ಜಲಜೀವನ್ ಮಿಷನ್ ಯೋಜನೆಯಲ್ಲಿ ಭಾರಿ ಅವ್ಯವಹಾರ: ಪಿ.ಎಂ.ನರೇಂದ್ರಸ್ವಾಮಿ ಗಂಭೀರ ಆರೋಪ
ಪೈಪ್ಲೈನ್ ಅಳವಡಿಸುವಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಲೋಕಾಯುಕ್ತಕ್ಕೆ ದೂರು ನೀಡಿ ತನಿಖೆಗೆ ಒತ್ತಾಯಿಸುವುದಾಗಿ ಪಿ.ಎಂ.ನರೇಂದ್ರಸ್ವಾಮಿ ಮಂಡ್ಯದಲ್ಲಿ ಹೇಳಿದರು.
ಮಂಡ್ಯ, ಫೆಬ್ರವರಿ, 02: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಅನುಷ್ಠಾನದಲ್ಲಿ ಗೋಲ್ಮಾಲ್ ನಡೆದಿದೆ. ಪೈಪ್ಲೈನ್ ಅಳವಡಿಸುವಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿ ತನಿಖೆಗೆ ಒತ್ತಾಯಿಸುವುದಾಗಿ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಂಡ್ಯದಲ್ಲಿ ಹೇಳಿದರು.
ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಜಾರಿಯಲ್ಲಿದೆ. ಒಂದು ಯೋಜನೆ ಜಾರಿಯಲ್ಲಿರುವಾಗಲೇ ಮತ್ತೊಂದು ಯೋಜನೆಯನ್ನು ಹೇರುವ ಅವಶ್ಯಕತೆ ಏನಿತ್ತು. ಜಲಜೀವನ್ ಮಿಷನ್ ಯೋಜನೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನಿರ್ಮಿಸಲಾದ ವಾಟರ್ ಟ್ಯಾಂಕ್ಗಳು, ಪೈಪ್ಲೈನ್ಗಳು, ಬೋರ್ವೆಲ್ಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಹಲವಾರು ಹಳ್ಳಿಗಳ ಮನೆ -ಮನೆಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಅದೇ ಸಂಪರ್ಕಗಳಿಗೆ ಮೀಟರ್ ಅಳವಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಹಳೇ ಪೈಪ್ಲೈನ್ ಸಂಪರ್ಕಗಳಿಗೆ ಜಲಜೀವನ್ ಮಿಷನ್ ಸಂಪರ್ಕವನ್ನು ಕಲ್ಪಿಸುವಾಗ ಎಲ್ಲೆಲ್ಲಿ ಅವಶ್ಯಕತೆ ಇದೆ, ಎಲ್ಲಿ ಇಲ್ಲ ಎಂಬುದನ್ನು ಅಧಿಕಾರಿಗಳು ಅವಲೋಕಿಸಬೇಕಿತ್ತು. ಅದಾವುದನ್ನೂ ಪರಿಗಣಿಸದೆ ಸಾರ್ವಜನಿಕರ ಹಣವನ್ನು ಪೋಲು ಮಾಡಲಾಗಿದೆ. ಸಚಿವರು, ಶಾಸಕರು, ಜಿಲ್ಲಾಡಳಿತ ಇದರ ಬಗ್ಗೆ ಮಾತನಾಡುತ್ತಿಲ್ಲ. ಅಧಿಕಾರಿಗಳಿಂದಲೂ ಸಮರ್ಪಕವಾದ ಉತ್ತರ ದೊರೆಯುತ್ತಿಲ್ಲ. ಹಾಗಾದರೆ ಈ ಯೋಜನೆಯ ಬಗ್ಗೆ ಕೇಂದ್ರದ ದಿಕ್ಕು ತಪ್ಪಿಪ್ಪಿಸಿದವರು ಯಾರು?, ಹುನ್ನಾರ ನಡೆಸಿದವರು ಯಾರು? ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ ಎಂದು ಹೇಳಿದರು.

2.5 ಇಂಚಿನ ಪೈಪ್ ಅಳವಡಿಸಿದ್ದಾರೆ
ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯಲ್ಲಿ ಮೂರು ಅಡಿ ಆಳದಲ್ಲಿ ಪೈಪ್ಲೈನ್ ಅಳವಡಿಸಬೇಕು ಎಂಬ ಷರತ್ತು ವಿದಿಸಿದ್ದು, 5 ಇಂಚು ಪೈಪ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ. ಆದರೆ ಗುತ್ತಿಗೆದಾರರು, ಅಧಿಕಾರಿಗಳು 2.5 ಇಂಚಿನ ಪೈಪ್ ಅಳವಡಿಕೆ ಮಾಡಿದ್ದಾರೆ. ಆದರೆ, ಎಲ್ಲಿಯೂ ಇದನ್ನು ನೋಡಲು ಸಾಧ್ಯವಿಲ್ಲ. ಪೈಪ್ಲೈನ್ ಅಳವಡಿಸುವಾಗ ರಸ್ತೆಗೆ ಉಂಟಾದ ಹಾನಿಯನ್ನು ಕಾಂಕ್ರಿಟ್ನಿಂದ ಫಿಲ್ಲಿಂಗ್ ಮಾಡಬೇಕು. ಈ ಕಾಮಗಾರಿಗಳು ನಡೆಯದಿದ್ದರೂ ಬಿಲ್ ಮಾಡಲಾಗಿದೆ. ಒಂದೊಂದು ಹಳ್ಳಿಯಲ್ಲಿ ಪೈಪ್ಲೈನ್ ಅಳವಡಿಸುವಲ್ಲಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪಿಸಿದರು.

127 ಕೋಟಿ ರೂಪಾಯಿಗೆ ಟೆಂಡರ್ ಆಗಿದೆ
ಪೈಪ್ಲೈನ್ನ ವ್ಯಾಸ, ಗುಣಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳಿದ್ದು ಸಾರ್ವಜನಿಕ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ. ಮಳವಳ್ಳಿ ತಾಲೂಕಿನಲ್ಲಿ 127 ಕೋಟಿ ರೂಪಾಯಿಗೆ ಟೆಂಡರ್ ಆಗಿದೆ. 6 ತಿಂಗಳ ಅವಧಿಯೊಳಗೆ ಕಾಮಗಾರಿ ಮುಗಿಯಬೇಕಿದ್ದರೂ ಮೊದಲ ಹಂತದ ಕಾಮಗಾರಿಗೆ 24 ತಿಂಗಳು, ಎರಡನೇ ಹಂತದ ಕಾಮಗಾರಿ 18 ತಿಂಗಳಾಗಿದರೂ ಇದುವರೆಗೂ ಮುಗಿದಿಲ್ಲ. ಕಾಮಗಾರಿಗಳಿಗೆ ಎಸ್ಆರ್ ದರಕ್ಕಿಂತ ಹೆಚ್ಚಿನ ದರ ವಿಧಿಸಲಾಗಿದೆ. ನಿರ್ದಿಷ್ಟ ವ್ಯಕ್ತಿಗಳೇ ಕಾಮಗಾರಿ ನಡೆಸುತ್ತಿದ್ದು, ಮೆಟಿರಿಯಲ್ ಬಾರದಿದ್ದರೂ, ಕಾಮಗಾರಿ ಮುಗಿಯದಿದ್ದರೂ ನಿರಂತರವಾಗಿ ಬಿಲ್ ಆಗುತ್ತಿದೆ ಎಂದು ದೂರಿದರು.

ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕಾಮಗಾರಿ
ಮಳವಳ್ಳಿ ತಾಲೂಕಿನಲ್ಲಿ ಬಿ.ಜಿ.ಪುರ ಕುಡಿಯುವ ನೀರಿನ ಯೋಜನೆ, ನೆಟ್ಕಲ್ ಹಾಗೂ ಇತರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಮಾಡಿದ್ದಾರೆ. ಹಾಗೆಯೇ ಕಿರುಗಾವಲು ಸೇರಿದಂತೆ 46 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆ ಇರುವಾಗಲೇ ಜಲಜೀವನ್ ಮಿಷನ್ ಕಾಮಗಾರಿ ನಡೆಸಲಾಗುತ್ತಿದೆ.

ಸಾರ್ವಜನಿಕರ ಹಣವನ್ನ ಲೂಟಿ ಮಾಡುತ್ತಿದ್ದಾರೆ
ಒಂದೊಂದು ಮನೆಗೆ ಎರಡೆರಡು ಸಂಪರ್ಕ ಕಲ್ಪಿಸಲಾಗುತ್ತಿದೆಯೇ? ಯೋಜನಾಬದ್ಧವಾಗಿ ಕಾಮಗಾರಿಯನ್ನು ನಡೆಸಿ ಪ್ರತಿ ಮನೆಗೆ ನಳ ಸಂಪರ್ಕ ಕಲ್ಪಿಸುವುದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ಅನಗತ್ಯವಾಗಿ ಬಿಲ್ ಮಾಡಿಕೊಂಡು, ಅವೈಜ್ಞಾನಿಕ ಕಾಮಗಾರಿ ನಡೆಸುತ್ತಾ ಸಾರ್ವಜನಿಕರ ಹಣವನ್ನು ಲೂಟಿ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಸುರೇಶ್ ಕಂಠಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications