'ಗಂಟೆಗೊಂದು ಮಾತಾಡುವ ಸಿದ್ದರಾಮಯ್ಯನ್ನ ನಾವು ನಂಬಲ್ಲ'
ಮಂಡ್ಯ, ಸೆಪ್ಟೆಂಬರ್ 13: ಸೆಪ್ಟೆಂಬರ್ ಹನ್ನೆರಡರ ಮಧ್ಯರಾತ್ರಿಯಿಂದ 20ನೇ ತಾರೀಕು ಮಧ್ಯರಾತ್ರಿವರೆಗೆ ಕೆ.ಆರ್.ಪೇಟೆ, ನಾಗಮಂಗಲ ಹೊರತುಪಡಿಸಿ, ಮಂಡ್ಯ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ ಸೆಕ್ಷನ್ 144 ಜಾರಿಗೊಳಿಸಿದ್ದರೂ ಅದನ್ನು ಮೀರಿಯೂ ಪ್ರತಿಭಟನೆಗಳು ನಡೆಯುತ್ತಿವೆ.
ಕೆ.ಎಂ.ದೊಡ್ಡಿ, ಮಾದರಹಳ್ಳಿಯಲ್ಲಿ ಬೀದಿಗೆ ಇಳಿದ ರೈತರು ತೆಂಗಿನ ಮರದ ದಿಮ್ಮಿ, ಸೌದೆಗಳನ್ನು ರಸ್ತೆಯಲ್ಲಿ ಹಾಕಿ ಬೆಂಕಿ ಹಚ್ಚಿದರು. ತಮಿಳುನಾಡು ಹಾಗೂ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯ ತಾಲೂಕು ಹಳೇಬೂದನೂರಿನಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ.[ಕಾವೇರಿ ಹೋರಾಟ, ಮಂಗಳವಾರ ಏನಾಯ್ತು?]
ಮುಖ್ಯಮಂತಿ ಸಿದ್ದರಾಮಯ್ಯ ಗಂಟೆ-ಗಂಟೆಗೆ ಒಮ್ದು ಹೇಳಿಕೆ ನೀಡುತ್ತಾರೆ. ಅವರ ಮಾತಿನ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಜಿ.ಮಾದೇಗೌಡ ಹೇಳಿಕೆ ನೀಡಿದ್ದಾರೆ. ನಮಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುತ್ತೇವೆ. ನಮ್ಮ ಹೋರಾಟ ಹತ್ತಿಕ್ಕಲು ಪೊಲೀಸರು ಯತ್ನಿಸಿದರೆ ಅವರ ವಿರುದ್ಧವೂ ಹೋರಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.[ಕಾವೇರಿ ವಿವಾದದ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ]
ಶಾಂತಿಯುತ ಹೋರಾಟ ಮಾಡಿ. ನಿಷೇಧಾಜ್ಞೆಗೆ ಹೆದರದೆ ಧರಣಿ ಮುಂದುವರಿಸಿ, ಆಜ್ಞೆಯನ್ನು ಉಲ್ಲಂಘಿಸಿ ಎಂದು ಜಿ.ಮಾದೇಗೌಡ ಹೋರಾಟಗಾರರಿಗೆ ಕರೆ ನೀಡಿದ್ದಾರೆ.