Tender Coconut: ಬರಗಾಲದಲ್ಲಿ ಮಂಡ್ಯ ರೈತರಿಗೆ ಆಸರೆಯಾದ ಎಳನೀರು
ಮಂಡ್ಯ, ನವೆಂಬರ್ 18: ಬೇಸಿಗೆ ಝಳ ನಿಧಾನವಾಗಿ ಏರಿಕೆಯಾಗುತ್ತಿದ್ದು, ಜನ ದಾಹ ನೀಗಿಸಲು ಎಳನೀರಿನತ್ತ ಮುಖ ಮಾಡುತ್ತಿದ್ದಾರೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಎಳನೀರಿನ ಲಭ್ಯತೆಯ ಕೊರತೆ ಎಲ್ಲಡೆ ಕಾಣಿಸುತ್ತಿದ್ದು, ಇದಕ್ಕೆ ರಾಜ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಹೊರರಾಜ್ಯಗಳಿಗೆ ಸರಬರಾಜಾಗುತ್ತಿರುವುದೇ ಮುಖ್ಯ ಕಾರಣವಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೆಂಗನ್ನು ಬೆಳೆಯಲಾಗುತ್ತಿದ್ದು, ಅದರಲ್ಲೂ ಕೆ.ಆರ್.ಪೇಟೆ ವ್ಯಾಪ್ತಿಯಲ್ಲಿ ಬೆಳೆಯುವ ಎಳನೀರು ಸ್ಥಳೀಯವಾಗಿ ಮಾರಾಟವಾಗದೆ ಹೆಚ್ಚಿನ ಬೆಲೆಗೆ ಹೊರ ರಾಜ್ಯಗಳಿಗೆ ಸರಬರಾಜಾಗುತ್ತಿರುವುದು ಇವತ್ತು ಎಳನೀರಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗುತ್ತಿದೆ.

ಮಳೆಗಾಲ ಕಳೆದು ಬೇಸಿಗೆ ಬರುತ್ತಿದ್ದಂತೆಯೇ ಎಳನೀರಿಗೆ ಜನ ಮುಗಿ ಬೀಳುವುದು ಸಾಮಾನ್ಯ. ಅಷ್ಟೇ ಅಲ್ಲದೆ ಹಲವರು ಎಳನೀರು ಮಾರಾಟದಿಂದಲೇ ಜೀವನ ಸಾಗಿಸುತ್ತಾರೆ. ಆದರೆ ಈಗ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಹೊರ ರಾಜ್ಯಗಳಿಗೆ ಹೋಗುತ್ತಿರುವುದರಿಂದ ಬೆಲೆ ಏರಿಕೆ ಹೆಚ್ಚಾಗಿದ್ದು, 40 ರಿಂದ 50 ರೂಪಾಯಿ ನೀಡಿ ಜನ ಎಳನೀರು ಕುಡಿಯುವಂತಾಗಿದೆ.
ಕೆ.ಆರ್.ಪೇಟೆಯಲ್ಲಿ ಎಳನೀರು ವಹಿವಾಟು ಜೋರು
ಕೆ.ಆರ್.ಪೇಟೆಯ ಎಳನೀರು ಮಾರುಕಟ್ಟೆಯಲ್ಲಿ ವಹಿವಾಟು ಜೋರಾಗಿಯೇ ನಡೆಯುತ್ತಿದ್ದು, ರೈತರಿಂದ 30 ರೂಪಾಯಿಗೆ ಖರೀದಿಸಲಾಗುತ್ತಿದೆ. ಇದು ರೈತರಿಗೆ ಖುಷಿ ಕೊಟ್ಟಿದೆ. ಆದರೆ ಇಲ್ಲಿ ಖರೀದಿಯಾಗುವ ಎಳನೀರನ್ನು ಮಾರಾಟಗಾರರು ನೇರವಾಗಿ ಮುಂಬೈ, ದೆಹಲಿ, ಚೆನ್ನೈ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ.
ಸದ್ಯ ಕೆ.ಆರ್.ಪೇಟೆ ಎಳನೀರು ಮಾರುಕಟ್ಟೆಯಲ್ಲಿ ಪ್ರತಿದಿನವೂ ಸರಾಸರಿ 12ಸಾವಿರದಿಂದ 15 ಸಾವಿರ ಎಳನೀರಿನಂತೆ 7ಲಕ್ಷಕ್ಕೂ ಹೆಚ್ಚು ಎಳನೀರು 50 ಬೃಹತ್ ಲಾರಿಗಳಲ್ಲಿ ದೇಶದಾದ್ಯಂತ ಸರಬರಾಜಾಗುತ್ತಿವೆ. ಇದರಿಂದ ಕೋಟ್ಯಂತರ ರೂಪಾಯಿಯ ವಹಿವಾಟು ನಡೆಯುತ್ತಿದೆ. ಈ ಬೆಳವಣಿಗೆಯಿಂದ ತೆಂಗು ಬೆಳೆಯುತ್ತಿರುವ ರೈತರು ನೆಮ್ಮದಿಯುಸಿರು ಬಿಡುವಂತಾಗಿದೆ.

ಎಳನೀರಿಗೆ ಆದ್ಯತೆ ನೀಡುವ ರೈತರು
ಹಾಗೆನೋಡಿದರೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹವಾಮಾನವು ತೆಂಗು ಕೃಷಿಗೆ ಹೇಳಿ ಮಾಡಿಸಿದಂತಿದ್ದು, ತಾಲೂಕಿನ ಫಲವತ್ತಾದ ಒಣಭೂಮಿಯ ನೆಲದಲ್ಲಿ ತೆಂಗನ್ನು ಬೆಳೆಯುತ್ತಿದ್ದು, ರೈತರು ತೆಂಗಿನ ಕಾಯಿ ಮತ್ತು ಕೊಬ್ಬರಿಗೆ ಹೆಚ್ಚು ಒತ್ತು ನೀಡದೆ ಎಳನೀರಿಗೆ ಆದ್ಯತೆ ನೀಡುತ್ತಿರುವುದು ಎದ್ದು ಕಾಣಿಸುತ್ತಿದೆ.
ಇನ್ನು ಇಲ್ಲಿ ಬೆಳೆಯುತ್ತಿರುವ ಎಳನೀರು ಅತ್ಯುತ್ತಮವಾದ ರುಚಿ ಹಾಗೂ ಶ್ರೇಷ್ಠ ಗುಣಮಟ್ಟದಿಂದ ಕೂಡಿರುವುದರಿಂದ ದೇಶಾದ್ಯಂತ ಬೇಡಿಕೆ ಹೊಂದಿದೆ. ಸಾಮಾನ್ಯವಾಗಿ ಈ ವ್ಯಾಪ್ತಿಯ ರೈತರು ಹೈನುಗಾರಿಕೆಯ ಜೊತೆಗೆ ಭತ್ತ, ಬಾಳೆ, ಅಡಿಕೆ ಬೇಸಾಯವನ್ನು ಮಾಡುತ್ತಾ ಬರುತ್ತಿದ್ದಾರೆ. ತೆಂಗನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕೆಂದು ಬಯಸಿದ್ದರೂ ಹಿಂದೆ ನೆಟ್ಟ ಮರಗಳು ನುಸಿ ರೋಗಕ್ಕೆ ತುತ್ತಾಗಿದ್ದಲ್ಲದೆ, ತೆಂಗಿಕಾಯಿ, ಕೊಬ್ಬರಿಯ ಬೆಲೆಕುಸಿತದಿಂದ ಬೇಸತ್ತು ಹಿಂದೆ ಸರಿದಿದ್ದರು. ಜತೆಗೆ ಕೀಟಗಳ ಬಾಧೆಯಿಂದಾಗಿ ತೆಂಗು ಕೃಷಿ ಮಾಡುವುದು ರೈತರಿಗೆ ಸುಲಭವಾಗಿ ಉಳಿದಿಲ್ಲ.
ಮದ್ದೂರು, ಕೆ.ಆರ್.ಪೇಟೆಯಲ್ಲಿ ಎಳನೀರು ಖರೀದಿ
ಇತ್ತೀಚೆಗಿನ ವರ್ಷಗಳಲ್ಲಿ ತೆಂಗು ಬೆಲೆ ಕುಸಿತ ಕಂಡಿಲ್ಲ. ಜತೆಗೆ ಎಳನೀರಿಗೂ ಬೇಡಿಕೆಯಿದೆ. ಇದೆಲ್ಲ ಕಾರಣದಿಂದ ರೈತರು ತೆಂಗು ಬೆಳೆಯತ್ತ ಉತ್ಸಾಹ ತೋರುತ್ತಿದ್ದಾರೆ. ಹಿಂದೆ ತೆಂಗಿನ ಕಾಯಿ ಬೆಲೆ ಕುಸಿತವಾದಾಗ ಬಹಳಷ್ಟು ರೈತರ ಕೈಹಿಡಿದಿದ್ದು ಎಳನೀರು. ಅದು ಮುಂದುವರೆದಿದ್ದು, ಬರದ ಸಂಕಷ್ಠದ ಈ ದಿನಗಳಲ್ಲಿ ರೈತರಿಗೆ ಪ್ರಮುಖವಾಗಿ ಆಸರೆಯಾಗಿದೆಯಲ್ಲದೇ ಆರ್ಥಿಕ ಸ್ವಾವಲಂಬನೆಯ ಬದುಕಿಗೆ ಸಹಕಾರಿಯಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಮದ್ದೂರು ಮತ್ತು ಕೆ.ಆರ್.ಪೇಟೆಯಲ್ಲಿ ಎಳನೀರು ವಹಿವಾಟು ನಡೆಯುತ್ತಿತ್ತು. ಈ ಹಿಂದೆ ಎಳನೀರು ವ್ಯಾಪಾರದಲ್ಲಿ ಮದ್ದೂರು ಹೆಸರುವಾಸಿಯಾಗಿತ್ತು. ಇದೀಗ ಕೆ.ಆರ್.ಪೇಟೆ ಎಳನೀರು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿದ್ದು, ಪ್ರಥಮ ಸ್ಥಾನಕ್ಕೆ ಜಿಗಿತುಕೊಂಡಿದೆ. ಜತೆಗೆ ಎಳನೀರು ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಭಾರೀ ಬೇಡಿಕೆ ಹೊಂದಿರುವುದು ಕಂಡು ಬಂದಿದೆ.
ಹೊರರಾಜ್ಯಗಳಿಗೆ ಎಳನೀರು ಸರಬರಾಜು
ಕೆ.ಆರ್.ಪೇಟೆ ಎಳನೀರು ಮಾರುಕಟ್ಟೆಯಿಂದ ನವದೆಹಲಿ, ಬೆಂಗಳೂರು, ಮಂಗಳೂರು ಸೇರಿದಂತೆ ಮುಂಬೈ, ಪೂನಾ, ಕಲ್ಕತ್ತಾ, ಚೆನ್ನೆöÊ, ವಿಶಾಖಪಟ್ಟಣ, ಕೊಯಮತ್ತೂರು, ಕೇರಳ, ಒರಿಸ್ಸಾ, ಗ್ವಾಲಿಯರ್, ಆಗ್ರಾ ಮಾರುಕಟ್ಟೆಗೆ ಸರಬರಾಜಾಗುತ್ತಿದೆ. ಮಾರುಕಟ್ಟೆಯಲ್ಲಿ ರೈತರಿಗೆ ಒಂದು ಎಳನೀರಿಗೆ 30 ರಿಂದ ರೈತರಿಂದ 35 ರೂಪಾಯಿ ದೊರೆಯುತ್ತಿದೆ. ರೈತರಿಂದ ಖರೀದಿಸುವ ಎಳನೀರನ್ನು ಮಧ್ಯವರ್ತಿಗಳು ಬಳಿಕ ವರ್ತಕರಿಗೆ ಮಾರಾಟ ಮಾಡುತ್ತಾರೆ. ಅದು ತಲುಪಬೇಕಾದ ಸ್ಥಳಕ್ಕೆ ತಲುಪುವ ಹೊತ್ತಿಗೆ 50ರಿಂದ 60ರೂ.ಗಳಿಗೆ ಏರಿಕೆಯಾಗಿರುತ್ತದೆ.
ಮುಂದಿನ ದಿನಗಳಲ್ಲಿ ತೆಂಗು ಗಿಡ, ಮರಗಳನ್ನು ಕಾಡುವ ನುಸಿಪೀಡೆ ಹಾಗೂ ಗರಿತಿನ್ನುವ ಗೊಣ್ಣೆಹುಳು, ಕೆಂಪುಮೂತಿ ಹುಳುವನ್ನು ನಿಯಂತ್ರಿಸಿ ತೆಂಗಿನ ಗಿಡಗಳನ್ನು ಕಾಪಾಡಿಕೊಂಡರೆ ರೈತರ ಬದುಕು ಹಸನಾಗುವುದರಲ್ಲಿ ಎರಡು ಮಾತಿಲ್ಲ. ಬೇಸಿಗೆಯ ದಿನಗಳಲ್ಲಿ ಎಳನೀರಿನ ಬೆಲೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಣದ ಆಸೆಗೆ ಬಿದ್ದು, ಎಳನೀರನ್ನು ಹೊರರಾಜ್ಯಗಳಿಗೆ ಸರಬರಾಜು ಮಾಡುವ ಭರದಲ್ಲಿ ಸ್ಥಳೀಯವಾಗಿ ಎಳನೀರು ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ರೈತರಲ್ಲಿ ಮೂಡಿದ ಆಶಾ ಭಾವನೆ
ಅದು ಏನೇ ಇರಲಿ ಸದ್ಯ ಹಿಂದಿನ ದಿನಗಳಿಗೆ ಹೋಲಿಸಿದರೆ ಬರಗಾಲದ ಸಂಕಷ್ಠದ ದಿನಗಳಲ್ಲಿ ಎಳನೀರಿಗೆ ಉತ್ತಮ ದರ ದೊರೆಯುತ್ತಿರುವುದು ರೈತರಿಗೆ ನೆಮ್ಮದಿ ತಂದಿದೆ. ಬರಗಾಲದ ಕಾರಣದಿಂದ ನೀರಿನ ಕೊರತೆಯಾಗಿ ಕಬ್ಬು, ಭತ್ತ ಬೆಳೆಯಲು ಸಾಧ್ಯವಾಗದೆ ತಲೆಮೇಲೆ ಕೈಹೊತ್ತು ಕುಳಿತಿದ್ದ ರೈತರಿಗೆ ಎಳನೀರಿಗೆ ಉತ್ತಮ ದರ ದೊರೆಯುತ್ತಿರುವುದು ಆಶಾಭಾವನೆ ಮೂಡಿಸಿದೆ.












Click it and Unblock the Notifications