ಮಂಡ್ಯದ ಕೆ.ಆರ್. ಪೇಟೆಯಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಆತ್ಮಹತ್ಯೆ
ಮಂಡ್ಯ, ಡಿಸೆಂಬರ್ 7: ಕಳೆದ ಮೂರು ತಿಂಗಳ ಹಿಂದೆ ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೆ.ಆರ್.ಪೇಟೆ ತಾಲೂಕಿನ ಕೈಗೋನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ತಾಲೂಕಿನ ಕಸಬಾ ಹೋಬಳಿಯ ಹುರುಳಿ ಗಂಗನಹಳ್ಳಿ ಗ್ರಾಮದ ರಾಮಕೃಷ್ಣೇಗೌಡ ಅವರ ಪುತ್ರ ಮಂಜ ಎಂಬಾತ ಕಳೆದ ಮೂರು ತಿಂಗಳ ಹಿಂದೆ ಬಾಲಕಿಯೊಬ್ಬಳನ್ನು ಗಂಗನಹಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ಹೋಗಿದ್ದಾಗ ಪರಿಚಯ ಮಾಡಿಕೊಂಡಿದ್ದನು. ಈ ನಡುವೆ ಬಾಲಕಿಯನ್ನು ಪುಸಲಾಯಿಸಿ ಸೆ.16ರಂದು ಮೇಲುಕೋಟೆಯ ರಸ್ತೆಯಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದನು.

ಈ ಸಂಬಂಧ ಸೆ.19ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಮಂಜು ಪರಾರಿಯಾಗಿದ್ದನು. ಆತನ ತಂದೆ ರಾಮಕೃಷ್ಣೇಗೌಡ, ತಾಯಿ ಕಮಲಮ್ಮ, ತಾತ ಕ್ರಷರ್ ತಿಮ್ಮೇಗೌಡ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಇವರು ವಾರದ ಹಿಂದೆ ಜಾಮೀನಿನ ಮೇಲೆ ಹೊರ ಬಂದಿದ್ದರು. ಅತ್ಯಾಚಾರವನ್ನು ಸಾಬೀತುಪಡಿಸಲು ಪ್ರಕರಣದ ಸಾಕ್ಷಿಗಳನ್ನು ಡಿಎನ್ಎ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದು ಆರೋಪಿ ಮಂಜನೇ ಅತ್ಯಾಚಾರ ಮಾಡಿರುವುದು ಖಚಿತವಾಗಿತ್ತು.
ಈ ನಡುವೆ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಕೈಗೋನಹಳ್ಳಿ ಶನಿದೇವರ ಕೊಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಬಾಲಕಿಯ ಪೋಷಕರು ನಾಪತ್ತೆಯಾಗಿರುವ ಆರೋಪಿ ಮಂಜ ಮತ್ತು ಆತನ ತಂದೆ-ತಾಯಿಗಳು ನಮ್ಮ ಮಗಳನ್ನು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ತನಿಖೆಯಿಂದ ಸತ್ಯ ತಿಳಿಯಬೇಕಾಗಿದೆ.
ಘಟನೆ ಕುರಿತು ಪಟ್ಟಣ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅರುಣ್ಕುಮಾರ್ ಪ್ರಕರಣ ದಾಖಲಿಸಿ ಕೊಲೆಯೋ ಅಥವಾ ಅತ್ಯಾಚಾರದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications