ಸಿದ್ದರಾಮಯ್ಯ ಅವರ ಹೊಗಳಿ, ತೆಗಳಿದ ನಳಿನ್ ಕಟೀಲ್
ಮಂಡ್ಯ, ಅಕ್ಟೋಬರ್ 18: ಸಿದ್ದರಾಮಯ್ಯ ಅವರನ್ನು ಹೊಗಳಿದಂತೆ ಮಾಡಿ ರಾವಣ ಎಂದು ಜರಿದಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.
ಸಾರ್ವಕರ್ ಗೆ ಭಾರತ ರತ್ನ ಕೊಡುವ ವಿಷಯದ ಬಗ್ಗೆ ಸಿದ್ದರಾಮಯ್ಯ ಆಕ್ಷೇಪ ಎತ್ತಿರುವ ಬಗ್ಗೆ ಮಾತನಾಡಿದ ನಳಿನ್ ಕಟೀಲ್, 'ಸಿದ್ದರಾಮಯ್ಯ ಅವರು ಹಿರಿಯರು, ಜ್ಞಾನಿಗಳು, ಪಂಡಿತರು ಸ್ವಲ್ಪ ಇತಿಹಾಸ ತಿಳಿದುಕೊಂಡಿದ್ದಾರೆ ಹಾಗಾಗಿ ಹೀಗೆಲ್ಲಾ ಮಾತನಾಡುತ್ತಿದ್ದಾರೆ' ಎಂದರು.
'ಸಿದ್ದರಾಮಯ್ಯ ಅವರು ಜ್ಞಾನಿಗಳು ಆದರೆ ಪುರಾಣದ ಪ್ರಕಾರ ರಾವಣನೂ ಜ್ಞಾನಿ, ಪಂಡಿತ ಆಗಿದ್ದ' ಎಂದು ಪರೋಕ್ಷವಾಗಿ ನಳಿನ್ ಕಟೀಲ್, ಸಿದ್ದರಾಮಯ್ಯ ಅವರನ್ನು ರಾವಣನಿಗೆ ಹೋಲಿಸಿದರು.

ಇಂದು ಮಂಗಳೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, 'ಗಾಂಧಿ ಕೊಲೆಗೆ ಸಂಚು ರೂಪಿಸಿದ್ದು ಸಾವರ್ಕರ್ ಆದರೆ ಸಾಕ್ಷ್ಯ ಕೊರತೆಯಿಂದ ಶಿಕ್ಷೆಯಿಂದ ಪಾರಾದರು' ಎಂದು ಹೇಳಿದರು.
ನಳಿನ್ ಕಟೀಲ್ ಅವರು ರಾಜ್ಯದ 34 ಜಿಲ್ಲೆಗಳು ಎಂದು ಹೇಳಿದ್ದರ ಬಗ್ಗೆ ವ್ಯಂಗ್ಯ ಮಾಡಿದ ಸಿದ್ದರಾಮಯ್ಯ, 'ನಳಿನ್ ಕಟೀಲ್ ಒಬ್ಬ ಅಜ್ಞಾನಿ' ಎಂದು ಛೇಡಿಸಿದರು.
ಸಿದ್ದರಾಮಯ್ಯ ಅವರು ತಮ್ಮ ಬಗ್ಗೆ ಆಡಿದ ಮಾತಿಗೆ ಪ್ರತಿಕ್ರಿಯೆಯಾಗಿ ಮಂಡ್ಯದಲ್ಲಿ ಇಂದು ನಳಿನ್ ಕಟೀಲ್ ಅವರು ಮೇಲ್ಕಂಡಂತೆ ಹೇಳಿದರು.












Click it and Unblock the Notifications