ಕೆಆರ್ಎಸ್ ಸುತ್ತಲಿನ ಜನರನ್ನು ಬೆಚ್ಚಿ ಬೀಳಿಸಿದ್ದ ನಿಗೂಢ ಶಬ್ದ!
ಮಂಡ್ಯ, ಜುಲೈ 09; ಮಂಡ್ಯ ಜಿಲ್ಲೆಯಲ್ಲಿ ಕೇಳಿ ಬಂದ ಆ ನಿಗೂಢ ಶಬ್ದದ ಬಳಿಕ ಕೆಆರ್ಎಸ್ ಜಲಾಶಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ನಿಲ್ಲಿಸಬೇಕು. ಇದರಿಂದ ಭವಿಷ್ಯದಲ್ಲಿ ಜಲಾಶಯಕ್ಕೆ ಅಪಾಯವಿದೆ ಎಂಬ ಕೂಗು ಕೇಳಿ ಬಂದು ಹೋರಾಟಗಳು ತೀವ್ರವಾಗುತ್ತಿದ್ದಂತೆಯೇ ರಾಜಕೀಯ ಮೇಲಾಟಗಳು ಆರಂಭವಾದವು.
ಮಂಡ್ಯದಲ್ಲಿ ನಿಗೂಢ ಶಬ್ದ ಕೇಳಿ ಬಂದು ಮೂರು ವರ್ಷಗಳಾಗುತ್ತಿವೆ. ನವೆಂಬರ್ 29ರ ಮಧ್ಯಾಹ್ನ 2.42ರಲ್ಲಿ ಮಂಡ್ಯ ನಗರದ ಸುತ್ತಮುತ್ತ 1 ಸೆಕೆಂಡ್ ಅಂತರದಲ್ಲಿ 2 ಬಾರಿ ಶಬ್ದ ಕೇಳಿ ಬಂದಿತ್ತು. ಆ ಭಯಾನಕ ಕ್ಷಣಗಳನ್ನು ಜನ ಇನ್ನೂ ಮರೆತಿಲ್ಲ. ಕೆಲವರು ಭೂಕಂಪನ ಎಂದು ಗಾಳಿ ಸುದ್ದಿ ಹಬ್ಬಿಸಿದ್ದರೂ ಅದು ಕೆಆರ್ಎಸ್ ವ್ಯಾಪ್ತಿಯ ಬೇಬಿಬೆಟ್ಟದಲ್ಲಿ ಗಣಿಗಾರಿಕೆ ಸಂದರ್ಭ ನಡೆದ ಸ್ಪೋಟ ಎಂಬುದು ಬಳಿಕ ಬಯಲಾಯಿತು.
ಆ ಬಳಿಕ ಕೆಆರ್ಎಸ್ ಜಲಾಶಯ ವ್ಯಾಪ್ತಿಯಲ್ಲಿ ಒಂದಿಷ್ಟು ಭಯ ಶುರುವಾಯಿತು. ಜತೆಗೆ ಜಲಾಶಯದ ಹತ್ತು ಕಿ. ಮೀ. ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಒತ್ತಡಗಳು ಕೇಳಿ ಬಂದವು. ಅಲ್ಲಿ ತನಕ ಎಗ್ಗಿಲ್ಲದೆ, ಗಣಿಗಾರಿಕೆ ನಡೆಸುತ್ತಿದ್ದ ಗಣಿಧಣಿಗಳಿಗೆ ಹೊಡೆತ ಬೀಳಲಾರಂಭಿಸಿತು. ಅದರಲ್ಲೂ ಎಲ್ಲರೂ ಬೇಬಿ ಬೆಟ್ಟದ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಂತೆಯೇ ಗಣಿರಾಜಕೀಯ ಪುಟಿದು ನಿಂತಿತು. ಅದರ ಪರಿಣಾಮವೇ ಇವತ್ತು ನಾವು ನೋಡುತ್ತಿರುವ ರಾಜಕೀಯ ದೊಂಬರಾಟ ಎಂದರೆ ತಪ್ಪಾಗಲಾರದು.

ನಿಷೇಧಕ್ಕೆ ಒತ್ತಾಯಿಸಿ ಪ್ರಧಾನಿಗೆ ಪತ್ರ
ಮೊದಲಿಗೆ ಕೆಆರ್ಎಸ್ ಜಲಾಶಯದ 10 ಕಿ. ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಯಿತು. ಅದಾದ ನಂತರ 20 ಕಿ. ಮೀ. ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧ ಮಾಡಬೇಕೆಂಬ ಹೋರಾಟ ಶುರುವಾಯಿತು. ಸಂಸದೆ ಸುಮಲತಾ ಅಕ್ರಮ ಗಣಿಗಾರಿಕೆ ವಿರುದ್ಧ ಸಮರವನ್ನು ಕೆಲವು ತಿಂಗಳ ಹಿಂದೆಯೇ ಸಾರಿದ್ದರು. ಅದರ ಜತೆ ಜತೆಯಲ್ಲಿಯೇ ಬಿಜೆಪಿ ಮುಖಂಡ ಸಿ. ಟಿ. ಮಂಜುನಾಥ್ ಕೆಆರ್ಎಸ್ ಅಣೆಕಟ್ಟೆಗೆ ಅಪಾಯ ಉಂಟು ಮಾಡುತ್ತಿರುವ ಕಲ್ಲು ಗಣಿಗಾರಿಕೆಗೆ 20 ಕಿ. ಮೀ. ಸುತ್ತಳತೆಯ ವ್ಯಾಪ್ತಿಯಲ್ಲಿ ಶಾಶ್ವತ ನಿಷೇಧ ಹೇರಲು, ಅಣೆಕಟ್ಟೆ ಬಿರುಕು ಬಿಟ್ಟಿರುವ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಪತ್ರ ಬರೆದಿದ್ದರು.

ಸ್ಪೋಟಕ ಬಳಕೆಯಿಂದ ಕೆಆರ್ ಎಸ್ ಗೆ ಅಪಾಯ
ಪತ್ರದಲ್ಲಿ ಕನ್ನಂಬಾಡಿ ಕಟ್ಟೆಗೆ ಅಪಾಯ ಇರುವ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪಗಳ ನಿರ್ವಹಣಾ ಸಂಸ್ಥೆಯ ವಿಜ್ಞಾನಿಗಳು ವರದಿ ನೀಡಿರುವ ಬಗ್ಗೆ ಉಲ್ಲೇಖ ಮಾಡಿದ್ದ ಸಿ. ಟಿ. ಮಂಜುನಾಥ್ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ, ಕೆ. ಆರ್. ಪೇಟೆ, ಶ್ರೀರಂಗಪಟ್ಟಣ, ಕೆ. ಆರ್. ನಗರದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದು, ನಿಷೇಧಿತ ಸ್ಪೋಟಕಗಳನ್ನು ಬಳಕೆ ಮಾಡಿ ಗಣಿಗಾರಿಕೆ ಮಾಡುತ್ತಿರುವುದರಿಂದ ಜಲಾಶಯಕ್ಕೆ ಅಪಾಯವಿದೆ ಎಂಬುದನ್ನು ವಿವರಿಸಿದ್ದರು.

ಗಣಿಗಾರಿಕೆ ಮುಚ್ಚಿಸಿದರೂ ಪ್ರಯೋಜನವಾಗಿಲ್ಲ
ಇಷ್ಟೆಲ್ಲ ಬೆಳವಣಿಗೆ ನಡೆದ ನಂತರ ಬೇಬಿ ಬೆಟ್ಟ ಸುತ್ತಲಿನ ಕಲ್ಲು ಗಣಿಗಾರಿಕೆಯಿಂದ ಕೆಆರ್ಎಸ್ ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ಕೇಂದ್ರ ನೈಸರ್ಗಿಕ ವಿಕೋಪ ತಂಡ ನೀಡಿದ ವರದಿ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇಲಾಖೆಯ ಉಪ ನಿರ್ದೇಶಕಿ ಟಿ. ವಿ. ಪುಷ್ಪಾ ನೇತೃತ್ವದಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಸುಮಾರು 70ಕ್ಕೂ ಕಲ್ಲು ಕ್ವಾರಿಗಳ ಸುತ್ತ ಕಂದಕಗಳನ್ನು ನಿರ್ಮಾಣ ಮಾಡಿ ಗಣಿಗಾರಿಕೆಗೆ ಅವಕಾಶವಾಗದಂತೆ ಕ್ರಮಗೊಂಡಿದ್ದರು. ಆದರೆ ಗಣಿ ಮಾಲೀಕರು ಕಂದಕಗಳಿಗೆ ಮಣ್ಣು ತುಂಬಿ ಕದ್ದು ಮುಚ್ಚಿ ಗಣಿಗಾರಿಕೆ ನಡೆಸುತ್ತಲೇ ಇರುವುದು ಗುಟ್ಟಾಗಿ ಉಳಿದಿಲ್ಲ.
Recommended Video

ಇನ್ನೂ ನಡೆಯದ ಪ್ರಾಯೋಗಿಕ ಸ್ಫೋಟ
ಗಣಿಗಾರಿಕೆಯಿಂದ ಕೆಆರ್ ಎಸ್ ಜಲಾಶಯಕ್ಕೆ ಹಾನಿಯಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲಿಯೇ ಜಲಾಶಯದ ಸುರಕ್ಷತೆ ಅರಿಯುವ ಸಲುವಾಗಿ ಸ್ಥಳಕ್ಕೆ ಭೇಟಿ ನೀಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪುಷ್ಪಾ ಬೇಬಿಬೆಟ್ಟವನ್ನು ಒಳಗೊಂಡಂತೆ ಕೆಆರ್ಎಸ್ ಜಲಾಶಯದ ಸುತ್ತಲಿನ ಪ್ರದೇಶಗಳಲ್ಲಿ ತಜ್ಞರ ತಂಡದಿಂದ ಪ್ರಾಯೋಗಿಕ ಸ್ಫೋಟ ನಡೆಸಿ ಆ ಮೂಲಕ ಅಣೆಕಟ್ಟೆಯಿಂದ ಎಷ್ಟು ಕಿ. ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಅಥವಾ ಗಣಿಸ್ಪೋಟ ನಡೆಸಬಾರದು ಎನ್ನುವುದನ್ನು ಖಚಿತ ಪಡಿಸುವ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅದು ಇಲ್ಲಿಯ ತನಕ ನಡೆಯದ ಕಾರಣ ಇಂದು ಗಣಿಗಾರಿಕೆ ವಿಚಾರ ರಾಜಕೀಯಕ್ಕೆ ತಿರುಗಿದೆ. ಹೀಗಾಗಿ ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸದೆ ಹೋದರೆ ಮುಂದೆಯೂ ಕೆಆರ್ಎಸ್ ಜಲಾಶಯನ್ನು ರಾಜಕಾರಣಿಗಳು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications