ನಿಖಿಲ್ಗೆ ಬೆಂಬಲ : ಮಂಡ್ಯ ಕಾಂಗ್ರೆಸ್ನಲ್ಲಿ ಇನ್ನೂ ಬಿಕ್ಕಟ್ಟು!
Recommended Video

ಬೆಂಗಳೂರು, ಏಪ್ರಿಲ್ 7 : ಮಂಡ್ಯ ಕಾಂಗ್ರೆಸ್ ನಾಯಕರ ಜೊತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೆಂಬಲಿಸಲು ಕೆಲವು ಕಾಂಗ್ರೆಸ್ ನಾಯಕರು ನಿರಾಕರಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸಿದ್ದರಾಮಯ್ಯ ನಿವಾಸ ಕೃಷ್ಣಾದಲ್ಲಿ ಭಾನುವಾರ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಶಾಸಕರಾದ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ ಸೇರಿದಂತೆ ಇತರ ನಾಯಕರ ಜೊತೆ ಸಭೆ ನಡೆಯಿತು. ಮೈತ್ರಿ ಧರ್ಮವನ್ನು ಪಾಲಿಸುವ ಕುರಿತು ಸಿದ್ದರಾಮಯ್ಯ ಅವರು ನಾಯರೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ರೀತಿ ನಮ್ಮನ್ನು ಪದೇ ಪದೇ ಅವಮಾನಿಸಿದರೆ, ನಂಬಿಕೆ ಇಡುವುದು ಹೇಗೆ?, ನಾವು ಯಾವ ಮುಖವಿಟ್ಟುಕೊಂಡು ಕಷ್ಟಪಟ್ಟು ಕೆಲಸ ಮಾಡಬೇಕು? ಎಂದು ನಾಯಕರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು 'ಹೈಕಮಾಂಡ್ ಸೂಚನೆಯಂತೆ ರಾಜ್ಯದಲ್ಲಿ ಹೆಚ್ಚು ಸ್ಥಾನಗಳಿಸಬೇಕು. ಆದ್ದರಿಂದ, ಸೂಚನೆ ಪಾಲನೆ ಮಾಡಲೇಬೇಕಾಗಿದೆ. ಎಲ್ಲಾ ಕಡೆ ಉತ್ತಮ ಗೆಲ್ಲುವ ಅವಕಾಶವಿದೆ. ನೀವು ತಾಳ್ಮೆಯಿಂದ ವರ್ತಿಸಿ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೂ ಚರ್ಚೆ ನಡೆಸುತ್ತೇನೆ' ಎಂದರು.
ಸಭೆಯಲ್ಲಿ ಒಮ್ಮತ ಮೂಡದ ಕಾರಣ ಸೋಮವಾರ ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಕಾರ್ಯಕರ್ತರ ಜೊತೆ ಮಾತನಾಡಿ ಮುಂದಿನ ತೀರ್ಮಾನ ಪ್ರಕಟಿಸುತ್ತೇವೆ ಎಂದು ನಾಯಕರು ಹೇಳಿದರು.
ಸಭೆಯ ಬಳಿಕ ಮಾತನಾಡಿದ ಚಲುವರಾಯಸ್ವಾಮಿ ಅವರು, 'ಇದು ನಮ್ಮ ಪಕ್ಷಕ್ಕೆ ಸೀಮಿತವಾದ ಸಭೆ ಮಾತ್ರ. ಸಿದ್ದರಾಮಯ್ಯ ಎಂಟು ಕ್ಷೇತ್ರಗಳ ಮುಖಂಡರ ಸಭೆ ಕರೆದಿದ್ದರು. ನಮ್ಮ ಮೇಲೆ ಸಿದ್ದರಾಮಯ್ಯ ಡಿಪೆಂಡ್ ಆಗಿದ್ದಾರೆ. ಆದರೆ ನಾವು ನಮ್ಮ ಪಕ್ಷದ ಬೆನ್ನುಲುಬಾದ ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇವೆ. ಅವರೆಲ್ಲರ ಜೊತೆ ಮಾತನಾಡಿ ತೀರ್ಮಾನವನ್ನು ಸಿದ್ದರಾಮಯ್ಯ ಅವರಿಗೆ ಹೇಳುತ್ತೇವೆ' ಎಂದರು.












Click it and Unblock the Notifications