆ 212 ಕೋಟಿ, ಬೂಕನಕೆರೆ ಗ್ರಾಮಕ್ಕೆ ಆರೂವರೆ ಕೋಟಿ ರೂ. ವೆಚ್ಚದ ಹೈಟೆಕ್ ಆಸ್ಪತ್ರೆ, ಸಮುದಾಯ ಭವನ ನಿರ್ಮಾಣ, ಈಶ್ವರ ದೇವಾಲಯ, ಮನೆದೇವರು ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯ ಪುನರ್ ನಿರ್ಮಾಣಕ್ಕೆ 10 ಕೋಟಿ ನೀಡಿದ್ದಾರೆ.''
"ಹೈಟೆಕ್ ರಸ್ತೆ ಅಭಿವೃದ್ಧಿ, ಬೀದಿ ದೀಪ, ವೃತ್ತ ನಿರ್ಮಾಣ, ಸೇರಿದಂತೆ ಸುಮಾರು 75 ಕೋಟಿ ರುಪಾಯಿಗಳನ್ನು ಹುಟ್ಟೂರು ಬೂಕನಕೆರೆ ನೀಡಿ ಗ್ರಾಮದ ಅಭಿವೃದ್ಧಿಗೆ ಸ್ಪಂದಿಸಿದ್ದಾರೆ. ಈ ಬಾರಿ ಮುಖ್ಯಮಂತ್ರಿಯಾದ ಬಳಿಕ ಇದುವರೆಗೆ ಕೆ.ಆರ್.ಪೇಟೆ ತಾಲ್ಲೂಕಿಗೆ ಸುಮಾರು 1270 ಕೋಟಿ ಅನುದಾನ ನೀಡುವ ಮೂಲಕ ಹುಟ್ಟೂರಿನ ಋಣವನ್ನು ತೀರಿಸುವ ಕೆಲಸ ಮಾಡಿದ್ದಾರೆ,'' ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಇದೆಲ್ಲದರ ನಡುವೆ ಯಡಿಯೂರಪ್ಪರಿಗೆ ತವರು ಜಿಲ್ಲೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ ಎಂಬ ಕೊರಗಿತ್ತು. ಆದರೆ ಅದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆ.ಆರ್. ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ. ನಾರಾಯಣ ಗೌಡ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಅವರ ಕೊರಗನ್ನು ನೀಗಿಸಿದೆ ಎಂದು ಖುಷಿಪಡುತ್ತಿದ್ದಾರೆ. ಒಟ್ಟಾರೆ ಹೇಳಬೇಕೆಂದರೆ ಬಿ.ಎಸ್. ಯಡಿಯೂರಪ್ಪರ ರಾಜೀನಾಮೆಯಿಂದ ಹುಟ್ಟೂರು ಬೂಕನಕೆರೆಯ ಜನ ಬೇಸರಗೊಂಡಿದ್ದಂತು ಸತ್ಯ.