ಗಣಿಗಾರಿಕೆಗಿಂತ ಕೆ. ಆರ್. ಎಸ್ ಡ್ಯಾಂ ರಕ್ಷಣೆ ಮುಖ್ಯ; ಪುಟ್ಟರಾಜು
ಮಂಡ್ಯ, ಜನವರಿ 31; "ಗಣಿಗಾರಿಕೆಯಿಂದ ಜೇಬು ತುಂಬಿಸಿಕೊಳ್ಳುವ ಅಗತ್ಯತೆ ನನಗಿಲ್ಲ. ಕೃಷ್ಣರಾಜಸಾಗರ ಜಲಾಶಯದ ರಕ್ಷಣೆ ಮುಖ್ಯ" ಎಂದು ಜೆಡಿಎಸ್ ಶಾಸಕ ಸಿ. ಎಸ್. ಪುಟ್ಟರಾಜು ಸ್ಪಷ್ಟಪಡಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಕೆ. ಆರ್. ಎಸ್ ರಕ್ಷಣೆ ಬಗ್ಗೆ ಸಂಬಂಧಿಸಿದ ಇಲಾಖಾ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದ್ದೆ. 144 ಸೆಕ್ಷನ್ ಅನ್ವಯ ನಿಷೇಧಾಜ್ಞೆಯನ್ನೂ ಜಾರಿ ಮಾಡಿಸಿದ್ದೆ" ಎಂದರು.
"ಮುಖ್ಯಮಂತ್ರಿಗಳು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಸಹಮತ ಇದೆ. ಆದರೆ, ಕೆ. ಆರ್. ಎಸ್ ರಕ್ಷಣೆ ವಿಚಾರದಲ್ಲಿ ಮಾತ್ರ ಯಾವುದೇ ರಾಜೀ ಇಲ್ಲ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೂ ಇಲ್ಲ. ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆಯಿಂದ ತೊಂದರೆಯಾದಲ್ಲಿ ಅದನ್ನೂ ಸಹ ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ನಾನೂ ಸಹ ಒತ್ತಾಯಿಸುತ್ತೇನೆ" ಎಂದು ಹೇಳಿದರು.

"ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಕೆ. ಆರ್. ಎಸ್ ರಕ್ಷಣೆ ಕುರಿತಂತೆ ತಜ್ಞರಿಂದ ವರದಿ ಪಡೆಯುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದೇ. ಅದು ಈವರೆಗೂ ಆಗಿಲ್ಲ, ಒಮ್ಮೆ ತಜ್ಞರ ಸಮಿತಿ ಬಂದಾಗ ವಾಪಸ್ಸು ಕಳುಹಿಸಲಾಗಿತ್ತು. ಈಗ ಮತ್ತೆ ತಜ್ಞರು ಬಂದು ಪರಿಶೀಲನೆ ನಡೆಸಿ ವರದಿ ನೀಡಲಿ, ಗಣಿಗಾರಿಕೆಯಿಂದ ನಿಜವಾಗಿ ಧಕ್ಕೆಯುಂಟಾದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸಲು ಒತ್ತಾಯಿಸುವುದಾಗಿ" ತಿಳಿಸಿದರು.
ಹುನ್ನಾರ ಮಾಡಿದರು; "ಬಹುತೇಕ ಕಾಂಗ್ರೆಸ್ಸಿನವರು ಸಮ್ಮಿಶ್ರ ಸರ್ಕಾರ ಕೆಡವಲು ಹುನ್ನಾರ ಮಾಡಿದ್ದರು. ನಮ್ಮನ್ನು ಖಳನಾಯಕನ್ನಾಗಿ ಮಾಡಲು ಹೊರಟಿದ್ದರು. ಈ ಹಿನ್ನಲೆಯಲ್ಲಿ ವಿಧಿ ಇಲ್ಲದೆ ಯಾವುದೇ ವಿಚಾರದಲ್ಲಿ ಬದಲಾವಣೆ ಇಲ್ಲ. ಈಗಾಗಲೇ ನಮ್ಮ ನಾಯಕರಾದ ಎಚ್. ಡಿ. ದೇವೇಗೌಡರು ಇದನ್ನೇ ಹೇಳಿದ್ದಾರೆ" ಎಂದರು.
"ಗೋ ನಿಷೇಧ, ಕೃಷಿ ಕಾಯಿದೆಗಳು ಮತ್ತು ರೈತಪರ ಕಾಳಜಿ ಬಗ್ಗೆ ಬಿಜೆಪಿಯೊಂದಿಗೆ ರಾಜೀ ಇಲ್ಲ. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ವಿಧಾನ ಪರಿಷತ್ನಲ್ಲಿ ನಮ್ಮ ಪಕ್ಷಕ್ಕೆ ಸಭಾಪತಿ ಸಿಗುವಂತಹ ಸಂದರ್ಭದಲ್ಲಿ ಅವರೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದೇವೆ" ಎಂದರು.
"ಮೈಸೂರು ಮಹಾನಗರ ಪಾಲಿಕೆಯಲ್ಲಿ ಯಾರಿಗೆ ಅನುಕೂಲವಾಗುತ್ತೋ ಅವರು ಅಧಿಕಾರ ಹಿಡಿಯುತ್ತಾರೆ. ಮುಂದಿನ ಸ್ಥಳೀಯ ಸಂಸ್ಥೆಗಳಲ್ಲಿ ಮೊದಲಿನಿಂದಲೂ ಯಾರಿಗೆ ಅನುಕೂಲವಾಗುತ್ತದೆಯೇ ಅವರೊಂದಿಗೆ ನಾವೂ ಕೈಜೋಡಿಸಲಿದ್ದೇವೆ. ಅದು ಮುಂದುವರಿಯುತ್ತದೆ" ಎಂದು ಸಿ. ಎಸ್. ಪುಟ್ಟರಾಜು ಸ್ಪಷ್ಟಪಡಿಸಿದರು.












Click it and Unblock the Notifications