ಮನೆಗೆ ಪೂಜೆ ಮಾಡಲು ಬಂದಿದ್ದ ಅರ್ಚಕನಿಗೇ ಬ್ಲಾಕ್ ಮೇಲ್; 20 ಲಕ್ಷ ನುಂಗಿದ ಐನಾತಿಗಳು
ಮಂಡ್ಯ, ನವೆಂಬರ್ 14: ಮನೆಗೆ ಪೂಜೆ ಮಾಡಲು ಬಂದಿದ್ದ ಅರ್ಚಕನನ್ನೇ ಬ್ಲಾಕ್ ಮೇಲ್ ಮಾಡಿದ ಮೂವರು ಅವರಿಂದ ಬರೋಬ್ಬರಿ 20 ಲಕ್ಷ ರೂಪಾಯಿವರೆಗೂ ವಸೂಲಿ ಮಾಡಿದ್ದಾರೆ.
ನಡೆದ ಘಟನೆ ಇಷ್ಟು. ಕೊಳ್ಳೇಗಾಲದಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿರುವ ರಾಘವನ್ ಭಕ್ತರ ಕೋರಿಕೆ ಮೇರೆಗೆ ವಿವಿಧ ಊರುಗಳಿಗೆ ತೆರಳಿ ಪೂಜೆ, ಹವನ, ಹೋಮ ಕಾರ್ಯ ನಡೆಸಿಕೊಡುತ್ತಾರೆ. ಅದರಂತೆ ಆರು ತಿಂಗಳ ಹಿಂದೆ ಬೆಂಗಳೂರಿನ ಹೆಸರಘಟ್ಟದ ನಿವಾಸಿ ಸರೋಜಮ್ಮ ಎಂಬುವವರ ಮನೆಗೂ ತೆರಳಿ ಪೂಜೆ ಮಾಡಿಕೊಟ್ಟು ಬಂದಿದ್ದರು. ನಂತರವೂ ಅರ್ಚಕ ಶ್ರೀನಿವಾಸ್ ರಾಘವನ್ ಅವರೊಂದಿಗೆ ಆ ಮಹಿಳೆ ಫೋನ್ನಲ್ಲಿ ಸಂಪರ್ಕ ಹೊಂದಿದ್ದರು.
ದಿನ ಕಳೆದಂತೆ ಮಾತಿನಲ್ಲಿಯೇ ಹತ್ತಿರವಾದ ಸರೋಜಮ್ಮ ಹಾಗೂ ಆಕೆ ಸಂಬಂಧಿ ನಾಗರತ್ನ ಜೊತೆ ಅರ್ಚಕರು ಅಶ್ಲೀಲ ಸಂಭಾಷಣೆ ನಡೆಸಿದ್ದರು ಎನ್ನಲಾಗಿದೆ. ಅದನ್ನೇ ಅಸ್ತ್ರವಾಗಿಟ್ಟುಕೊಂಡ ಅವರು, ಬಸವರಾಜು ಎಂಬಾತನೊಂದಿಗೆ ಸೇರಿಕೊಂಡು ಅರ್ಚಕ ರಾಘವನ್ಗೆ ಹೆದರಿಸಿ, ಬೆದರಿಸಿ ಅವರಿಂದ ಹಣ ಕೀಳಲು ಆರಂಭಿಸಿದ್ದರು. ನಿಮ್ಮ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿ ಟಿವಿ ಚಾನೆಲ್ ಗಳಲ್ಲಿ ಪ್ರಚಾರ ಮಾಡುತ್ತೇವೆ ಎಂದು ಬೆದರಿಸಿದರು.
ಸುಮ್ಮನಿರಬೇಕೆಂದರೆ 20 ಲಕ್ಷ ರೂಪಾಯಿ ನೀಡುವಂತೆಯೂ ಬೇಡಿಕೆ ಇಟ್ಟರು. ಬೆದರಿಕೆಗೆ ಮಣಿದ ರಾಘವನ್ ಆರೋಪಿಗಳಿಗೆ ಕಂತಿನಲ್ಲಿ 20 ಲಕ್ಷ ರೂಪಾಯಿಗಳನ್ನು ನೀಡಿದರು.

ಇದರಿಂದ ಮತ್ತಷ್ಟು ಉತ್ತೇಜಿತರಾದ ಆ ಆರೋಪಿಗಳು ಮೂರು ತಿಂಗಳ ನಂತರ ಮತ್ತೆ ರಾಘವನ್ ಅವರಿಗೆ ಕರೆ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟರು. ಇವರ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ರಾಘವನ್ ಅದನ್ನು ಮಂಡ್ಯದ ಪೊಲೀಸರಿಗೆ ಒಪ್ಪಿಸಿದರು. ಅದರಂತೆ ಪೊಲೀಸರ ಸೂಚನೆ ಮೇರೆಗೆ ಆರೋಪಿಗಳಿಗೆ ಹಣ ನೀಡುವುದಾಗಿ ಮದ್ದೂರಿಗೆ ಮಂಗಳವಾರ, ನವೆಂಬರ್ 12ರಂದು ಕರೆಸಿಕೊಂಡಿದ್ದಾರೆ. ಹಣ ಪಡೆಯಲು ಮೂವರು ಆರೋಪಿಗಳು ಬಂದಾಗ ಅವರನ್ನು ಬಂಧಿಸಲಾಗಿದೆ.
ಆರೋಪಿಗಳು ಈ ಹಿಂದೆ ವಸೂಲಿ ಮಾಡಿದ್ದ ಹಣದಲ್ಲಿ 13.77 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.











Click it and Unblock the Notifications