ಭರ್ತಿಯಾಗುತ್ತಿದೆ ಕಾವೇರಿ ಒಡಲು, ಕೆಆರ್ಎಸ್ ನೀರಿನ ಮಟ್ಟ 112 ಅಡಿ
ಮಂಡ್ಯ, ಜುಲೈ 10 : ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 112 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷ ಜುಲೈ 10ರಂದು ಜಲಾಶಯದಲ್ಲಿ ಕೇವಲ 78.05 ಅಡಿ ನೀರಿನ ಸಂಗ್ರಹವಿತ್ತು.
ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಹಾರಂಗಿ ಜಲಾಶಯವೂ ಭರ್ತಿಯಾಗಿದ್ದು, ನಾಲ್ಕು ಗೇಟ್ಗಳ ಮೂಲಕ ನೀರನ್ನು ನದಿಗೆ ಬಿಡಲಾಗುತ್ತಿದೆ. ಆದ್ದರಿಂದ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಕೆಆರ್ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳು. ಜುಲೈ 10ರಂದು ಜಲಾಶಯದಲ್ಲಿ 112.70 ಅಡಿ ನೀರಿನ ಸಂಗ್ರಹವಿದೆ. ಜಲಾಶಯಕ್ಕೆ 22,437 ಕ್ಯುಸೆಕ್ ನೀರಿನ ಒಳ ಹರಿವು ಇದೆ. ಜಲಾಶಯದಿಂದ 3,499 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಕಾವೇರಿ ಒಡಲು ಭರ್ತಿಯಾಗುತ್ತಿದ್ದು ಮಂಡ್ಯ ಭಾಗದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಬರಗಾಲದ ಕಾರಣದಿಂದಾಗಿ ಸತತ ಮೂರು ವರ್ಷಗಳಿಂದ ಕೆಆರ್ಎಸ್ ಜಲಾಶಯ ಭರ್ತಿ ಆಗಿರಲಿಲ್ಲ. ಆದರೆ, ಈ ಬಾರಿ ಜೂನ್ ತಿಂಗಳಿನಲ್ಲಿಯೇ ನೀರಿನ ಮಟ್ಟ 100 ಅಡಿ ದಾಟಿತ್ತು.
ಕಾವೇರಿ ಕೊಳ್ಳದ ಪ್ರಮುಖ ಜಲಾಶಯವಾದ ಹಾರಂಗಿಯೂ ಭರ್ತಿಯಾಗಿದೆ. ಜಲಾಶಯದಿಂದ 8934 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾರಂಗಿಯಿಂದ ಕೆಆರ್ಎಸ್ಗೆ ನೀರು ಹರಿದುಬರುತ್ತಿದೆ. ಆದ್ದರಿಂದ, ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ಕೃಷಿ ಹೊರತುಪಡಿಸಿ ಕುಡಿಯುವ ನೀರು ಪೂರೈಕೆಗೂ ಕೆಆರ್ಎಸ್ ಪ್ರಮುಖ ಜಲಾಶಯವಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಪಾಂಡವಪುರ, ಮದ್ದೂರು, ಮಳವಳ್ಳಿ, ರಾಮನಗರ, ಚನ್ನಪಟ್ಟಣ ಮುಂತಾದ ಕಡೆಗೆ ಕುಡಿಯುವ ನೀರು ಕೆಆರ್ಎಸ್ನಿಂದ ಪೂರೈಕೆ ಆಗುತ್ತದೆ.
ಬೆಂಗಳೂರು ನಗರಕ್ಕೆ ಪ್ರತಿನಿತ್ಯ ಸುಮಾರು 900 ಎಂಎಲ್ಡಿ ನೀರು ಕುಡಿಯಲು ಬೇಕಾಗಿದೆ. ಜುಲೈ 10ರೊಳಗೆ ಜಲಾಶಯ ಬಹುತೇಕ ಭರ್ತಿಯಾಗಿದ್ದು ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಮುಂಗಾರು ಮಳೆ ಹೀಗೆ ಮುಂದುವರೆವರೆ ಜುಲೈ ಅಂತ್ಯದ ವೇಳೆಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ.












Click it and Unblock the Notifications