ಮಂಡ್ಯ ನಗರದಲ್ಲಿ 15 ಸಾವಿರ ಮತದಾರರಿಂದ ಮತದಾನ ಬಹಿಷ್ಕಾರ ಕೂಗು!
ಮಂಡ್ಯ, ಏಪ್ರಿಲ್ 11; ಕರ್ನಾಟಕದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ಮೂಲ ಸೌಕರ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಿದ ಕಾರಣ ಹಲವು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಜನರ ಮನವೊಲಿಸಲು ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ. ಮಂಡ್ಯದ ನಗರದಲ್ಲಿಯೂ ಇಂತಹ ಬಹಿಷ್ಕಾರದ ಕೂಗು ಕೇಳಿ ಬಂದಿದೆ.
ಮಂಡ್ಯ ನಗರದ ವಿವೇಕಾನಂದ ಬಡಾವಣೆಗೆ ಜಿಲ್ಲಾಧಿಕಾರಿ ಡಾ. ಎಚ್. ಎನ್. ಗೋಪಾಲಕೃಷ್ಣ ಭೇಟಿ ನೀಡಿ ಮತದಾನ ಬಹಿಷ್ಕಾರ ನಿರ್ಧಾರ ಕೈಗೊಂಡಿದ್ದ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವ ಬಗ್ಗೆ ಚರ್ಚಿಸಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿವೇಕಾನಂದ ಬಡಾವಣೆ ಜನರು ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆ ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿದ್ದರು. ಶನಿವಾರ ವಿವೇಕಾನಂದ ಬಡಾವಣೆ ಹಿತರಕ್ಷಣಾ ಸಮಿತಿ ಮುಖಂಡ ಕೀಲಾರ ಕೃಷ್ಣ ಮಾತನಾಡಿ, "ಕಳೆದ 20 ವರ್ಷಗಳಿಂದ ಬಡಾವಣೆಗೆ ಮೂಲಸೌಲಭ್ಯ ಒದಗಿಸಲು ನಡೆಸಿದ ಹೋರಾಟಕ್ಕೆ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಮತದಾನ ಬಹಿಷ್ಕಾರ ಮಾಡಲು ತೀರ್ಮಾನಿಸಿದ್ದೇವೆ" ಎಂದು ಹೇಳಿದ್ದರು.
ಬಡಾವಣೆಯಲ್ಲಿ ಹಲವು ಸಮಸ್ಯೆ; ಬಡಾವಣೆಯಲ್ಲಿ ಕುಡಿಯುವ ನೀರು, ಚರಂಡಿ, ಯಜಿಡಿ, ರಸ್ತೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಚಿರತೆ, ನಾಯಿಗಳ ಹಾವಳಿ ಹೆಚ್ಚಾಗಿದೆ. ಕಸವನ್ನು ಸಂಗ್ರಹ ಮಾಡಲು ನಗರಸಭೆ ವಾಹನಗಳು ಬರುತ್ತಿಲ್ಲ. ಬಡಾವಣೆಯಲ್ಲಿನ ವಾಸ ನರಕಸದೃಶವಾಗಿದೆ ಎಂದು ವಿವೇಕಾನಂದ ಬಡಾವಣೆ ನಿವಾಸಿಗಳು ಆರೋಪ ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ಮತದಾನ ಬಹಿಷ್ಕಾರ ಮಾಡುತ್ತೇನೆ ಎಂದು ಬಡಾವಣೆ ಜನರು ಘೋಷಣೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಡಾ. ಎಚ್. ಎನ್. ಗೋಪಾಲಕೃಷ್ಣ ಸೋಮವಾರ ವಿವೇಕಾನಂದ ಬಡಾವಣೆಗೆ ಭೇಟಿ ನೀಡಿ ಜನರ ಜೊತೆ ಮಾತುಕತೆ ನಡೆಸಿದರು. ಮೂಲಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ 1998ರಲ್ಲಿ ಸರ್ಕಾರದ ನಿರ್ದೇಶನದಂತೆ ವಿವೇಕಾನಂದ ಬಡಾವಣೆ ನಿರ್ಮಾಣ ಮಾಡಿತ್ತು. ಸುಮಾರು 2,800 ನಿವೇಶನಗಳನ್ನು ಜನರಿಗೆ ಹಂಚಿಕೆ ಮಾಡಿದೆ. ಪ್ರಸ್ತುತ 500 ರಿಂದ 600 ಮನೆಗಳು ಈ ಬಡಾವಣೆಯಲ್ಲಿ ನಿರ್ಮಾಣವಾಗಿದೆ. ಆದರೆ ಬಡಾವಣೆ ನಿರ್ಮಾಣ ಮಾಡಿದ ಮೂಡಾ, ಮಂಡ್ಯ ನಗರಸಭೆ ಬಡಾವಣೆಗೆ ಯಾವುದೇ ಮೂಲಕ ಸೌಕರ್ಯ ಒದಗಿಸಿಲ್ಲ. ಬಡಾವಣೆ ಜನರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿ ಮಾಡಿ ಬೇಸತ್ತು ಹೋಗಿದ್ದು, ಈ ಬಾರಿ ಚುನಾವಣೆ ಬಹಿಷ್ಕಾರ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.
ಈಗ ಚುನಾವಣೆ ಬಂದಿರುವುದರಿಂದ ಬೇಡಿಕೆ ಈಡೇರಿಸಲೇ ಬೇಕು ಎಂದು ವಿವೇಕಾನಂದ ಬಡಾವಣೆ ನಿವಾಸಿಗಳು ಹೋರಾಟವನ್ನು ನಡೆಸುತ್ತಿದ್ದಾರೆ. ಮತದಾನ ಬಹಿಷ್ಕಾರ ಮಾಡುತ್ತೇವೆ, ಯಾವುದೇ ಪಕ್ಷದ ಅಭ್ಯರ್ಥಿಗಳು ಸಹ ಪ್ರಚಾರ ನಡೆಸಲು ಬಡಾವಣೆಗೆ ಬರುವ ಅಗತ್ಯವಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಬಡಾವಣೆಯಲ್ಲಿ ಸುಮಾರು 15 ಸಾವಿರ ಮತಗಳಿವೆ. ಎಲ್ಲರೂ ಚುನಾವಣೆ ಬಹಿಷ್ಕಾರ ಮಾಡಲು ಒಮ್ಮತದ ತೀರ್ಮಾನವನ್ನು ಕೈಗೊಂಡಿದ್ದಾರೆ.
ವಿವೇಕಾನಂದ ಬಡಾವಣೆ ಹಿತರಕ್ಷಣಾ ಸಮಿತಿ ಸದಸ್ಯರಾದ ಭೀಮೇಶ್, ಶಿವ ಪ್ರಕಾಶ್, ಚಂದ್ರು, ಪುಟ್ಟೇಗೌಡ ಮುಂತಾದವರು ಮಾತನಾಡಿ, ಬಡಾವಣೆಯ ನಿವಾಸಿಗಳು ಸುಮಾರು 20 ವರ್ಷಗಳಿಂದ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳಿಗೆ ಪತ್ರದ ಮೂಲಕ ಬಡಾವಣೆಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿಗಳನ್ನು ಮಾಡಿದ್ದೇವೆ. ಆದರೆ ಅವರು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಮತದಾನ ಬಹಿಷ್ಕಾರ ಎಂಬ ಹೆಸರಿನಲ್ಲಿ ಬಡಾವಣೆಯಲ್ಲಿ ಫೆಕ್ಸ್ ಹಾಕಲಾಗಿದೆ. 2023ನೇ ಸಾಲಿನ
ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಸಿಟಿ ವಿವೇಕಾನಂದ ನಗರ (ಕೆರೆ ಅಂಗಳ) ಬಡಾವಣೆಯ ನಿವಾಸಿಗಳು ಮತ್ತು ನಿವೇಶನಾದಾರರು ಬಡಾವಣೆಗೆ ಸರ್ಕಾರದಿಂದ ಯಾವುದೇ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲದಿರುವುದರಿಂದ ದಿನಾಂಕ 10/5/2023ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಒಮ್ಮತದಿಂದ ಮತ ಬಹಿಷ್ಕಾರ ಮಾಡಿರುತ್ತಾರೆ ಎಂದು ಬರೆಯಲಾಗಿದೆ.












Click it and Unblock the Notifications