ಎಷ್ಟೇ ಮಳೆಯಾದರೂ ಮಂಡ್ಯದ ಶಿಂಷಾನದಿ ತುಂಬಿ ಹರಿಯಲೇ ಇಲ್ಲ!
ಮಂಡ್ಯ, ಸೆಪ್ಟೆಂಬರ್ 15 : ಎಲ್ಲೆಡೆ ಧಾರಾಕಾರ ಮಳೆಯಾಗಿ ನದಿತೊರೆಗಳು ಉಕ್ಕಿ ಹರಿದರೂ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದ ಶಿಂಷಾ (ಕದಂಬ) ನದಿ ಮಾತ್ರ ಈ ಬಾರಿ ಉಕ್ಕಿ ಹರಿಯಲೇ ಇಲ್ಲ. ಇದರಿಂದ ಈ ನದಿ ದಡದ ರೈತರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ.
ನದಿ ತುಂಬ ಹುಲ್ಲು, ಸಸ್ಯಗಳು ಬೆಳೆದು ನಿಂತಿದ್ದು, ಅದರ ಮಧ್ಯೆ ಸಣ್ಣದಾಗಿ ನೀರು ಹರಿದು ಹೋಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಬರ ಬಂದಿದ್ದರಿಂದ ನದಿಯಲ್ಲಿ ನೀರು ಸಂಪೂರ್ಣ ಬತ್ತಿಹೋಗಿತ್ತು. ಈ ಬಾರಿ ಸ್ವಲ್ಪವಾದರೂ ನೀರು ಕಾಣಿಸುತ್ತಿದೆಯಲ್ಲ ಎಂದು ಜನ ಸಮಾಧಾನ ಮಾಡಿಕೊಳ್ಳುವಂತಾಗಿದೆ.
ಈ ಬಾರಿಯ ಮುಂಗಾರು ಮಳೆಗೆ ಬಹಳಷ್ಟು ನದಿಗಳು ತುಂಬಿ ಹರಿದಿದ್ದವು. ಗಗನಚುಕ್ಕಿ ಜಲಪಾತ ಭೋರ್ಗರೆದು ಧುಮುಕುವುದನ್ನು ನೋಡಲು ರಾಜ್ಯದ ಹಲವೆಡೆಯಿಂದ ಜನಸಾಗರವೇ ಬಂದಿತ್ತು. ಬರುತ್ತಲೂ ಇದೆ. ಆದರೆ ಈ ಶಿಂಷಾ ನದಿ ಮಾತ್ರ ತುಂಬಿ ಹರಿಯದಿರುವುದು ಅಚ್ಚರಿಗೆ ಕಾರಣವಾಗಿದೆ.

ಶಿಂಷಾ ನದಿ ದಂಡೆಯ ಮೇಲ್ಭಾಗದಲ್ಲಿರುವ ಮದ್ದೂರು, ಕುಣಿಗಲ್ ತುಮಕೂರು ಪ್ರದೇಶಗಳಲ್ಲಿ ಮಳೆಯಾಗದಿರುವುದು, ಮರಳು ದಂಧೆ, ಹೆಚ್ಚಾದ ಕೊಳವೆಬಾವಿಗಳು ಹೀಗೆ ಹಲವು ಕಾರಣಗಳಿಂದಾಗಿ ಈ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ನದಿ ಖಾಲಿಯಾಗಿದ್ದು, ಕೆಲವೆಡೆ ನೀರು ಹರಿಯದೆ ನಿಂತು ಪಾಚಿ ಕಟ್ಟಿಕೊಂಡಿದೆ.
ಶಿಂಷಾ ನದಿ ಮಂಡ್ಯದ ಮುತ್ತತ್ತಿ ಮಾರ್ಗವಾಗಿ ತಮಿಳುನಾಡು ಕಡೆಗೆ ಹರಿಯುತ್ತದೆ. ಈ ನದಿ ತುಂಬಿ ಹರಿದರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ತುಂಬಿ ಹರಿದಿದ್ದು ಕಡಿಮೆಯೇ ಇದರಿಂದ ಈ ನದಿಯನ್ನು ನಂಬಿಕೊಂಡು ಕೃಷಿ ಮಾಡಿಕೊಂಡು ಬಂದಿದ್ದ ರೈತರು ಈಗ ಸಂಕಷ್ಟಕ್ಕೀಡಾಗಿದ್ದಾರೆ.
ಮುಂಗಾರಿನಲ್ಲಿಯೇ ಈ ನದಿ ತುಂಬಿ ಹರಿಯಬೇಕಿತ್ತು. ಆದರೆ ಇದೀಗ ಮುಂಗಾರು ಮುಗಿಯುತ್ತಿದ್ದು, ಇನ್ನು ಏನಿದ್ದರೂ ಹಿಂಗಾರು ಮಳೆ ಸುರಿಯಬೇಕು. ಆದರೆ ಹಿಂಗಾರು ಮಳೆಯಿಂದ ನದಿ ತುಂಬಿ ಹರಿಯುವುದು ಕಷ್ಟವೇ. ಕಳೆದ ವರ್ಷ ಹಿಂಗಾರು ಮಳೆ ಚೆನ್ನಾಗಿ ಸುರಿದಿದ್ದು, ಇದರಿಂದ ಬಹಳಷ್ಟು ಕೆರೆ ಕಟ್ಟೆಗಳು ತುಂಬಿದ್ದವು. ಅದು ಈ ವರ್ಷವೂ ಮರುಕಳಿಸಿದರೆ ಶಿಂಷಾ ನದಿಯಲ್ಲಿ ನೀರು ಕಾಣಬಹುದು ಇಲ್ಲದಿದ್ದರೆ ಒಣಗಿ ಬರಡಾಗುವುದು ಖಚಿತ.












Click it and Unblock the Notifications