Sumalatha Support BJP: ಕಾಂಗ್ರೆಸ್ ವಿರುದ್ಧ ಗುಡುಗಿ, ಮೋದಿಗೆ ಜೈ ಎಂದ ರೆಬಲ್ ಲೇಡಿ!
ಮಂಡ್ಯ ಏಪ್ರಿಲ್ 3: ಸುಮಲತಾ ಅವರ ಅವಶ್ಯಕತೆ ಅಂದು ಇಲ್ಲ ಇಂದು ಇಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹೇಳಿದ್ಮೇಲೆ ನಾನು ಕಾಂಗ್ರೆಸ್ಗೆ ಹೋಗುವುದಿಲ್ಲ ಎಂದು ಸಂಸದೆ ಸುಮಲತಾ ಅವರು ಹೇಳಿದ್ದಾರೆ. ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ಮುಂದಿನ ನಡೆಯ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಇಂದು ಮಂಡ್ಯದಲ್ಲಿ ಸಭೆ ಬಳಿಕ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ವಿವರಿಸಿದರು. 'ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ. ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಕಾಂಗ್ರೆಸ್ನ ಹಿರಿಯ ಮುಖಂಡರೊಬ್ಬರು ನನ್ನ ಅವಶ್ಯಕತೆ ಅಂದು ಇಲ್ಲ ಇಂದು ಇಲ್ಲ ಎಂದು ಹೇಳಿದ್ದಾರೆ. ಹೀಗಿದ್ದಾಗ ನಾನು ಕಾಂಗ್ರೆಸ್ಗೆ ಹೋಗುವುದಿಲ್ಲ' ಎಂದು ನೇರವಾಗಿ ಹೇಳಿದರು.

ಜೊತೆಗೆ 'ನನಗೆ ಅಂದರೆ ಮಂಡ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ 4,000 ಕೋಟಿ ಅನುದಾನ ನೀಡಿದೆ. ಪ್ರತಿಯೊಂದು ವಿಷಯಕ್ಕೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರ್ಥ ಮಾಡಿಸಿ ಕೂಲಂಕುಷವಾಗಿ ಎಲ್ಲವನ್ನೂ ಹೇಳಿಕೊಂಡು ಬಂದಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅಭಿವೃದ್ಧಿಯೇ ಮೂಲ ಮಂತ್ರ ಎಂದು ಹೋಗುತ್ತಿದ್ದಾರೆ. ಅವರಿಗೆ ಕುಟುಂಬ ಇದಿಯಾ? ಏನೂ ಇಲ್ಲ. ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲದ ನಾಯಕತ್ವ ಅವರದ್ದು. ನಾನು ಮುಂದೆ ಎಂಪಿ ಆಗಬಹುದು, ಉನ್ನತ ಹುದ್ದೆಗೂ ಹೋಗಬಹುದು. ಆಗಲೂ ನಾನು ಮಂಡ್ಯಕ್ಕೆ ಯಾವ ರೀತಿ ನೆರವಾಗ್ತೀನಿ ಅನ್ನೋದನ್ನು ನೀವು ನೋಡುತ್ತೀರಿ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ. ಮಂಡ್ಯ ಜನರ ಪ್ರೀತಿ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ' ಎಂದು ಪ್ರಧಾನಿ ಮೋದಿ ಅವರನ್ನು ಕೊಂಡಾಡಿದರು.
ಸುಮಲತಾ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವುದು ಸ್ಪಷ್ಟವಾಗಿದೆ. ಮಂಡ್ಯದಲ್ಲಿ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದು ಅವರು ಶೀಘ್ರದಲ್ಲೇ ಬಿಜೆಪಿ ಪಕ್ಷ ಸೇರುತ್ತಾರೆನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಸುಮಲತಾ ಬಿಜೆಪಿ ಸೇರ್ಪಡೆಯ ದಿನಾಂಕವಾಗಲಿ, ತಾವು ಬಿಜೆಪಿ ಸೇರ್ಪಡೆಗೊಳ್ಳುತ್ತೇನೆ ಅಂದಾಗಲಿ ಎಲ್ಲೂ ಕೂಡ ಹೇಳಿಲ್ಲ. ಹೀಗಾಗಿ ಅವರು ಬಿಜೆಪಿ ಸೇರುತ್ತಾರಾ? ಅಥವಾ ಕೇವಲ ಬೆಂಬಲವನ್ನು ನೀಡಿ ಸುಮ್ಮನಾಗುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.
ಈ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಷೇಕ್ ಅಂಬರೀಶ್ ಸುಮಲತಾ ಅವರಿಗೆ ಸಾಥ್ ನೀಡಿದರು. ಅಂಬರೀಷ್ ಅಭಿಮಾನಿಗಳು, ಕಾರ್ಯಕರ್ತರು, ದರ್ಶನ್ ಅಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications