ಜಿಲ್ಲೆಗೆ ಬರಲಿದ್ದಾರೆ ಸಾವಿರಾರು ಮಂದಿ; ಮಂಡ್ಯಕ್ಕೆ ಮುಂದಿರುವುದೇ ನಿಜವಾದ ಸವಾಲ್

ಮಂಡ್ಯ, ಮೇ 20: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಮುಂಬೈ ಸೇರಿದಂತೆ ಇತರೆಡೆಗಳಿಂದ ಬಂದವರೇ ಕಾರಣ ಎಂದು ಹೇಳಲಾಗುತ್ತಿದೆ. ಈಗಾಗಲೇ ಜಿಲ್ಲೆಗೆ 1400 ಮಂದಿ ಆಗಮಿಸಿದ್ದರೆ, ಇನ್ನೂ ಎರಡು ಸಾವಿರ ಮಂದಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ ಎಂಬ ಸುದ್ದಿ ಬೆಚ್ಚಿ ಬೀಳುವಂತೆ ಮಾಡಿದೆ.

ದಿನೇ ದಿನೇ ಹೊರಗಿನಿಂದ ಬಂದವರಲ್ಲಿ ಕಾಣಿಸಿಕೊಳ್ಳುತ್ತಿರುವ ಸೋಂಕು, ಇಲ್ಲಿನ ಜನರನ್ನೂ ಭಯಪಡುವಂತೆ ಮಾಡಿದೆ. ಹಸಿರು ವಲಯದಲ್ಲಿದ್ದ ಈ ಜಿಲ್ಲೆಯನ್ನು ಮೊದಲಿಗೆ ಕಾಡಿದ್ದು ಜುಬಿಲಿಯಂಟ್ ನಂಜು. ಬಳಿಕ ತಬ್ಲಿಘಿ ನಂಟು, ಅದೆಲ್ಲವೂ ಒಂದು ಹಂತಕ್ಕೆ ಬರುತ್ತಿದೆ ಎನ್ನುವಾಗಲೇ ಮುಂಬೈನಿಂದ ಬಂದವರಲ್ಲಿ ಕಾಣಿಸಿಕೊಂಡಿರುವ ಸೋಂಕು ಬೆಚ್ಚಿ ಬೀಳುವಂತೆ ಮಾಡಿದೆ.

 ಮುಂಬೈನಲ್ಲಿ ಬದುಕು ಕಟ್ಟಿಕೊಂಡವರು

ಮುಂಬೈನಲ್ಲಿ ಬದುಕು ಕಟ್ಟಿಕೊಂಡವರು

ಮಂಡ್ಯದ ಕೆ.ಆರ್.ಪೇಟೆ, ನಾಗಮಂಗಲ ಸೇರಿದಂತೆ ಹಲವೆಡೆಯಿಂದ ಹೊಟ್ಟೆಪಾಡಿಗಾಗಿ ಊರು ಬಿಟ್ಟು ಮುಂಬೈ ಸೇರಿರುವ ಸಾವಿರಾರು ಜನ ಅಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸಣ್ಣಪುಟ್ಟ ಕೆಲಸದೊಂದಿಗೆ ಚಾಲಕರಾಗಿ, ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರೆಲ್ಲರೂ ಲಾಕ್ ಡೌನ್ ಬಳಿಕ ಅಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಜತೆಗೆ ಹೊಟ್ಟೆಗೆ ಅನ್ನವಿಲ್ಲದ ಪರದಾಡುತ್ತಿದ್ದಾರೆ. ಇವರೆಲ್ಲ ಅವಕಾಶ ಸಿಕ್ಕಿ ಬಿಟ್ಟರೆ ಊರು ಸೇರಿ ನೀರು ಕುಡಿದಾದರೂ ಬದುಕಿಕೊಳ್ಳುತ್ತೇವೆ ಎಂಬ ಸ್ಥಿತಿಗೆ ಬಂದು ನಿಂತಿದ್ದಾರೆ.


ಈಗಾಗಲೇ ಮುಂಬೈನಲ್ಲಿ ಕೊರೊನಾ ಸೋಂಕು ಕಾಡ್ಗಿಚ್ಚಿನಂತೆ ವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ. ಹೀಗಿರುವಾಗ ಅಲ್ಲಿನ ಪರಿಸ್ಥಿತಿ ಬಿಗಡಾಯಿಸಿದೆ. ಅವರ ನಡುವೆ ಸಿಲುಕಿಕೊಂಡಿರುವ ಕರುನಾಡಿನ ಮಂದಿ ಹೇಗಾದರಾಗಲೀ ತವರಿಗೆ ಸೇರಿಕೊಂಡು ಬಿಡೋಣ ಎಂದು ಬೇಡಿಕೊಳ್ಳತೊಡಗಿದ್ದಾರೆ. ಹೀಗಿರುವಾಗ ಮಾನವೀಯ ದೃಷ್ಟಿಯಿಂದ ನೋಡಿದರೆ ಅವರನ್ನು ರಾಜ್ಯದೊಳಕ್ಕೆ ಬಿಟ್ಟುಕೊಳ್ಳದೆ ಬೇರೆ ದಾರಿಯಿಲ್ಲ. ಹೀಗಾಗಿ ಅಲ್ಲಿನ ಜಿಲ್ಲಾಡಳಿತದಿಂದ ಆದೇಶ ಪತ್ರವನ್ನು ತಂದವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ. ಅವರ ಪರೀಕ್ಷೆಯ ವರದಿಗಳು ಇದೀಗ ಒಂದೊಂದಾಗಿ ಬರತೊಡಗಿದ್ದು, ಅದು ಬೆಚ್ಚಿ ಬೀಳಿಸುತ್ತಿದೆ.

 ಜಿಲ್ಲೆಗೆ 1400 ಮಂದಿ ಬಂದಿದ್ದಾರೆ

ಜಿಲ್ಲೆಗೆ 1400 ಮಂದಿ ಬಂದಿದ್ದಾರೆ

ಇಲ್ಲಿಯವರೆಗೆ ಮಂಡ್ಯ ಜಿಲ್ಲೆಗೆ ಹೊರ ರಾಜ್ಯಗಳಿಗೆ ಹೋದವರ ಪೈಕಿ ಸುಮಾರು 1400 ಮಂದಿ ಬಂದಿದ್ದು, ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಅವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅದರ ವರದಿಗಳು ಪ್ರತಿದಿನ ಬರತೊಡಗಿದೆ. ಅದು ಈಗ ತಲೆನೋವಿಗೆ ಕಾರಣವಾಗಿದೆ. ಇದೆಲ್ಲದರ ನಡುವೆ ಮಂಡ್ಯಕ್ಕೆ ಬರಲು ಇನ್ನು ಎರಡು ಸಾವಿರ ಮಂದಿ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಅನುಮತಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಇವರನ್ನು ಒಳಗೆ ಬಿಟ್ಟುಕೊಂಡಿದ್ದೇ ಆದರೆ ಮಂಡ್ಯದ ಸ್ಥಿತಿ ಏನಾಗಬಹುದು? ಈ ಬಗ್ಗೆ ಯೋಚಿಸಿದರೆ ಭಯವಾಗುತ್ತದೆ.


ಈಗಾಗಲೇ ಮಂಡ್ಯಕ್ಕೆ ಕೇವಲ ಮುಂಬೈ ಮಾತ್ರವಲ್ಲದೆ, ತಮಿಳುನಾಡು, ಆಂದ್ರ, ಉತ್ತರಾಖಂಡ್, ಪಶ್ಚಿಮಬಂಗಾಳ, ಕೇರಳ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್‌ನಿಂದಲೂ ಜನ ಬಂದಿದ್ದಾರೆ. ಆದರೆ ಇವರೆಲ್ಲರನ್ನು ಕ್ವಾರಂಟೈನ್ ಮಾಡಿರುವುದರಿಂದ ಅವರಿಂದ ಬೇರೆಯವರಿಗೆ ಯಾವುದೇ ರೀತಿಯಲ್ಲಿ ಹರಡುವ ಸಾಧ್ಯತೆ ಕಡಿಮೆ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ.

 500ಕ್ಕೂ ಹೆಚ್ಚು ಮಂದಿಯ ವರದಿ ಬರಬೇಕು

500ಕ್ಕೂ ಹೆಚ್ಚು ಮಂದಿಯ ವರದಿ ಬರಬೇಕು

ಈಗಾಗಲೇ ಕ್ವಾರಂಟೈನಲ್ಲಿ ಇರುವವರ ಪೈಕಿ 500ಕ್ಕೂ ಹೆಚ್ಚು ಜನರ ಪರೀಕ್ಷೆಯ ವರದಿ ಬರಬೇಕಿದೆ. ಒಂದು ವೇಳೆ ಇವರಲ್ಲಿ ಪಾಸಿಟಿವ್ ಬಂದರೆ ಅಂತಹವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಜಿಲ್ಲೆಗೆ ಬಂದು ಕ್ವಾರಂಟೈನ್ ಅವಧಿ ಮುಗಿಸಿದವರಿಗೆ ಮತ್ತೊಮ್ಮೆ ಟೆಸ್ಟ್ ಮಾಡಿ, ನೆಗೆಟಿವ್ ಬಂದವರನ್ನು ಮನೆಗೆ ಕಳುಹಿಸಿಕೊಡಲಾಗಿದೆ. ಅಕ್ರಮವಾಗಿ ಜಿಲ್ಲೆಯೊಳಗೆ ನುಸುಳುವ ಸಾಧ್ಯತೆ ಇರುವ ಕಾರಣ ಜಿಲ್ಲೆಗೆ ಆಗಮಿಸಲು ಇರುವ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಜತೆಗೆ ಪ್ರತಿ ಮಾರ್ಗದಲ್ಲೂ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ.

ಈ ಕುರಿತಂತೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸಿ. ನಾರಾಯಣಗೌಡ ಅವರು, ಕ್ವಾರಂಟೈನ್ ಆಗಿರುವವರನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಗುಣಮಟ್ಟದ ಊಟ ತಿಂಡಿ ನೀಡಬೇಕು, ಯಾವುದೇ ರೀತಿಯ ದೂರು ಬರಬಾರದು. ಅವರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯ ಕಡ್ಡಾಯವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

 ಮಂಡ್ಯ ಜಿಲ್ಲಾಡಳಿತಕ್ಕೊಂದು ಸವಾಲು

ಮಂಡ್ಯ ಜಿಲ್ಲಾಡಳಿತಕ್ಕೊಂದು ಸವಾಲು

ಕೋವಿಡ್ -19 ಪತ್ತೆ ಹಚ್ಚಲು ಪ್ರತಿನಿತ್ಯ ಹೆಚ್ಚು ಪರೀಕ್ಷೆ ನಡೆಸಬೇಕು. ಪರೀಕ್ಷಾ ಸಾಧನ ಕೊರತೆ ಇದ್ದರೆ ತಕ್ಷಣ ತಿಳಿಸಬೇಕು. ಕ್ವಾರಂಟೈನ್ ಗೆ ಸ್ಥಳಾವಕಾಶದ ಕೊರತೆ ಇದ್ದರೆ, ಅನುದಾನದ ಅಗತ್ಯ ಇದ್ದರೆ ತಿಳಿಸಬೇಕು. ಆರೋಗ್ಯ ಸೇತು ಆಪ್ ಸಾರ್ವಜನಿಕರು ಅಳವಡಿಸಿಕೊಳ್ಳಲು ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಸದ್ಯದ ಮಟ್ಟಿಗೆ 168 ಕ್ಕೇರಿದೆ. ಹೀಗಿರುವಾಗ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಜನರೂ ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಇರುವುದು ಅತಿ ಮುಖ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+