ನಿಖಿಲ್ ನಾಮಪತ್ರ ಗೊಂದಲ: ಮಂಡ್ಯಕ್ಕೆ ಮುಖ್ಯ ಚುನಾವಣಾ ಆಯುಕ್ತ
ಮಂಡ್ಯ, ಮಾರ್ಚ್ 30: ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರದ ಗೊಂದಲ ದಿನೇ-ದಿನೇ ಹೆಚ್ಚಾಗುತ್ತಿರುವ ಕಾರಣ ಇಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಅವರು ಮಂಡ್ಯಕ್ಕೆ ಭೇಟಿ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಂಡ್ಯ ಜಿಲ್ಲಾ ಪ್ರವಾಸಿ ಕೇಂದ್ರಕ್ಕೆ ಆಗಮಿಸಿರುವ ಸಂಜೀವ್ ಕುಮಾರ್ ಅವರು, ಜಿಲ್ಲಾ ಚುನಾವಣಾಧಿಕಾರಿ ಮಂಜುಶ್ರಿ ಅವರನ್ನು ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ್ದಾಗ ಕೆಲವು ಕಾಲಂಗಳನ್ನು ಬಿಟ್ಟಿದ್ದರು, ಆದರೆ ನಂತರ ಅದನ್ನು ಚುನಾವಣಾಧಿಕಾರಿಯ ಅಣತಿಯಂತೆ ತಿದ್ದಿ ನೀಡಲಾಯಿತು. ಇದನ್ನು ಸುಮಲತಾ ಪರ ವೀಕ್ಷಕರು ಪ್ರಶ್ನೆ ಮಾಡಿದ್ದರು.

ಆದರೆ ಇದಕ್ಕೆ ಅವಕಾಶವಿದೆ ಎಂದು ಚುನಾವಣಾಧಿಕಾರಿ ಹೇಳಿದ್ದರು, ನಾಮಪತ್ರದ ತಿದ್ದುಪಡಿ ನಿಯಮದ ಪ್ರಕಾರವೇ ಆಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದರು, ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯವನ್ನು ನೀಡಿದ್ದರು. ಆದರೆ ವಿಡಿಯೋ ಬಗ್ಗೆಯೂ ಸುಮಲತಾ ಪರ ವೀಕ್ಷಕರು ತಕರಾರು ತೆಗೆದಿದ್ದಾರೆ.
ಘಟನೆಯ ಪೂರ್ತಿ ವಿಡಿಯೋ ನೀಡಲಾಗಿಲ್ಲ, ನಾಮಪತ್ರ ತಿದ್ದುವಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಸುಮಲತಾ ಹಾಗೂ ಅವರ ಪರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತು ಆಯೋಗಕ್ಕೆ ದೂರು ಸಹ ನೀಡಿದ್ದಾರೆ. ಹಾಗಾಗಿಯೇ ಇಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಖುದ್ದು ಮಂಡ್ಯಕ್ಕೆ ಆಗಮಿಸಿದ್ದಾರೆ.
ನಾಮಪತ್ರ ಗೊಂದಲದ ಬಗ್ಗೆ ಇಬ್ಬರೂ ಅಭ್ಯರ್ಥಿಗಳ ಪರವಾದ ಆಲಿಸಿ, ಚುನಾವಣಾಧಿಕಾರಿಗಳ ವಿಚಾರಣೆ ನಡೆಸಿ, ವಿಡಿಯೋ ವನ್ನು ನೋಡಿ ಎಲ್ಲ ಗೊಂದಲಗಳನ್ನು ಬಗೆಹರಿಸಲೆಂದೇ ಸಂಜೀವ್ ಕುಮಾರ್ ಅವರು ಆಗಮಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ನಾಮಪತ್ರ ಗೊಂದಲ ಏನಾಗುತ್ತದೆಯೋ ಕಾದು ನೋಡಬೇಕಿದೆ.












Click it and Unblock the Notifications